ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ನಮ್ಮ ಮೆಟ್ರೋ ಪಿಲ್ಲರ್ ಒಂದರಲ್ಲಿ ಅಳವಡಿಸಿದ್ದ ಕಬ್ಬಿಣದ ಸಲಾಕೆಗಳು ಏಕಾಏಕಿ ಬಿದ್ದ ಪರಿಣಾಮ ಸ್ಕೂಟರ್ನಲ್ಲಿ ತೆರಳುತ್ತಿದ್ದ ತಾಯಿ ಹಾಗೂ ಮಗು ಮೃತಪಟ್ಟಿರುವ ದಾರುಣ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಈ ದುರ್ಘಟನೆಯಲ್ಲಿ ಹೆಣ್ಣೂರಿನಲ್ಲಿರುವ ಡಿಎಕ್ಸ್ ಮ್ಯಾಕ್ಸ್ ಅಪಾರ್ಟ್ಮೆಂಟ್ ನಿವಾಸಿ ತೇಜಸ್ವಿನಿ(28) ಮತ್ತು ಎರಡೂವರೆ ವರ್ಷದ ಮಗು ವಿಹಾನ್ ಸಾವನ್ನಪ್ಪಿದ್ದು, ಪತಿ ಲೋಹಿತ್ ಕುಮಾರ್ ಮತ್ತು ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ಗದಗ ಜಿಲ್ಲೆಯ ತೇಜಸ್ವಿನಿ ಮತ್ತು ಲೋಹಿತ್ ಕುಮಾರ್ ಮಾನ್ಯತಾ ಟೆಕ್ಪಾರ್ಕಿನಲ್ಲಿರುವ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಗಳಾಗಿದ್ದು, ದಂಪತಿಗೆ ಅವಳಿಜವಳಿ ಮಕ್ಕಳಿದ್ದರು. ಪ್ರತಿದಿನ ದಂಪತಿ ಕೆಲಸಕ್ಕೆ ಹೋಗುವ ಮುನ್ನ ನಾಗವಾರದಲ್ಲಿರುವ ಪ್ಲೇ ಹೋಂಗೆ ಮಕ್ಕಳನ್ನು ಬಿಡುತ್ತಿದ್ದರು.
ಅದರಂತೆ ಮಂಗಳವಾರ ಬೆಳಗ್ಗೆ ಮಕ್ಕಳನ್ನು ಕರೆದುಕೊಂಡು ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ನಾಗವಾರದ ಬಳಿ ಮೆಟ್ರೋ ಪಿಲ್ಲರ್ ಸರಳುಗಳು ಏಕಾಏಕಿ ಕುಸಿದು ಇವರ ಮೇಲೆ ಉರುಳಿ ಬಿದ್ದ ಪರಿಣಾಮ ನಾಲ್ವರೂ ಗಾಯಗೊಂಡರು. ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ತಾಯಿ-ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮತ್ತೊಂದು ಮಗು ಹಾಗೂ ಪತಿ ಲೋಹಿತ್ ಕುಮಾರ್ ಅವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ಸಂಬಂಧ ಬಿಎಂಆರ್ ಸಿಎಲ್ ಅಧಿಕಾರಿಗಳು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾರ್ವಜನಿಕರ ಆಕ್ರೋಶ
ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪ ರ್ಕಿಸುವ ಸುಮಾರು 37 ಕಿಲೋ ಮೀಟ ಉದ್ದದ ಬ್ಲೂಲೈನ್ ಮಾರ್ಗದ ಕಾಮಗಾರಿಯನ್ನು ಎನ್ಸಿಸಿ ಕಂಪೆನಿ ನಡೆಸುತ್ತಿದೆ. ಆದರೆ, ಈ ಮಾರ್ಗ ದಲ್ಲಿ ಲಕ್ಷಾಂತರ ವಾಹನಗಳು ಸಂಚರಿಸುತ್ತಿದ್ದು ಸರಿಯಾದ ಸುರಕ್ಷತಾ ಕ್ರಮಗಳನ್ನು ನಮ್ಮ ಮೆಟ್ರೋ ಪಾಲಿಸದಿರುವ ಕಾರಣ ಈ ಅವಘಡ ನಡೆದಿದೆ ಎಂದು ವಾಹನ ಸವಾರರು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.