ಭಟ್ಕಳದ ಸಿಟಿಲೈಟ್ ಹೊಟೇಲ್ ಉದ್ಯಮಿ ನೂರುಲ್ ಅಮೀನ್ ರಸ್ತೆ ಅಪಘಾತದಲ್ಲಿ ಸಾವು
ಭಟ್ಕಳ:ಕಳೆದ 25ವರ್ಷಗಳಿಂದ ಯಶಸ್ವಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಹೋಟೇಲ್ ಸಿಟಿಲೈಟ್ ಮಾಲಿಕ ನೂರುಲ್ ಅಮೀನ್ ಮುಲ್ಲಾ(48) ಬೈಂದೂರು ಬಳಿಯ ನಾಯಕನಕಟ್ಟೆ ಎಂಬಲ್ಲಿ ಶನಿವಾರ 10ಗಂಟೆ ಸುಮಾರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಗಿ ವರದಿಯಾಗಿದೆ.
ಶುಕ್ರವಾರದಂದು ತನ್ನ ಸಹೋದರನ್ನು ಬಿಡಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಅವರು ಅಲ್ಲಿಂದ ವಾಪಸ್ ಭಟ್ಕಳದತ್ತ ಹಿಂದಿರುಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಪಘಾತದ ಸಂದರ್ಭದಲ್ಲಿ ಇವರು ಒಬ್ಬರೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅಪಘಾತಕ್ಕೀಡಾದ ಇನ್ನೊಂದು ಕಾರಿನಲ್ಲಿದ್ದ ಮಹಿಳೆಯೊಬ್ಬರ ಸಹಿತ ಮೂವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗಂಭೀರ ಗಾಯಗೊಂಡಿದ್ದ ನೂರುಲ್ ಅಮೀನ್ ಅವರನ್ನು ಕೂಡಲೇ ಕುಂದಾಪುರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ನಂತರ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ಮೃತರ ತಂದೆ ಅಮೀನುದ್ದೀನ್ ಶೀರೂರಿನಲ್ಲಿ ವಾಸಿಸುತ್ತಿದ್ದು ಮೃತರು ತಮ್ಮ ಇಬ್ಬರು ಪತ್ನಿಯರೊಂದಿಗೆ ಭಟ್ಕಳದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.