ಉಡುಪಿ: ಕರಾವಳಿ ಜಿಲ್ಲೆಗಳ ಕುರಿತಂತೆ ಇದೇ ಮೊದಲ ಬಾರಿ ಪ್ರಕೃತಿ ಮುನಿದು ಕೊಂಡಂತೆ ಭಾಸವಾಗುತ್ತಿದೆ. ರಾಜ್ಯದ ಕರಾವಳಿ ಜಿಲ್ಲೆಗಳು ಹಿಂದೆಂದೂ ಕಾಣದಂಥ ಪರಿಸ್ಥಿತಿಯನ್ನು ಈ ಬಾರಿ ಎದುರಿಸುತ್ತಿವೆ. ಮಳೆಗಾಲದ ಈ ನಟ್ಟನಡುವಿನ ಅವಧಿಯಲ್ಲಿ ಜನತೆ ಕಡುಬೇಸಿಗೆಯ ದಿನಗಳ ಅನುಭವ ಪಡೆಯುತ್ತಿದ್ದಾರೆ. ಜೂನ್ ಮತ್ತು ಆಗಸ್ಟ್ ತಿಂಗಳಲ್ಲಿ ಕೈಕೊಟ್ಟಿರುವ ಮಳೆ, ಇದರಿಂದ ತಡವಾಗಿ ನಾಟಿ ಮಾಡಿದ್ದರೂ ಗದ್ದೆಯಲ್ಲಿ ಒಣಗುತ್ತಿರುವ ಬೆಳೆಯೊಂದಿಗೆ, ಕುಡಿಯುವ ನೀರಿನ ಸಮಸ್ಯೆ ವರ್ಷಾಂತ್ಯದೊಳಗೆ ತಲೆದೋರುವ ಆತಂಕ ಕಾಡತೊಡಗಿದೆ.
ಪ್ರಕೃತಿಯ ಕುರಿತಂತೆ ತೀರಾ ನಿರ್ಲಕ್ಷ್ಯದ ನಿಲುವು ಹೊಂದಿರುವ ಕರಾವಳಿಗರಿಗಿದು ಹೊಸ ಅನುಭವ. ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಬೇಸಿಗೆಯ ಧಗೆಯನ್ನು ಮೀರಿಸುವ ಉಷ್ಣತೆಯನ್ನು ಜನರು ಇದುವರೆಗೆ ಅನುಭವಿಸಿದ್ದೇ ಇಲ್ಲ. ಬರದಂಥ ಸ್ಥಿತಿ ಕರಾವಳಿಗೆ ಬರುವುದನ್ನು ಕನಸಿನಲ್ಲೂ ಊಹಿಸದ ಜನರಿಗೆ ಈ ಬಾರಿಯ ವಾತಾವರಣ, ಹವಾಮಾನ ಬರದ ಕುರಿತು ಆಲೋಚಿಸುವಂತೆ ಮಾಡುತ್ತಿದೆ.
ಸದ್ಯಕ್ಕೆ ಜಿಲ್ಲೆ ಬರ ಘೋಷಣೆಯ ಹಂತಕ್ಕೆ ಹೋಗಿ ರದೇ ಇದ್ದರೂ, ನಿರ್ಣಾಯಕ ವೆನಿಸಿರುವ ಸೆಪ್ಟೆಂಬರ್ ತಿಂಗಳ ಪರಿಸ್ಥಿತಿಯನ್ನು ಆತಂಕ ಹಾಗೂ ಕಾತರದಿಂದ ಎದುರು ನೋಡುವಂತೆ ಮಾಡಿರುವುದು ಸುಳ್ಳಲ್ಲ.
