ಹೊನ್ನಾವರ : ದೇಶದ್ರೋಹ ಮಾಡುವ ಸಂಘಟನೆಯನ್ನ ಮಾತ್ರ ಶಮನ ಮಾಡುವ ಬಗ್ಗೆ ಹೇಳಿದ್ದೇವೆ. ಮಾಧ್ಯಮದವರು ಬಿಜೆಪಿಯವರು ನಮ್ಮ ಪ್ರಣಾಳಿಕೆ ಸರಿ ನೋಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಗುರುವಾರ ಹೊನ್ನಾವರದ ರಾಮತೀರ್ಥ ಬಳಿ ಮಾದ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಕರಾವಳಿಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಪ್ರಧಾನಿ ಮೋದಿ ಅವರು ಈ ದೇಶದಲ್ಲಿ ಏನು ಬಡವರಿಗೆ ಸಹಾಯ ಮಾಡಿದ್ದೇನೆ ಎಂದು ಹೇಳಿಲ್ಲ. ಹದಿನೈದು ಲಕ್ಷ ಅಕೌಂಟ್ ಗೆ ಹಣ ಹಾಕಿದ ಬಗ್ಗೆ, ಬೆಲೆ ಏರಿಕೆ ಬಗ್ಗೆ ಹೇಳುವುದಿಲ್ಲ. ಬಿಜೆಪಿಗರು ಭಾವನೆ ಮೇಲೆ ಹೋದರೆ ಕಾಂಗ್ರೆಸ್ ಬದುಕಿನ ಮೇಲೆ ಹೋಗುತ್ತಿದೆ ಎಂದರು.
ಹನುಮಾನ್ ಯಾರ ಆಸ್ತಿ ಅಲ್ಲ, ಹಿಂದುತ್ವ ನಮ್ಮ ಆಸ್ತಿಯಾಗಿದೆ. ನಾನು ಹಿಂದು, ಸಿದ್ದರಾಮಯ್ಯ ಸಹ ಹಿಂದೂ ನಾವು ಎಲ್ಲಾ ಹಿಂದು ಧರ್ಮದ ಆಚರಣೆ ಮಾಡುತ್ತೇವೆ. ಬಂಗಾರಪ್ಪ ಸಿಎಂ ಆದಾಗ ಆರಾಧನ ಸ್ಕೀಮ್ ತಂದು ಹಳ್ಳಿಯಲ್ಲಿರುವ ದೇವಸ್ಥಾನ ಬೆಳೆಸಿದರು. ನಾವು ಅಧಿಕಾರಕ್ಕೆ ಬಂದರೆ ಹಳ್ಳಿಗಳಲ್ಲಿನ ದೇವಸ್ಥಾನ, ಆಂಜನೇಯ ದೇವಸ್ಥಾನಗಳ ಅಭಿವೃದ್ಧಿ ಮಾಡುತ್ತೇವೆ.
ಹಿಂದು ಯುವಕರಿಗೆ ಶಕ್ತಿ ಕೊಡಲು ಗರುಡ ಸ್ಥಾಪನೆ ಮಾಡುವ ಕೆಲಸವನ್ನ ಕಾಂಗ್ರೆಸ್ ಪಕ್ಷ ಮಾಡುತ್ತದೆ ಎಂದರು. ಬಿಜೆಪಿಯವರು ಹನುಮಾನ್ ಚಾಲೀಸ್ ಬಗ್ಗೆ ಹೇಳುತ್ತಾರೆ. ನಾನು ಹನುಮಾನ್ ಚಾಲೀಸ್ ಹೇಳಲಾ ಎಂದು ಹೇಳಿದ ಡಿಕೆಶಿ ನಮ್ಮ ಪ್ರಣಾಳಿಕೆಯನ್ನ ಸರಿಯಾಗಿ ಒಮ್ಮೆ ನೋಡಲಿ. ಜಾತ್ಯಾತೀತ ತತ್ವಕ್ಕೆ ದ್ರೋಹ ಮಾಡುವವರನ್ನ ದೂರ ಇಡುವ ಕಾರ್ಯ ಮಾಡುತ್ತೇವೆ ಎಂದು ಮಾತ್ರ ಹೇಳಿದ್ದೇವೆ ಎಂದು ಅವರು ಹೇಳಿದರು.