ಕಾರವಾರ: ಜಿಲ್ಲೆಯ ಅಲ್ಪಸಂಖ್ಯಾತರ ಎಲ್ಲಾ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗವು ಪರಿಶೀಲಿಸಿ ಅವುಗಳ ಪರಿಹಾರಕ್ಕೆ ಸೂಕ್ತವಾಗಿ ಸ್ಪಂದಿಸಲಿದೆ ಎಂದು ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ, ಜಿಲ್ಲೆಯ ಅಲ್ಪಸಂಖ್ಯಾತರ ಇಲಾಖೆಯೆ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಖಬರಸ್ತಾನದ ಕೊರತೆಯಿರುವ ಹಾಗೂ ಕದ್ರಾದಲ್ಲಿ ಅತಿಕ್ರಮಣ ಜಮೀನಿನಲ್ಲಿರುವ ಮಸೀದಿ ಮತ್ತು ಖಬರಸ್ಥಾನದ ಬಗ್ಗೆ ಸಲ್ಲಿಕೆಯಾದ ದೂರು ಕುರಿತಂತೆ ಮತನಾಡಿದ ಅವರು, ನಿರ್ದಿಷ್ಟವಾಗಿ ಎಲ್ಲಿ ಖಬರಸ್ಥಾನಗಳ ಕೊರತೆಯಿದೆ ಎಂಬ ಬಗ್ಗೆ ವಕ್ಫ್ ಮಂಡಳಿಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ತಿಳಿಸಿದರು.
ಈ ಕುರಿತಂತೆ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸ್ಮಶಾನ ಭೂಮಿಗಳಿಗೆ ಜಾಗ ಕಾಯ್ದಿರಿಸುವುದು ಕಂದಾಯ ಇಲಾಖೆಗೆ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದ್ದು, ಖಬರಸ್ಥಾನ ಬಗ್ಗೆ ಮನವಿ ನೀಡಿದಲ್ಲಿ ಈ ಬಗ್ಗೆ ಆದ್ಯತೆಯಲ್ಲಿ ಪರಿಶೀಲಿಸಿ, ಅವಶ್ಯವಿರುವ ಕಡೆಯಲ್ಲಿ ಸರ್ಕಾರಿ ಭೂಮಿ ಲಭ್ಯವಿಲ್ಲವಾದಲ್ಲಿ ಖಾಸಗಿಯವರಿಂದ ಖರೀದಿಸಿ, ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅತಿಕ್ರಮಣ ಜಾಗಗಳಲ್ಲಿರುವ ಜಮೀನುಗಳ ಕುರಿತಂತೆ ಅರಣ್ಯ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದರು.
ಕಾರವಾರದ ಜಿಲ್ಲಾ ಕೇಂದ್ರದಲ್ಲಿ ಶಾದಿ ಮಹಲ್ ಮತ್ತು ಮೌಲನಾ ಆಜಾದ್ ಭವನ ನಿರ್ಮಾಣ, ಶಿರಸಿ ಮತ್ತು ಭಟ್ಕಳದಲ್ಲ್ಲಿ ಮೌಲನಾ ಆಜಾದ್ ಭವನ ನಿರ್ಮಾಣ, ಅಂಕೋಲದಲ್ಲಿ ಮೌಲಾನಾ ಆಜಾದ್ ಶಾಲೆ, ಶಿರವಾಡದಲ್ಲಿ ಖಬರಸ್ಥಾನ್ಗೆ ತೆರಳಲು ರಸ್ತೆ ಸಮಸ್ಯೆ ಇರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳ ಕುರಿತಂತೆ ವಕ್ಫ್ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಬಳಿ ಹಾಗೂ ಉಪ ವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್ಗಳ ಬಳಿ ಚರ್ಚಿಸಿ ಸೂಕ್ತ ಪರಿಹಾರ ಪಡೆಯುವಂತೆ ಹಾಗೂ ಕಂದಾಯ ಇಲಾಖೆಯ ಸಭೆಗೆ ಜಿಲ್ಲಾ ಅಲ್ಪ ಸಂಖ್ಯಾತರ ಅಧಿಕಾರಿ ಹಾಗೂ ವಕ್ಫ್ ಅಧಿಕಾರಿಗಳು ಹಾಜರಾಗುವಂತೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿರುವ ವಕ್ಫ್ ಆಸ್ತಿಯನ್ನು ಗುರುತಿಸಿ ರಕ್ಷಿಸುವ ಕುರಿತಂತೆ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯ ಸಭೆಯನ್ನು ನಿಯಮಿತವಾಗಿ ನಡೆಸುವುದರ ಮೂಲಕ ವಕ್ಫ್ ಆಸ್ತಿ ರಕ್ಷಣೆ ಮಾಡುವಂತೆ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯ ಯೋಜನೆಗಳ ಬಗ್ಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸುವಂತೆ ತಿಳಿಸಿದರು.
