ಕಾರವಾರ : 12ನೇ ಶತಮಾನವನ್ನು ಶರಣರ ಕಾಲವೆಂದು ಪರಿಗಣಿಸಲಾಗಿದೆ. ಬಸವಣ್ಣರಂತೆ ಅಂಬಿಗರ ಚೌಡಯ್ಯನವರು ಪ್ರಮುಖ ವಚನಕಾರರು. ಅವರು ನೇರ, ನಿಷ್ಠೂರ ವಚನಗಳಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿದರು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹೇಳಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಸಮಾಜದಲ್ಲಿನ ಸಣ್ಣ ಸಣ್ಣ ಸಮುದಾಯಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಆ ಸಮುದಾಯದ ದಾರ್ಶನಿಕರ ಜಯಂತಿಗಳನ್ನು ಆಚರಿಸುವುದು ಅವಶ್ಯವಾಗಿದೆ. ಎಲ್ಲಾ ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾದಾಗ ಮಾತ್ರ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯ ಎಂದು ನುಡಿದರು.
ಸಮುದಾಯದ ಮುಖಂಡ ಗಣಪತಿ ಮಾಂಗ್ರೆ ಮಾತನಾಡಿ, ಅಂಬಿಗರ ಚೌಡಯ್ಯ ಅವರು ಕಾಯಕದ ಜೊತೆಗೆ ಹಾಕಿ ಕೊಟ್ಟ ಜೀವನದ ಮೌಲ್ಯಗಳು ಸರ್ವಕಾಲಿಕವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ. ಸಮುದಾಯ 12 ನೇ ಶತಮಾನದಿಂದ ಸಮಾಜದಲ್ಲಿ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದರು.
ಮಾಣೇಶ್ವರ ನಾಯ್ಕ ನಿಜಶರಣ ಅಂಬಿಗರ ಚೌಡಯ್ಯ ಕುರಿತು ಉಪನ್ಯಾಸ ನೀಡಿ ಅಂಬಿಗರ ಚೌಡಯ್ಯನವರು ಮಹಾನ್ ದಾರ್ಶನಿಕರು ಸಮಾಜದ ಒಳಿತಿಗಾಗಿ ರಚಿಸಿರುವ ಅವರ ವಚನಗಳೇ ಪ್ರತಿಯೊಬ್ಬ ಯುವಪೀಳಿಗೆಗೂ ದಾರಿ ದೀಪವಾಗಿದೆ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಕೆ. ಎಂ ರಾಮಚಂದ್ರ, ನಗರಸಭೆ ಪೌರಾಯುಕ್ತ ಚಂದ್ರಮೌಳಿ ಸಮುದಾಯದ ಮುಖಂಡ ಬಾಬು ಅಂಬಿಗ ಮತ್ತಿತರರು ಉಪಸ್ಥಿತರಿದ್ದರು.