ಚುನಾವಣಾ ರ್ಯಾಲಿಯಲ್ಲಿ ಐಎಎಫ್ ಹೆಲಿಕಾಪ್ಟರ್ ಬಳಸಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ; ಪ್ರಧಾನಿ ಮೋದಿ ವಿರುದ್ಧ ದೂರು ದಾಖಲು
ಹೊಸದಿಲ್ಲಿ: ಆಂಧ್ರ ಪ್ರದೇಶದ ಪಾಲ್ನಾಡುವಿನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಭಾರತೀಯ ವಾಯು ಪಡೆ (ಐಎಎಫ್ )ಯ ಹೆಲಿಕಾಪ್ಟರ್ ಬಳಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸಾಕೇತ್ ಗೋಖಲೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಸಾಕೇತ ಗೋಖಲೆ ಅವರು ಮಾರ್ಚ್ 18ರಂದು ಚುನಾವಣಾ ಆಯೋಗಕ್ಕೆ ಈ ದೂರು ಸಲ್ಲಿಸಿದ್ದಾರೆ.
ಚುನಾವಣಾ ಪ್ರಚಾರಕ್ಕೆ ರಾಜ್ಯದ ಆಡಳಿತ ಯಂತ್ರವನ್ನು ಬಳಸುವುದನ್ನು ನಿಯಮಗಳು ನಿಷೇಧಿಸುತ್ತವೆ. ನಿರ್ದಿಷ್ಟವಾಗಿ ಇದೇ ಕಾರಣಕ್ಕೆ 1975ರಲ್ಲಿ ಇಂದಿರಾ ಗಾಂಧಿ ಅವರು ಅನರ್ಹಗೊಂಡಿದ್ದರು ಎಂದು ಅವರು ತಿಳಿಸಿದ್ದಾರೆ. ಬಿಜೆಪಿ ಐಎಎಫ್ ಹೆಲಿಕಾಪ್ಟರ್ಗೆ ಬಾಡಿಗೆ ಪಾವತಿಸಿದ್ದರೆ, ಯಾಕೆ ಐಎಎಫ್ ಹೆಲಿಕಾಪ್ಟರೇ ಅಗತ್ಯವಿತ್ತು ಎಂಬುದನ್ನು ಚುನಾವಣಾ ಆಯೋಗ ನಮಗೆ ತಿಳಿಸಬೇಕು ಎಂದು ಅವರು ಹೇಳಿದ್ದಾರೆ. ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಾಗ ಚುನಾವಣಾ ಆಯೋಗ, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿತ್ತು ಎಂದು ಸಾಕೇತ್ ಗೋಖಲೆ ತಿಳಿಸಿದರು.