ಶಿಡ್ಲಘಟ್ಟ,ಜುಲೈ31: ಜನಸಂಖ್ಯೆ ಸ್ಪೋಟ ದೇಶದ ಅಭಿವೃಧ್ಧಿಗೆ ಮಾರಕವಾಗಿದ್ದು ನಾಗರಿಕರು ಸ್ವಯಂ ಪ್ರೇರಿತರಾಗಿ ಜನಸಂಖ್ಯೆಯನ್ನು ನಿಯಂತ್ರಿಸಿ ಅಭಿವೃಧ್ಧಿಗೆ ಸಹಕರಿಸಬೇಕೆಂದು ಶಾಸಕ ಎಂ.ರಾಜಣ್ಣ ಕರೆ ನೀಡಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವಜನಸಂಖ್ಯೆ ದಿನಾಚರಣೆ ಮಾತನಾಡಿದ ಅವರು ಬಡತನ, ಅಜ್ಞಾನ, ಅನಕ್ಷರತೆ, ಮೂಢನಂಬಿಕೆ ಹಾಗೂ ಬಾಲ್ಯವಿವಾಹ ಇತ್ಯಾದಿ ಕಾರಣಗಳಿಂದ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಜನಸಂಖ್ಯೆ ಹೆಚ್ಚಾದಂತೆಲ್ಲಾ ದೇಶದಲ್ಲಿ ಅನೇಕ ಸಮಸ್ಯೆಗಳು ಉದ್ವವಿಸುತ್ತಿವೆ ಮೂಲಭೂತ ಸೌಕರ್ಯಗಳಾದ ಮನೆ, ನೀರು , ನಿರುದ್ಯೋಗ ಸಮಸ್ಯೆ, ಮುಂತಾದ ಸಮಸ್ಯೆಗಳಿಗೆಲ್ಲ ವಿದ್ಯೆ ಒಂದೇ ಪರಿಹಾರವಾಗಿದೆ ಎಂದು ತಿಳಿಸಿದರು.
ತಹಶೀಲ್ದಾರ್ ಅಜೀತ್ಕುಮಾರ್ ರೈ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆಲ್ಲಾ ನಿರುದ್ಯೋಗ ಸಮಸ್ಯೆ ಸಹ ಹೆಚ್ಚಾಗುತ್ತಿದ್ದು, ಎಲ್ಲರಿಗೂ ಉದ್ಯೋಗ ಸೃಷ್ಟಿ ಮಾಡಲು ಸಾದ್ಯವಿಲ್ಲ, ಯುವಕರು ಸರ್ಕಾರ ಕೊಡುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಸ್ವಯಂ ಉದ್ಯೋಗ ಪ್ರಾರಂಬಿಸಿ, ಬೇರೆಯವರಿಗೂ ಉದ್ಯೋಗ ನೀಡಿ ಎಂದು ತಿಳಿಸಿದರು.
ಇದೇ ವೇಳೆಯಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಲು ಜನರಲ್ಲಿ ಜಾಗೃತಿ ಮೂಡಿಸಲು ಶಾಲಾ ವಿದ್ಯಾರ್ಥಿಗಳೊಂದಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಜನಜಾಗೃತಿ ಜಾಥ ನಡೆಸಿದರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುವ ಮೂಲಕ ಜನಜಾಗೃತಿ ಮೂಡಿಸಿದರು.
ನಗರಸಭಾ ಉಪಾದ್ಯಕ್ಷೆ ಪ್ರಭಾವತಿ ಸುರೇಶ್, ಪೌರಾಯುಕ್ತ ಚಲಪತಿ,ಕ್ಷೇತ್ರ ಶಿಕ್ಷಣಾದಿಕಾರಿ ರಘುನಾಥರೆಡ್ಡಿ,ಸಿ.ಡಿ.ಪಿ.ಓ ಲಕ್ಷ್ಮೀದೇವಮ್ಮ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್,ಸಹಾಯಕ ಆರೋಗ್ಯಾಧಿಕಾರಿ ದಾದಾಪೀರ್,ಬಿಪಿಎಂ ನಂದಿನಿ,ಹಿರಿಯ ಆರೋಗ್ಯ ಸಹಾಯಕಿ ಮುನಿರತ್ನಮ್ಮ,ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.