ಭಟ್ಕಳ: ಇಂದಿನಿಂದ ಎಸ್. ಎಸ್. ಎಲ್. ಸಿ. ಪರೀಕ್ಷೆ ಆರಂಭವಾಗುತ್ತಿದ್ದು ತಾಲೂಕಿನಲ್ಲಿ ಯಶಸ್ವೀಯಾಗಿ ಪರೀಕ್ಷೆಯನ್ನು ನಡೆಸಲು ಎಲ್ಲಾ ತಯಾರಿಯನ್ನು ಇಲಾಖಾ ವತಿಯಿಂದ ಮಾಡಿಕೊಳ್ಳಲಾಗಿದೆ.
ತಾಲೂಕಿನಲ್ಲಿ ಒಟ್ಟೂ 9 ಪರೀಕ್ಷಾ ಕೇಂದ್ರಗಳಿದ್ದು 2051 ವಿದ್ಯಾರ್ಥಿಗಳು ಪರೀಕ್ಷೆ ಬೆರೆಯಲಿದ್ದಾರೆ. ಇವರಲ್ಲಿ 920 ಗಂಡು ಮಕ್ಕಳು 1131 ಹೆಣ್ಣು ಮಕ್ಕಳಿದ್ದು ಗ್ರಾಮೀಣ ಹಾಗೂ ನಗರದ ವಿದ್ಯಾರ್ಥಿಗಳು ಸೇರಿದ್ದಾರೆ. ಪರೀಕ್ಷಾ ಕೇಂದ್ರಕ್ಕೆ ಪ್ರತಿಯೊಂದಕ್ಕೂ ಕೂಡಾ ಮುಖ್ಯ ಅಧೀಕ್ಷಕರನ್ನು ನೇಮಕ ಮಾಡಲಾಗಿದ್ದು ನ್ಯೂ ಇಂಗ್ಲೀಷ್ ಶಾಲೆಯಲ್ಲಿ ಗಣಪತಿ ಶಿರೂರು, ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢ ಶಾಲೆಯಲ್ಲಿ ಶಬ್ಬೀರ್ ದಫೇದಾರ್, ಅಂಜುಮಾನ್ ಹೆಣ್ಣುಮಕ್ಕಳ ಪ್ರೌಢ ಶಾಲೆಯಲ್ಲಿ ನಜೀಬಾ ಖಾನಂ, ಸರಕಾರಿ ಪ್ರೌಢ ಶಾಲೆ ಸೊನಾರಕೇರಿಯಲ್ಲಿ ವಿನಾಯಕ ಜಿ. ಅವಧಾನಿ, ಸರಕಾರಿ ಪ್ರೌಢ ಶಾಲೆ ಬೆಳ್ಕೆಯಲ್ಲಿ ಶಾಲಿನಿ ಜಿ. ನಾಯಕ, ಜನತಾ ವಿದ್ಯಾಲಯ ಮುರ್ಡೇಶ್ವರದಲ್ಲಿ ಟಿ.ಡಿ. ಲಮಾಣಿ, ನ್ಯಾಶನಲ್ ಪ್ರೌಢ ಶಾಲೆ ಮುರ್ಡೇಶ್ವರ ಶಾಹೀನ್ ಬದರ್, ಜನತಾ ವಿದ್ಯಾಲಯ ಶಿರಾಲಿ ಮಹಾಲೇಶ್ವರ ನಾಯ್ಕ, ಬೀನಾ ವೈದ್ಯ ಇಂಟರ್ನ್ಯಾಶನಲ್ ಶಾಲೆ ಮುರ್ಡೇಶ್ವರದಲ್ಲಿ ಗೀತಾ ಮೇಸ್ತ ಇವರನ್ನು ನೇಮಕ ಮಾಡಲಾಗಿದೆ.
ಒಟ್ಟೂ ಪರೀಕ್ಷೆಗೆ 140 ಕೊಠಡಿಗಳಲ್ಲಿ 332 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದು ಇವರಲ್ಲಿ ಮುಖ್ಯ ಅಧೀಕ್ಷಕರು 9, ಒಟ್ಟೂ ಮೇಲ್ವಿಚಾರಕರು 190, ಸ್ಕೌಟ್ಸ ಎಂಡ್ ಗೈಡ್ಸ್ ಸ್ವಯಂ ಸೇವಕರು 18, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು ದೈಹಿಕ ಶಿಕ್ಷಕರು 9, ಪ್ರಶ್ನೆ ಪತ್ರಿಕೆ ಪಾಲಕರು 9, ಸ್ಥಾನಿಕ ಜಾಗೃತ ದಳದ ಸದಸ್ಯರು 18, ಇತರೇ ಸಿಬ್ಬಂದಿಗಳು 27, ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಗಳು 36, ಪ್ರಶ್ನೆ ಪತ್ರಿಕೆ ವರ್ಗಾಧಿಕಾರಿಗಳು 2 ಸೇರಿದಂತೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಬರುವುದಕ್ಕೆ ಯಾವುದೇ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ ಒಟ್ಟೂ 14 ಮಾರ್ಗಗಳಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಗಳನ್ನು ವ್ಯವಸ್ಥೆ ಮಾಡಲಾಗಿದ್ದು ಯಾವೊಂದು ವಿದ್ಯಾರ್ಥಿಯೂ ಕೂಡಾ ಪರೀಕ್ಷಾ ಕೇಂದ್ರಕ್ಕೆ ಬರುವುದಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ.
ಈಗಾಗಲೇ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿರುವ ಕೊಠಡಿಗಳಲ್ಲಿ ಪುರಸಭೆ ಹಾಗೂ ಗ್ರಾಮ ಪಂಚಾಯತ್ ಸಹಾಯದೊಂದಿಗೆ ಸೆನಿಟೈಸರ್ ಮಾಡಲಾಗಿದ್ದು, ಪ್ರತಿ ದಿನ ಪರೀಕ್ಷೆ ಮುಗಿದ ನಂತರೂ ಕೂಡಾ ಸೆನಿಟೈಸರ್ ಸಿಂಪರಣೆ ಮಾಡಲಾಗುವುದು ಎಂದೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.