ಭಟ್ಕಳ: ಚಲಿಸುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದು ಅಪರಿಚಿತ ಯುವಕ ಸಾವನ್ನಪ್ಪಿದ ಘಟನೆ ಸೊಮವಾರ ಸಂಜೆ ಮುರುಡೇಶ್ವದಲ್ಲಿ ಜರುಗಿದೆ.
ಕೆಲವರು ಇದು ಆತ್ಮಹತ್ಯೆಯಾಗಿದೆ ಎಂದು ಹೇಳುತ್ತಿದ್ದರೆ, ಇದು ಆತ್ಮಹತ್ಯೆ ಪ್ರಕರಣವಲ್ಲ ಇದೊಂದು ಅಪಘಾತ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾರವಾರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಪಂಚಗಂಗಾ ಎಕ್ಸ್ಪ್ರೆಸ್ ರೈಲು ಮುರ್ಡೇಶ್ವರ ಮೂಲಕ ಹಾದು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ರೈಲು ಡಿಕ್ಕಿಯಿಂದಾಗಿ, ಮೃತನ ಮುಖಕ್ಕೆ ಸಾಕಷ್ಟು ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮೃ ಯುವಕ ಹಲವು ದಿನಗಳಿಂದ ರೈಲ್ವೇ ಪ್ಲಾಟ್ಫಾರ್ಮ್ನಲ್ಲಿ ಮಲಗಿಕೊಂಡಿರುತ್ತಿದ್ದ, ಜನರ ಬಳಿ ಭಿಕ್ಷೆ ಬೇಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ಈ ವ್ಯಕ್ತಿ ಯಾರು, ಎಲ್ಲಿಂದ ಬಂದ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹಳಿ ದಾಟುವ ವೇಳೆ ಹಠಾತ್ ರೈಲು ಬಂದಿದ್ದರಿಂದ ರೈಲಿಗೆ ಡಿಕ್ಕಿ ಹೊಡೆದು ಮೃತಪಟ್ಟಿರುವುದು ಪತ್ತೆಯಾಗಿದೆ.
ಮೃತದೇಹವನ್ನು ಮುರ್ಡೇಶ್ವರ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದ್ದು, ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.