ಭಟ್ಕಳ: ದೇಶದಲ್ಲಿ ಕಿಚ್ಚು ಹಚ್ಚಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಎನ್ಆರ್ಸಿ ವಿರೋಧಿ ಪ್ರತಿಭಟನೆ ಭಟ್ಕಳದಲ್ಲಿ ಸದ್ಯಕ್ಕೆ ಆರುವ ಲಕ್ಷಣ ಗೋಚರಿಸುತ್ತಿಲ್ಲ. ಮುಂಬರುವ ದಿನಗಳಲ್ಲಿ ಪ್ರತಿಭಟನೆಯನ್ನು ತೀವೃಗೊಳಿಸುವ ಸಾಧ್ಯತೆ ದಟ್ಟವಾಗುತ್ತಿದ್ದು, ಇಲ್ಲಿನ ಅಲ್ಪಸಂಖ್ಯಾತ ಯುವಕ ಸಂಘಗಳು ಪ್ರತಿ ವರ್ಷ ಆಯೋಜಿಸುತ್ತ ಬಂದಿರುವ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ಮುಂದಿನ 6 ತಿಂಗಳವರೆಗೆ ರದ್ದುಪಡಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.
ಜ.2ರಿಂದ ಆಝಾದ್ ಯೂಥ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಆರಂಭವಾಗಬೇಕಾಗಿದ್ದ ಎಸ್.ಎಮ್.ಯಾಹ್ಯಾ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿಯನ್ನು ಸಮುದಾಯದ ಪ್ರಮುಖರ ಸಲಹೆಯ ಮೇರೆಗೆ ರದ್ದುಪಡಿಸಿರುವ ಬಗ್ಗೆ ತಿಳಿದು ಬಂದಿದೆ. ಅಲ್ಲದೇ ಈ ವರ್ಷ ತಾಲೂಕಿನಲ್ಲಿ ನಡೆಯಬೇಕಾಗಿದ್ದ ಕ್ರಿಕೆಟ್, ಕಬಡ್ಡಿ ಸೇರಿದಂತೆ ಬಹುತೇಕ ಎಲ್ಲ ಕ್ರೀಡಾ ಪಂದ್ಯಾವಳಿಯನ್ನು ಮುಂದೂಡಲಾಗಿದೆ.
ದುಬೈನಲ್ಲಿ ನಡೆಯಬೇಕಾಗಿದ್ದ ಭಟ್ಕಳ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನೂ ಸಿಎಎ ಕಾರಣದಿಂದ ಸ್ಥಗಿತಗೊಳಿಸಲಾಗಿದೆ. ಭಟ್ಕಳದಲ್ಲಿ ಪ್ರತಿ ವರ್ಷ ಕಬಡ್ಡಿ, ಕ್ರಿಕೆಟ್ಗಾಗಿ ಲಕ್ಷಾಂತರ ರುಪಾಯಿ ವಿನಿಯೋಗಿಸಲಾಗುತ್ತಿದ್ದು, ಇದೀಗ ಪಂದ್ಯಾವಳಿಯ ರದ್ಧತಿಯ ಕಾರಣ ಈಗಾಗಲೇ ಸಿದ್ಧತೆ ಮಾಡಿಕೊಂಡವರು ಹಾನಿಗೊಳಗಾಗಿದ್ದಾರೆ. ಆದರೆ ಇದಾವುದನ್ನೂ ಲೆಕ್ಕಿಸದೇ ಪ್ರತಿಭಟನೆಯ ತೀವೃತೆಯನ್ನು ಉಳಿಸಿಕೊಳ್ಳುವ ಪ್ರಯತ್ನ ತೆರೆಮರೆಯಲ್ಲಿ ಸಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಲಭಿಸಿದ್ದು, ಕಟ್ಟೆಚ್ಚರ ವಹಿಸಿದ್ದಾರೆ.
ಭಟ್ಕಳದಲ್ಲಿ ಕ್ರೀಡೆಗಳು ವಿವಿಧ ಧರ್ಮಗಳ ನಡುವೆ ಸೌಹಾರ್ದತೆಯ ಕೊಂಡಿಯಾಗಿ ಪ್ರಚಲಿದಲ್ಲಿದ್ದು, ಪ್ರತಿ ವರ್ಷ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಕಬಡ್ಡಿ ಹಾಗೂ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿತ್ತು. ಈ ಪಂದ್ಯಾವಳಿಯಲ್ಲಿ ಹಿಂದೂ, ಮುಸ್ಲೀಮ್ ಎಲ್ಲರೂ ಭಾಗವಹಿಸುತ್ತಿದ್ದರು. ಇದೀಗ ವಿವಿಧ ಧರ್ಮದ ಜನರನ್ನು ಬೆಸೆಯುತ್ತಿದ್ದ ಕ್ರೀಡೆಗಳ ಸುತ್ತ ಬೇಲಿ ನಿರ್ಮಾಣವಾದಂತಾಗಿದ್ದು, ಮುಂದೇನು ಎಂಬ ಪ್ರಶ್ನೆ ಉದ್ಭವವಾಗಿದೆ.