ಕೊರತೆ...ಕೊರತೆ..: ಈ ಬಾರಿ ಮುಂಗಾರು ಪೂರ್ವ ಮಳೆ ಕರಾವಳಿಗೆ ಕೈಕೊಟ್ಟಾಗಲೇ ಜನತೆ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ತಡವಾಗಿ ಪ್ರಾರಂಭಗೊಂಡರೂ ಜಿಲ್ಲೆಯಲ್ಲಿ ಎಂದೂ ಮಳೆಗೆ ಕೊರತೆಯಾಗಿದ್ದ ಇತಿಹಾಸವೇ ಇರಲಿಲ್ಲ. ಹೀಗಾಗಿ ಜನತೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಮಳೆಗಾಲ ಪ್ರಾರಂಭಗೊಳ್ಳಬೇಕಿದ್ದ ಜೂನ್ ತಿಂಗಳಲ್ಲಿ ಶೇ.53ರಷ್ಟು ಮಳೆ ಕೊರತೆ ಕಾಣಿಸಿಕೊಂಡಿತ್ತು. ತಡವಾದರೂ ಜುಲೈ ತಿಂಗಳಲ್ಲಿ ಮಳೆ ಜೋರಾಗಿ ಬಿದ್ದು, ಹಿಂದಿನ ಕೊರತೆ ಮರೆಯುವಂತಾಗಿತ್ತು. ಜುಲೈ ತಿಂಗಳಲ್ಲಿ ಶೇ.25ರಷ್ಟು ಹೆಚ್ಚು ಮಳೆ ಸುರಿದಿತ್ತು, ಆದರೆ ಆಗಸ್ಟ್ ತಿಂಗಳಲ್ಲಿ ಶೇ.72ರಷ್ಟು ಮಳೆ ಕೊರೆತ ಕಂಡು ಬಂದಿರುವುದು ಖಂಡಿತ ಜನತೆ ಹಾಗೂ ಜಿಲ್ಲಾಡಳಿತಗಳನ್ನು ಆತಂಕಕ್ಕೆ ಒಡ್ಡುವ ವಿಷಯ.
ಇನ್ನು ಸೆಪ್ಟೆಂಬರ್ ತಿಂಗಳು ಕರಾವಳಿಯಲ್ಲಿ ಭಾರೀ ಅಲ್ಲದಿದ್ದರೂ, ನಿರಂತರವಾಗಿ ಮಳೆ ಬೀಳುವ ಸಮಯ. ಈ ಸಲದ ಮಟ್ಟಿಗೆ ಇದು ನಿರ್ಣಾಯಕ ತಿಂಗಳೆನಿಸಿದೆ. ಹವಾಮಾನ ಇಲಾಖೆ ನೀಡುವ ಮುನ್ಸೂಚನೆ ಪ್ರಕಾರ ಈ ತಿಂಗಳಲ್ಲಿ ದೊಡ್ಡ ಪ್ರಮಾಣ ದಲ್ಲಿಲ್ಲದಿದ್ದರೂ, ಸಾಕಷ್ಟು ಮಳೆ ಬೀಳಲಿದೆ. ಇದು ನಿಜವಾಗಲಿ ಎಂದು ಜಿಲ್ಲೆಯ ರೈತರು ಹಾಗೂ ಜಿಲ್ಲಾಡಳಿತ ಹಾರೈಸುತ್ತಿದೆ.
ಒಣಗುತ್ತಿರುವ ಬೆಳೆ: ಕೃಷಿ ಇಲಾಖೆಯ ಪ್ರಕಾರ ಈ ಬಾರಿ 38,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಗುರಿ ಹಾಕಿಕೊಂಡಿದ್ದು, ಇದುವರೆಗೆ 35,508 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯ ಬಹುಪಾಲು ಭತ್ತದ ಕೃಷಿ ಮಳೆಯನ್ನೇ ಅವಲಂಬಿತವಾಗಿದೆ. ಒಂದರ್ಥದಲ್ಲಿ ಇದು ಮಳೆಯಾಶ್ರಿತ ಬೆಳೆಯಾಗಿದೆ.
