ಕಾರವಾರ: ನಗರದ ರವೀಂದ್ರನಾಥ ಟಾಗೋರ್ ಕಡಲ ತೀರದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
ಅವರು ಇಂದು ಬೀಚ್ ನಲ್ಲಿ ಕಸ ಸ್ವಚ್ಛಗೊಳಿಸುವ ವಾಹನದ ಕಾರ್ಯವನ್ನು ವೀಕ್ಷಿಸಿ ಮಾತನಾಡಿದರು.
ರವೀಂದ್ರನಾಥ ಟಾಗೋರ್ ಕಡಲ ತೀರದ ಸೌಂದರ್ಯವನ್ನು ಕಾಪಾಡಲು ಈ ಹಿಂದೆ ನೀಡಲಾಗಿದ್ದ ಬೀಚ್ ಕ್ಲಿನಿಂಗ್ ಯಂತ್ರವನ್ನು ಪುಣೆ ಇಂದ ಆಗಮಿಸಿದ್ದ ತಂತ್ರಜ್ಞರು ದುರಸ್ತಿಗೊಳಿಸಿದ್ದು, ಈ ಯಂತ್ರದ ಮೂಲಕ ಪ್ರತಿದಿನ ಬೀಚ್ ನ್ನು ಸ್ವಚ್ಛಗೊಳಿಸುವ ಮೂಲಕ ಬೀಚ್ ನಲ್ಲಿ ನೈರ್ಮಲ್ಯ ಕಾಪಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ಬೀಚ್ ನಲ್ಲಿ ಪ್ರವಾಸಿಗರು ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಾಲಯ ನಿರ್ಮಾಣದ ಅಗತ್ಯತೆಯನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಬೀಚ್ ನಲ್ಲಿ ಸಿ.ಆರ್.ಜಡ್ ನಿಯಮಗಳ ಉಲ್ಲಂಘನೆ ಆಗದಂತೆ ಶೌಚಾಲಯ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.