ನಿರಾಶಾವಾದಿ ರಾಜಕಾರಣದ ಹುಟ್ಟು

Source: sonews | By Staff Correspondent | Published on 1st December 2019, 11:34 PM | National News | Special Report |

ಗೋಪಾಲ್ ಗುರು

ಭಾರತದ ರಾಜಕೀಯದ ಸಾಂಸ್ಥಿಕ ಸನ್ನಿವೇಶದಲ್ಲಿ  ಒಂದು ಬಗೆಯ ನಿರಾಶಾದಾಯಕ ಧೋರಣೆಗಳು ಬೆಳೆಯುತ್ತಿರುವುದು ಕಳವಳಕಾರಿಯಾಗಿದೆ. ಈ ಧೋರಣೆಗಳು ಪ್ರಕ್ರಿಯೆಗಳಲ್ಲೂ ಮತ್ತು ಸಾರಭೂತ ಮಟ್ಟಗಳೆರಡರಲ್ಲೂ ವ್ಯಕ್ತವಾಗುತ್ತಿವೆ. ಪ್ರಕ್ರಿಯಾತ್ಮಕ ವಿಷಯಗಳಲ್ಲಿ ಸ್ಥಾಪಿತವಾಗಿರುವ ವಿಧಿ ವಿಧಾನಗಳನ್ನು ತಮಗೆ ಸೂಕ್ತವಾಗುವಂತೆ ಬಗ್ಗಿಸಿಕೊಳ್ಳುವಂತಹ ಹಾಗೂ ಅಕಾಲದಲ್ಲಿ ಪ್ರಮಾಣ ವಚನ ಬೋಧಿಸುವುದು ಇತ್ಯಾದಿಗಳೆಲ್ಲಾ ಸಂವಿಧಾನಿಕ ನೀತಿ-ನಿಯಮಗಳ ಉಲ್ಲಂಘನೆಯೇ ಆಗಿದೆ. ಇನ್ನು ಸಾರಭೂತ ಮಟ್ಟದಲ್ಲಿ ಕೆಲವು ಚುನಾಯಿತ ಶಾಸಕರು ಪಕ್ಷ ಸಿದ್ಧಾಂತಗಳ ಪರಿವೇ ಇಲ್ಲದೆ ಅಧಿಕಾರ ರೂಢ ಅಥವಾ ಅಧಿಕಾರಕ್ಕೇರಲಿರುವ ಪಕ್ಷಗಳಿಗೆ ಹಾರಿಹೋಗುವುದರಲ್ಲಿ ಆ ಬಗೆಯ ಪ್ರವೃತ್ತಿಗಳು ವ್ಯಕ್ತವಾಗುತ್ತಿವೆ. ಇವೆಲ್ಲವೂ ಮಹಾರಾಷ್ಟ್ರದಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳಲ್ಲಿ ಇನ್ನೂ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ಈ ಧೋರಣೆಗಳು ಸ್ವೇಚ್ಚೆ, ದ್ರೋಹ ಮತ್ತು ರಹಸ್ಯಗಳ ಸ್ವರೂಪದಲ್ಲೂ ಸಹ ಅಭಿವ್ಯಕ್ತಗೊಳ್ಳುತ್ತವೆ. ಹೀಗೆ ಈ ಧೋರಣೆಗಳು ಸಾಂವಿಧಾನಿಕ ನಿಯಮಗಳ ಮೇಲೆ ದಾಳಿ ನಡೆಸುತ್ತಾ ಶಾಸಕರನ್ನು ಎಲ್ಲಾ ನೈತಿಕ ಒತ್ತಡಗಳಿಂದಲೂ ಮುಕ್ತಗೊಳಿಸುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಸಂವಿಧಾನವು ನಿಗದಿ ಮಾಡಿರುವ ಹಾಗೂ ನ್ಯಾಯಾಲಯಗಳು ಮತ್ತೆ ಮತ್ತೆ ಅನುಮೋದಿಸಿರುವ ವಿಧಿವಿಧಾನಗಳನ್ನು ಪಾಲಿಸಲೇ ಬೇಕಾದ ಒತ್ತಡಗಳನ್ನೇನೂ ಶಾಸಕರುಗಳು ಬಿಡಿಬಿಡಿಯಾಗಿ ಅನುಭವಿಸುವುದಿಲ್ಲ. ಮಹಾರಾಷ್ಟ್ರದಲ್ಲಿ ಸರ್ಕಾರದ ರಚನೆಯ ಬಗ್ಗೆ ಸುಪ್ರೀಂ ಕೋರ್ಟು ಕೊಟ್ಟ ಇತ್ತೀಚಿನ ತೀರ್ಪಿನ ಹಿನ್ನೆಲೆಯೂ ಇದಕ್ಕಿದೆ.

