ಭಟ್ಕಳ: ನಿಯಮಬಾಹೀರವಾಗಿ ಪುರಸಭಾ ಅಧ್ಯಕ್ಷರ ಕಾರಿನ ಮೇಲೆ ಅಳವಡಿಸಲಾಗಿದ್ದ `ಕರ್ನಾಟಕ ಸರಕಾರ' ಹೆಸರಿನ ನಾಮಫಲಕವನ್ನು ಆರ್ಟಿಓ ಅಧಿಕಾರಿಗಳು ಕಿತ್ತುಕೊಂಡಿದ್ದು, ಈ ಸಂಬಂಧ ಪುರಸಭಾ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ವ್ಯಕ್ತಿಯೋರ್ವರ ದೂರನ್ನು ಆಧರಿಸಿ ಬುಧವಾರ ಬೆಳಿಗ್ಗೆ ಪುರಸಭಾ ಕಚೇರಿಗೆ ಆಗಮಿಸಿದ ಎಆರ್ಟಿಓ ಎಲ್.ಪಿ.ನಾಯ್ಕ ಹಾಗೂ ಸಿಬ್ಬಂದಿಗಳು, ನಿಯಮಬಾಹೀರ ಕೃತ್ಯಕ್ಕೆ ನೋಟೀಸ್ ಜೊತೆಗೆ ರು.500 ದಂಡವನ್ನೂ ವಿಧಿಸಿದ್ದಾರೆ. ಭಟ್ಕಳ ಪುರಸಭೆಯ ವತಿಯಿಂದ 2021ರಲ್ಲಿ ಖರೀದಿಸಲಾಗಿದ್ದ ಈ ಇನ್ನೋವಾ ಕಾರನ್ನು ಅಧ್ಯಕ್ಷರು, ಕಚೇರಿಯ ಕೆಲಸ ಕಾರ್ಯಗಳಿಗೆ ಬಳಸುತ್ತ ಬಂದಿದ್ದು, ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಅಧ್ಯಕ್ಷರು, ಪುರಸಭೆ ಭಟ್ಕಳ, ಕರ್ನಾಟಕ ಸರಕಾರ ಎಂದು ನಾಮಫಲಕವನ್ನು ಅಳವಡಿಸಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಆರ್ಟಿಓ ಎಲ್.ಪಿ.ನಾಯ್ಕ, ಕಾರಿನ ಮೇಲೆ ಕರ್ನಾಟಕ ಸರಕಾರ ಮತ್ತು ಅಧ್ಯಕ್ಷರು ಎಂದು ಬರೆದಿರುವುದು ಕಾನೂನು ಬಾಹೀರವಾಗಿದ್ದು, ಸಾರ್ವಜನಿಕರ ದೂರಿನ ಮೇರೆಗೆ ಈ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.