ಮಂಗಳೂರು:ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿಗಳನ್ನು ಭೇಟಿ ಮಾಡುವ ನೆಪದಲ್ಲಿ ಗಾಂಜಾ ಪೂರೈಕೆ ಮಾಡಲು ಯತ್ನಿಸಿದ್ದ ಆರೋಪಿ ಕಸ್ಬಾ ಬೆಂಗ್ರೆಯ ಅಶ್ಫಾಕ್(೨೪) ಎಂಬಾತನಿಗೆ ಮಂಗಳೂರಿನ ನ್ಯಾಯಾಲಯವು ೬ ತಿಂಗಳ ಕಠಿಣ ಶಿಕ್ಷೆ ಮತ್ತು ೧೫,೦೦೦ ರೂ. ದಂಡ ವಿಧಿಸಿದೆ.
೨೦೧೬ರ ಎಪ್ರಿಲ್ ೪ ರಂದು ಪೂರ್ವಾಹ್ನ ೧೦ ಗಂಟೆಗೆ ಆರೋಪಿ ಅಶ್ಫಾಕ್ ನಗರದ ಸಬ್ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ನಹೀಂ ಮತ್ತು ಚಪ್ಪೆ ತಣ್ಣಿ ರಹೀಂ ಎಂಬವರನ್ನು ಭೇಟಿಯಾಗಲು ಬಂದಿದ್ದ. ಈ ಸಂದರ್ಭ ಜೈಲಿನ ಹೊರಗೆ ಇದ್ದ ಬರ್ಕೆ ಪೊಲೀಸ್ ಠಾಣೆಯ ಎಎಸ್ಐ ಅಮ್ಮಣ್ಣಿ ಮತ್ತು ಸಿಬ್ಬಂದಿ ತಪಾಸಣೆ ನಡೆಸಿದಾಗ ಅಶ್ಫಾಕ್ ಬಳಿ ೫೦ ಗ್ರಾಂ ಗಾಂಜಾ ಪ್ಯಾಕೆಟ್ ಪತ್ತೆಯಾಗಿತ್ತು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆಗ ಬರ್ಕೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಎ.ಕೆ. ರಾಜೇಶ್ ತನಿಖೆಯನ್ನು ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ೩ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ಅಶ್ವಿನಿ ಕೋರೆ ಅವರು ಅಕ್ರಮವಾಗಿ ಗಾಂಜಾ ಹೊಂದಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಪ್ರಕರಣದಲ್ಲಿ ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಮೋಹನ್ಕುಮಾರ್ ವಾದಿಸಿದ್ದರು.