ಸ್ಪಷ್ಟ ಜನಾದೇಶವಿಲ್ಲದಂತ ಅನಿಶ್ಚಿತ ರಾಜಕೀಯ ಸಂದರ್ಭಗಳು ಸಂಸ್ಥೆಗಳ, ರಾಜಕೀಯ ಪಕ್ಷಗಳ ಮತ್ತು ಅದರ ನಾಯಕರ ರಾಜಕೀಯ ಜೀವನದಲ್ಲಿ ಇಂಥಾ ಧೋರಣೆಗಳನ್ನು ಹುಟ್ಟಿಸುತ್ತವೆ ಎಂಬುದು ನಿಜ. ಆದರೆ ಅದೇ ಸಮಯದಲ್ಲಿ ಸದಾ ಅಧಿಕಾರದಲ್ಲಿ ಉಳಿಯಬೇಕೆಂಬ ಪಕ್ಷಗಳ ಮತ್ತು ನಾಯಕರ ಬೌತಿಕ ಅಗತ್ಯಗಳೂ ಸಹ ಈ ಧೋರಣೆಗಳ ಬೆನ್ನಿಗಿರುತವೆಂಬುದೂ ಸಹ ನಿಜ. ಮತ್ತೊಮ್ಮೆ ಮಹಾರಾಷ್ಟ್ರದ ಇತ್ತೀಚಿನ ಬೆಳವಣಿಗೆಗಳೇ ಇದನ್ನು ಮುನ್ನೆಲೆಗೆ ತಂದಿದೆ.

ಈ ನಿಟ್ಟಿನಲ್ಲಿ ನಿರಾಶಾವಾದಿ ರಾಜಕಾರಣಕ್ಕೆ ಕೊಡುಗೆಯನ್ನು ನೀಡುತ್ತಿರುವ ವ್ಯಕ್ತಿಪರಿಸ್ಥಿತಿಗಳನ್ನೂ ಸಹ ಅಷ್ಟೆ ಮುಖ್ಯವಾಗಿ ಪರಿಗಣಿಸುವುದು ಮುಖ್ಯವಾಗುತ್ತದೆ. ರಾಜಕೀಯವನ್ನು ತನ್ನ ವೈಯಕ್ತಿಕ ಅಥವಾ ಖಾಸಗಿ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಬಳಸಿಕೊಳ್ಳಬೇಕೆಂಬ ತಣಿಯದ ಬಯಕೆಯನ್ನೇ ನಿರಾಶಾವಾದದ ರಾಜಕಾರಣದ ಯಶಸ್ಸು ಆಧರಿಸಿರುತ್ತದೆ. ರಾಜಕೀಯ ಜೀವನದ ಚೌಕಟ್ಟಿನಲ್ಲಿ ವ್ಯಕ್ತಿಗಳಲ್ಲಿ, ಗುಂಪುಗಳಲ್ಲಿ ಮತ್ತು ರಾಜಕೀಯ ಪಕ್ಷಗಳಲ್ಲೂ ಸಕ್ರಿಯವಾಗಿರುವ ಚಾಲಕಶಕ್ತಿಯಾಗಿಯೂ ಇಂಥಾ ಬಯಕೆಗಳು ಕೆಲಸ ಮಾಡುತ್ತವೆ. ಅಂಥಾ ಸಂದರ್ಭಗಳಲ್ಲಿ ಖಾಸಗಿ ಹಿತಾಸಕ್ತಿಯು ಪ್ರಾಮುಖ್ಯತೆಯನ್ನು ಪಡೆದುಕೊಂಡು ನೈತಿಕ ಕಟ್ಟುಪಾಡುಗಳು ಹಿನ್ನೆಲೆಗೆ ಸರಿಯುತ್ತವೆ. ಖಾಸಗಿ ಆಸಕ್ತಿಗಳ ಬದ್ಧತೆಯು ಸಾಂವಿಧಾನಿಕ ಪ್ರಕ್ರಿಯೆಗಳಿಗೆ ಅಥವಾ ಸಾರಕ್ಕೆ ಬದ್ಧವಾಗಿರುವುದನ್ನು ಬದಿಗೆ ಸರಿಸುತ್ತದೆ.