ಕಾರವಾರದ ಸೈಂಟ್ ಮೈಕಲ್ ಶಾಲೆಯ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡಿಸುತ್ತಿರುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕ್ರಿಶ್ಚಿಯನ್ ಸಮುದಾಯದವರು ಮನವಿ ಮಾಡಿದರು ಹಾಗೂ ಕಾರವಾರದಲ್ಲಿ ಗುರುದ್ವಾರ ನಿರ್ಮಾಣಕ್ಕೆ ತೊಂದರೆ ಮಾಡುತ್ತಿರುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಖ್ ಸಮುದಾಯದ ಮಹಿಳೆ ಪ್ರಕಾಶ್ ಕೌರ್À ಸಭೆಯಲ್ಲಿ ಮನವಿ ಮಾಡಿದರು.
ರಾಜ್ಯದಲ್ಲಿ ಅಲ್ಪ ಸಂಖ್ಯಾತರ ಅಭಿವೃಧ್ದಿ ಕಾರ್ಯಕ್ರಮಗಳಿಗೆ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಮೀಸಲಿಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಿವಿಧ ಯೋಜನೆಗಳಲ್ಲಿ ನೀಡುವ ಗುರಿಗಳ ಸಂಖ್ಯೆಯನ್ನು ಹಾಗೂ ಅನುದಾನದ ಮೊತ್ತವನ್ನು ಹೆಚ್ಚಿಸುವಂತೆ ಮನವಿ ಮಾಡಲಾಗಿದೆ.
ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸುವಾಗ ಆನ್ಲೈನ್ನಲ್ಲಿ ಅತ್ಯಂತ ಪ್ರಮುಖ ದಾಖಲೆಗಳನ್ನು ಮಾತ್ರ ಪಡೆದು, ಸೌಲಭ್ಯ ಮಂಜೂರು ಸಮಯದಲ್ಲಿ ಹೆಚ್ಚಿನ ಅಗತ್ಯ ದಾಖಲೆಗಳನ್ನು ಪಡೆಯಲು ಬದಲಾವಣೆ ತರುವಂತೆ, ಸಾಮಾನ್ಯ ಮೀಸಲಾತಿಯಲ್ಲಿ ಉದ್ಯೋಗ ಪಡೆಯುವವರಿಗೆ ಸಿಂಧುತ್ವ ಪ್ರಮಾಣಪತ್ರದಿಂದ ವಿನಾಯತಿ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ ಎಂದರು.
ಅಲ್ಪ ಸಂಖ್ಯಾತ ಸಮುದಾಯವರು ಅತ್ಯಂತ ಭಾವನಾತ್ಮಕ ಹಾಗೂ ದುಡುಕು ಸ್ವಭಾವದವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಪಾಲನೆ ಮತ್ತು ಕೋÃಮು ಸೌಹಾರ್ದತೆಗೆ ಯಾವುದೆ ಭಂಗ ಬಾರದಂತೆ ಎಲ್ಲರೊಂದಿಗೆ ಬೆರೆತು ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಅಬ್ದುಲ್ ಅಜೀಂ, ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಸಮುದಯದ ಜನತೆಗೆ ತಲುಪಿಸುವ ಜೊತೆಗೆ ಸೌಲಭ್ಯಗಳು ತಲುಪಿರುವ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್, ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗ ಅಧ್ಯಕ್ಷರ ವಿಶೇಷಾಧಿಕಾರಿ ಮುಜಿಬುಲ್ಲಾ ಜಫಾರಿ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಸ್.ಯು. ಪೂಜಾರ್, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಅನಿಸ್ ತಹಸೀಲ್ದಾರ್ ಮತ್ತಿತರರು ಇದ್ದರು.
ಜಿಲ್ಲೆಯ ವಿವಿಧ ಅಲ್ಪ ಸಂಖ್ಯಾತ ಸಮುದಾಯಗಳ ಪ್ರತಿನಿಧಿಗಳು, ಸಾರ್ವಜನಿಕರು ಮತ್ತಿತರರು ಭಾಗವಹಿಸಿದ್ದರು.