ಭಟ್ಕಳದಲ್ಲಿ ಕೊರೊನಾ ತಡೆಗೆ ಕಠಿಣ ನಿಯಮ; ಮತ್ತದೇ ಕಥೆ, ತಪ್ಪುತ್ತಿಲ್ಲ ವ್ಯಥೆ !
ಭಟ್ಕಳ: ತಾಲೂಕಿನಲ್ಲಿ ಕೊರೊನಾ ತಡೆ ಹೊಸ ಮಾರ್ಗಸೂಚಿಯನ್ವಯ ಟಫ್ ರೂಲ್ಸ್ ಜಾರಿಯಾಗುತ್ತಿದ್ದಂತೆಯೇ ಭಟ್ಕಳ ಮತ್ತೆ ಥಂಡಾ ಹೊಡೆದಿದೆ.
ಬುಧವಾರ ಬೆಳಿಗ್ಗೆ 9 ಗಂಟೆಯಿಂದ 10 ಗಂಟೆಯ ಅವಧಿಯಲ್ಲಿ ತಾಲೂಕಿನ ವಿವಿದೆಡೆಯಿಂದ ಪಟ್ಟಣಕ್ಕೆ ಆಗಮಿಸಿದ ಜನರು ಅಗತ್ಯ ವಸ್ತುಗಳನ್ನು ಖರೀದಿಸಿ ಹಿಂದಿರುಗಿದರು. ಜನರ ಆಗಮನ ಆ ಕ್ಷಣದಲ್ಲಿ ಟಫ್ ರೂಲ್ಸ್ ನಿಯಮವನ್ನು ಮರೆಸಿತಾದರೂ, 10 ಗಂಟೆ ಕಳೆಯುತ್ತಿದ್ದಂತೆಯೇ ಪಟ್ಟಣ ಖಾಲಿಯಾಯಿತು. ಸಮಯ ಜಾರುತ್ತಿದ್ದಂತೆಯೇ ಬ್ಯಾಂಕು, ಆಸ್ಪತ್ರೆ, ಮೆಡಿಕಲ್ ಶಾಪ್ಗೆ ಬರುವವರು ಅಲ್ಲೊಬ್ಬ, ಇಲ್ಲೊಬ್ಬರಂತೆ ಓಡಾಡಿಕೊಂಡಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂದಿನಂತೆ ಸರಕು ವಾಹನಗಳ ಓಡಾಟ ನಡೆದುಕೊಂಡೇ ಇತ್ತು. ಪೊಲೀಸರು ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಗಸ್ತು ಕಾರ್ಯವನ್ನು ಮುಂದುವರೆಸಿದರು.
ಬುಧವಾರ ಮತ್ತೆ 7 ಜನರಿಗೆ ಸೋಂಕು:
ತಾಲೂಕಿನಲ್ಲಿ ಬುಧವಾರ 7 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಭಟ್ಕಳ ಪುರಸಭಾ ವ್ಯಾಪ್ತಿಯ 3, ಶಿರಾಲಿ 2, ಜಾಲಿ 1 ಹಾಗೂ ಬೆಳಕೆಯಲ್ಲಿ 1 ಪ್ರಕರಣಗಳು ಇದರಲ್ಲಿ ಸೇರಿದ್ದು, ತಾಲೂಕಿನಲ್ಲಿ ಸಕ್ರೀಯ ಕೊರೊನಾ ಸೋಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಇನ್ನುಳಿದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಪೇದೆಯೋರ್ವರಿಗೂ ಕೊರೊನಾ ಸೋಂಕು (ರ್ಯಾಪಿಡ್ ಟೆಸ್ಟ್) ತಗುಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ಇನ್ನೊಮ್ಮೆ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ.
ಲಸಿಕೆಗೆ ಮುಗಿ ಬಿದ್ದ ಜನರು:
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಂತೆಯೇ ಲಸಿಕೆ ಪಡೆಯಲು ಆಗಮಿಸುವವರ ಸಂಖ್ಯೆಯಲ್ಲಿಯೂ ಏರಿಕೆ ಕಂಡಿದೆ. ಭಟ್ಕಳ ಸರಕಾರಿ ಆಸ್ಪತ್ರೆ, ಶಿರಾಲಿ ಹಾಗೂ ಬೆಳಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 7 ಕೇಂದಗಳಲ್ಲಿ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದ್ದು, ದಿನವೊಂದಕ್ಕೆ 350 ಜನರು ಲಸಿಕೆ ಪಡೆಯುತ್ತಿದ್ದಾರೆ ಎಂದು ಆರೋಗ್ಯಾಧಿಕಾರಿ ಡಾ.ಮೂರ್ತಿ ಭಟ್ ಮಾಹಿತಿ ನೀಡಿದ್ದಾರೆ.