ನಿರಾಶಾವಾದಿ ರೂಪದ ರಾಜಕೀಯವು ಪಾರದರ್ಶಕ ಮತ್ತು ಸಮಾಲೋಚನವಾದಿ ಸ್ವರೂಪದ ಪ್ರಜಾತಂತ್ರದ ಬಗ್ಗೆ ಆಳವಾದ ಅಸಹನೆಯನ್ನು ಒಳಗೊಂಡಿರುತ್ತದೆ  ಮತ್ತು ಪ್ರಕ್ರಿಯಾತ್ಮಕ ವಿಧಿವಿಧಾನಗಳ ಬಗ್ಗೆ ತಿರಸ್ಕಾರವನ್ನು ಹೊಂದಿರುತ್ತದೆ. ವಾಸ್ತವವಾಗಿ, ಸಮಾಲೋಚನೆಯ ಮೂಲಕ ಗಟ್ಟಿಯಾದ ತೀರ್ಮಾನಗಳಿಗೆ ಬರಲು ಸಮರ್ಥರಲ್ಲದ ರಾಜಕೀಯ ನಾಯಕರುಗಳೇ ಸಮಾಲೋಚನಾವಾದಿ ಪ್ರಜಾತಂತ್ರದ ಬಗ್ಗೆ ಅಸಹನೆಯನ್ನು ಹೊಂದಿರುತ್ತಾರೆ. ಅದನ್ನೇ ಸಕಾರಾತ್ಮಕವಾಗಿ ಹೇಳುವುದಾದರೆ, ತನ್ನ ಬಗ್ಗೆ ತಾನು ನೈತಿಕ ನಿಯಂತ್ರಣ ಹೊಂದಿರುವವರು ಮಾತ್ರ ದುಷ್ಟ ಪರಿಣಾಮಗಳಿಗೆ ಈಡು ಮಾಡುವ ಹಾದಿ ತಪ್ಪಿಸುವ ಒತ್ತಡಗಳ ವಿರುದ್ಧ ಧೃಢವಾಗಿ ಹೋರಾಡುತ್ತಾರೆ. ಮತ್ತೊಬ್ಬರ ದುಷ್ಟ ಯೋಜನೆಗೆ ತನ್ನನ್ನು ವಸ್ತುವಾಗಿ ಬಳಸಿಕೊಳ್ಳಲು ಬಿಡುವ ಜಾರುದಾರಿಯನ್ನು ಖಂಡಿತವಾಗಿ ಯಾರೊಬ್ಬರೂ ತುಳಿಯಬಾರದು. ಆ ಮೂಲಕ ಮಾತ್ರ ಒಬ್ಬ ವ್ಯಕ್ತಿಯು ತನಗೂ ನ್ಯಾಯವನ್ನು ಒದಗಿಸಿಕೊಳ್ಳಲು ಸಾಧ್ಯ.

ಯಾವ ಪ್ರಜಾತಂತ್ರವೂ ಈ ಜಾರುದಾರಿಯ ಹಿಂದಿರುವ ಕೊಳೆತ ರಾಜಕೀಯ ರೂಪಗಳನ್ನು ಆಧರಿಸಿ ಬೆಳೆಯಲು ಸಾಧ್ಯವಿಲ್ಲ. ಪ್ರಜಾತಾಂತ್ರಿಕ ಸ್ವರೂಪದ ಸರ್ಕಾರವೆಂಬುದು ಒಂದು ಆದರ್ಶವಾಗಿರುವುದು ಏಕೆಂದರೆ ಅದು ಸಾಧಿಸಲು ಅಸಾಧ್ಯ ಎಂಬ ಕಾರಣಕ್ಕಲ್ಲ. ಬದಲಿಗೆ ಅತ್ಯುತ್ತಮ ರಾಜಕೀಯ ನಡಾವಳಿಗಳನ್ನು ಸ್ಥಾಪಿಸುವ ಮೂಲಕ ಅದನ್ನು ಕನಿಷ್ಟ ಮಟ್ಟದಲ್ಲಾದರೂ ಸಾಕಾರಗೊಳೊಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ. ಅವೆಂದರೆ ಸಂವಿಧಾನಿಕ ವಿಧಿ ವಿಧಾನಗಳಿಗೆ ಅನುಸಾರವಾಗಿ ಪ್ರಜಾಪ್ರತಿನಿಧಿಗಳು ಮಾಡುವ ನಡೆಗಳು. ಶಾಸಕರು ಮತ್ತು ರಾಜ್ಯಪಾಲರುಗಳಂಥ ಸಾಂಸ್ಥಿಕ ಮುಖ್ಯಸ್ಥರು ಆ ರೀತಿಯಲ್ಲಿ ನಡೆದುಕೊಳ್ಳುವ ಮೂಲಕ ಉತ್ತಮ ರಾಜಕೀಯ ನಡಾವಳಿಗಳಿಗೆ ಅವಕಾಶ ಕಲ್ಪಿಸಿಕೊಡುತ್ತಾರೆಂದು ನಿರೀಕ್ಷಿಸಲಾಗುತ್ತದೆ.