ಮಳೆಯ ಕೊರತೆಯಿಂದ ಈ ಬಾರಿ ತಡವಾಗಿ ಭತ್ತದ ನಾಟಿ ಕಾರ್ಯ ನಡೆದಿದ್ದು, ಇದೀಗ ಮಳೆಯ ಕೊರತೆಯಿಂದ ಬಹುಪಾಲು ಭತ್ತದ ಗದ್ದೆಗಳು ನೀರಿಲ್ಲದೇ ಒಣಗುತ್ತಿವೆ. ಜಿಲ್ಲೆಯಲ್ಲಿ ಮುಂಗಾರು ಭತ್ತದ ಕೃಷಿಗೆ ನೀರುಣಿಸುವ ಪದ್ಧತಿ ಇಲ್ಲವಾದರೂ ಈ ಬಾರಿ ಅದಕ್ಕೂ ನೀರಿನ ಕೊರತೆ ಎದುರಾಗುತ್ತಿದೆ. ಪರ್ಯಾಯ ನೀರಿನ ಮೂಲಗಳಾದ ಕೆರೆಗಳು, ಮದಗ, ತೋಡುಗಳು, ಹಳ್ಳಕೊಳ್ಳಗಳಲ್ಲೂ ಈ ಬಾರಿ ನೀರಿನ ಕೊರತೆ ಇರುವುದರಿಂದ ಅಲ್ಲೂ ನೀರನ್ನು ಗದ್ದೆಗೆ ಹಾಯಿಸುವ ಸ್ಥಿತಿಯಲ್ಲಿ ರೈತರಿಲ್ಲದಂತಾಗಿದೆ. ಅಲ್ಲದೇ ಹೊತ್ತಲ್ಲದ ಹೊತ್ತಿನಲ್ಲಿ ಕೈಕೊಡುತ್ತಿರುವ ವಿದ್ಯುತ್ ನೀರನ್ನು ಪಂಪ್ ಮಾಡುವ ಪ್ರಯತ್ನಕ್ಕೆ ತಡೆಯಾಗುತ್ತಿದೆ ಎಂದು ರೈತರು ದೂರುತ್ತಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಭತ್ತದ ಗಿಡಗಳು ತೆನೆಗಟ್ಟುವ, ಕಾಳು ಕಟ್ಟುವ ಹಂತಕ್ಕೆ ಬರಲಿವೆ. ಆ ಸಮಯದಲ್ಲಿ ಬುಡದಲ್ಲಿ ನೀರು ನಿಂತಿರಬೇಕಾಗಿದೆ. ಯಾವುದೇ ಮೂಲದಿಂದಾದರೂ ಗದ್ದೆಗೆ ನೀರನ್ನು ಹಾಯಿಸುವಂತೆ ರೈತರಿಗೆ ನಾವು ಸೂಚನೆಗಳನ್ನು ನೀಡುತ್ತಿದ್ದೇವೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ ಎಂ.ಸಿ. ತಿಳಿಸಿದರು. ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಗದ್ದೆಗಳಿಗೆ ಭೇಟಿ ನೀಡಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದೇವೆ ಎಂದವರು ತಿಳಿಸಿದರು.
ನೀರಿನ ಕೊರತೆಯಿಂದ ಭತ್ತದ ಎಲೆಗಳು ಹೊರಬದಿಯಿಂದ ಒಣಗುತ್ತಿದೆ. ಕಾಳುಕಟ್ಟುವ ಹಂತ ಅತ್ಯಂತ ಮುಖ್ಯವಾಗಿರುವುದರಿಂದ ಹೇಗಾದರೂ ನೀರು ಕೊಡುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದ್ದೇವೆ. ಹೀಗಾಗಿ ಸೆಪ್ಟೆಂಬರ್ ತಿಂಗಳು ಭತ್ತ ಕೃಷಿ ಮಟ್ಟಿಗೆ ಅತ್ಯಂತ ಮುಖ್ಯ ಎಂದು ಸೀತಾ ನುಡಿದರು. ಆದರೆ ಸದ್ಯಕ್ಕೆ ಯಾವುದೇ ರೋಗದ ಬಾಧೆಯಾಗಲೀ, ಕೀಟಗಳ ಕಾಟವಾಗಲಿ ಕಾಣಿಸಿಕೊಂಡಿಲ್ಲ ಎಂದರು.