ಫೆ.16; ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ನಂತರ ಮುಂದೇನು? ಸಾಹಿಲ್ ಆನ್ ಲೈನ್ ನಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ಭಟ್ಕಳ: ಕರ್ನಾಟಕ ಸೇರಿದಂತೆ ಗಲ್ಫ್ ರಾಷ್ಟಗಳಲ್ಲಿ ಪ್ರಸಿದ್ಧಿ ಹೊಂದಿರುವ ಸಾಹಿಲ್ ಆನ್ಲೈನ್ ಜಾಲತಾಣದ ವತಿಯಿಂದ ಮೆಟ್ರಿಕ್ ಮತ್ತು ಪಿಯುಸಿ ವಿದ್ಯಾರ್ಥಿಗಳ ಮಾರ್ಗದರ್ಶನಕ್ಕಾಗಿ ಫೆಬ್ರವರಿ 16 ರಂದು ಭಟ್ಕಳದ ಬಿಲಾಲ್ ಸಭಾಂಗಣದಲ್ಲಿ (ನವಯತ್ ಕಾಲೋನಿ, ತಾಲೂಕಾ ಕ್ರೀಡಾಂಗಣದ ಎದುರು) ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಹಾಗೂ ಸಾಹಿಲ್ಆನ್ಲೈನ್ ನಿರ್ದೇಶಕ ಜಾವೀದ್ ಹುಸೇನ್ ಅರ್ಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸಿದ್ಧ ಸಂಪನ್ಮೂಲ ವ್ಯಕ್ತಿ, ಶಿಕ್ಷಣ ತಜ್ಞ , ಸೆಂಟ್ರಲ್ ಬೋರ್ಡ್ ಆಫ್ ಎಜುಕೇಶನ್ ನವದೆಹಲಿ ಮತ್ತು ಬ್ರೈನಿ ಸ್ಟಾರ್ ಬೆಂಗಳೂರು ಇದರ ನಿರ್ದೇಶಕ ಸೈಯದ್ ತನ್ವೀರ್ ಅಹಮದ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಮಗ್ರ ರೀತಿಯಲ್ಲಿ ಮಾರ್ಗದರ್ಶನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಾಮಿಯಾ ಮಸೀದಿ ಭಟ್ಕಳದ ಖತೀಬ್ ಮೌಲಾನಾ ಅಬ್ದುಲ್ ಅಲೀಂ ಖತೀಬಿ ನದ್ವಿ ಅವರು ಶಿಕ್ಷಣದ ಮಹತ್ವ ಮತ್ತು ಅದರ ಉಪಯುಕ್ತತೆ ಕುರಿತು ಉಪನ್ಯಾಸ ನೀಡಲಿದ್ದಾರೆ.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ನಂತರ ವಿದ್ಯಾರ್ಥಿಗಳು ಏನು ಮಾಡಬೇಕು, ಯಾವ ಅಧ್ಯಯನ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು, ಮುಂದಿನ ಶೈಕ್ಷಣಿಕ ಪಯಣವನ್ನು ಹೇಗೆ ಮುಂದುವರಿಸಬೇಕು ಮತ್ತು ಉನ್ನತ ಶಿಕ್ಷಣದಿಂದ ರಾಷ್ಟ್ರಕ್ಕೆ ಹೇಗೆ ಪ್ರಯೋಜನವಾಗಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದು, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ.
ಫೆ.16 ಶುಕ್ರವಾರ, ದಂದು ಅಸರ್ ನಮಾಝಿನ ನಂತರ ಬಿಲಾಲ್ ಸಭಾಂಗಣದಲ್ಲಿ ಕಾರ್ಯಕ್ರಮವು ಪ್ರಾರಂಭವಾಗಲಿದ್ದು, ಮಗ್ರಿಬ್ ಅಝಾನ್ ನೊಂದಿಗೆ ಮುಕ್ತಾಯಗೊಳ್ಳಲಿದೆ.