ಇಂದಿನ ಮಟ್ಟಿಗೆ ಹೇಳುವುದಾದರೆ ಭಾರತೀಯ ರಾಜಕೀಯವು ಆಶಾವಾದಿ ಸ್ವರೂಪಗಳಿಗಿಂತ ನಿರಾಶಾವಾದಿ ಸ್ವರೂಪಗಳಲ್ಲೇ ಅಭಿವ್ಯಕ್ತಗೊಳ್ಳುತ್ತಿದೆ. ನಿರಾಶಾವಾದಿ ಧೋರಣೆಗಳು ಪ್ರಜಾತಂತ್ರದ ಆಯಕಟ್ಟಿನ ಜಾಗದಲ್ಲಿ ನುಸುಳಿಕೊಂಡು ಅದರ ಸಾರವನ್ನೇ ನುಂಗಿಹಾಕುತ್ತಿದೆ. ಒಂದು ಸಮರ್ಥ ಕ್ರಿಯಾಶೀಲ ಪ್ರಜಾತಂತ್ರವು ಪಾರದರ್ಶಕತೆಯನ್ನು ಉತ್ತೇಜಿಸುತ್ತದೆ. ಮತ್ತು ಪರ್ಯಾಲೋಚನೆ ಮತ್ತು ಪ್ರಾಮಾಣಿಕ ಸಮಾಲೋಚನೆಗಳ ಮೂಲಕ  ತೆಗೆದುಕೊಂಡ ನಿರ್ಧಾರಗಳ ಮೂಲಕ ಪ್ರಜಾತಂತ್ರದ ಪರಿಧಿಯಲ್ಲಿ ಉಳಿದುಕೊಳ್ಳುವ ಅವಕಾಶಗಳು ಅಧಿಕವಾಗುವುದನ್ನು ಬಯಸುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮ ರಾಜಕೀಯ ನಡೆಗಳಿಗೆ ಮಾರ್ಗದರ್ಶನ ಮಾಡುವ ಮತ್ತು ನಿಯಂತ್ರಿಸುವ ತತ್ವಪ್ರಣಾಳಿಯನ್ನು ರಾಜಕೀಯ ಪಕ್ಷಗಳು ಅನುಸರಿಸಬೇಕಿರುವುದು ಅತ್ಯಗತ್ಯವಾಗಿದೆ. ಇತರ ಪಕ್ಷಗಳಂತೆ ಇವೂ ಸಹ ಜಾರುದಾರಿಯನ್ನು ಹಿಡಿದುಬಿಟ್ಟವು ಎಂದು ರಾಜಕೀಯ ವಿಶ್ಲೇಷಕರು ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರೀಕ್ಷೆಗಳು ಇನ್ನೂ ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತವೆ. ಯಾವುದೇ ರಾಜಕೀಯ ಪಕ್ಷಗಳು ಇತರ ರಾಜಕೀಯ ಪಕ್ಷಗಳಷ್ಟೇ ದ್ರೋಹಿಯೂ ಮತ್ತು ಕುತಂತ್ರಿಯೂ ಆಗಬಹುದೆಂಬುದನ್ನೇ ಈ ಅಭಿಪ್ರಾಯಗಳು ಸೂಚಿಸುತ್ತವೆ. ತಮ್ಮ ರಾಜಕೀಯ ನಡಾವಳಿಗಳಲ್ಲಿ ರಾಜಕೀಯ ನಾಯಕರು ಮತ್ತು ಪಕ್ಷಗಳೆರಡೂ ಘನತೆಯಿಂದ ನಡೆದುಕೊಳ್ಳಬೇಕೆಂದು ಜನರು ನಿರೀಕ್ಷಿಸುತ್ತಾರೆ. ಇದರಿಂದ ಮಾತ್ರ ತಮ್ಮನ್ನು ಹಾಗೂ  ಪ್ರಜಾತಂತ್ರವನ್ನೂ ಸಹ ರಕ್ಷಿಸಿಕೊಳ್ಳಲು ಸಾಧ್ಯ ಎಂದು ಅವರು ಭಾವಿಸುತ್ತಾರೆ.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...