ನೂತನ ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್ ಅಧಿಕಾರ ಸ್ವೀಕಾರ; ರಾಜ್ಯದಲ್ಲಿ 37 ವರ್ಷಗಳ ಸುದೀರ್ಘ ಸೇವೆಯ ಬಳಿಕ ಕೇಂದ್ರೀಯ ತನಿಖಾ ಸಂಸ್ಥೆಯ ವರಿಷ್ಠ ಹುದ್ದೆ
ಹೊಸದಿಲ್ಲಿ: ರಾಜ್ಯದಲ್ಲಿ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಪ್ರವೀಣ್ ಸೂದ್ ಅವರು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ನ ನಿರ್ದೇಶಕರಾಗಿ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ.
1986ನೇ ಸಾಲಿನ ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯಾದ ಸೂದ್ ಅವರು ತನ್ನ 37 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಹಲವಾರು ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದರು. ಬಳ್ಳಾರಿ ಹಾಗೂ ರಾಯಚೂರಿನಲ್ಲಿ ಪೊಲೀಸ್ ಅಧೀಕ್ಷಕ (ಎಸ್ಪಿ), ಬೆಂಗಳೂರುನಗರದ ಹೆಚ್ಚುವರಿ ಪೊಲೀಸ್ ಆಯುಕ್ತ (ಸಾರಿಗೆ), ಮೈಸೂರು ಹಾಗೂ ಬೆಂಗಳೂರು ನಗರಗಳ ಪೊಲೀಸ್ ಆಯುಕ್ತ ಎಡಿಜಿಪಿ, ರಾಜ್ಯ ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ, ಡಿಜಿಪಿ (ಆಂತರಿಕ ಭದ್ರತೆ) ಹಾಗೂ ಡಿಜಿಪಿ (ಸಿಐಡಿ)ಯಾಗಿ ಕಾರ್ಯನಿರ್ವಹಿಸಿದ್ದರು. ಮಾರಿಷಸ್ ಸರಕಾರದ ಸಲಹೆಗಾರರಾಗಿಯೂ ಅವರು ಕೆಲಸ ಮಾಡಿದ್ದರು.
ಭಾರೀ ಆದಾಯದ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಮುಖ ಪ್ರಕರಣಗಳಲ್ಲಿ ಮತ್ತು ಅಂತರ್ ರಾಜ್ಯ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ ಪರಿಣಾಮವನ್ನುಂಟು ಮಾಡುವ ಪ್ರಕರಣಗಳಲ್ಲಿಯೂ ಅವರು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಸೈಬರ್ ಅಪರಾಧ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ತನಿಖೆ ಹಾಗೂ ಪತ್ತೆ ಕಾರ್ಯಾಚರಣೆಗಳಲ್ಲಿಯೂ ಅವರು ಮೇಲ್ವಿಚಾರಣೆ ವಹಿಸಿದ್ದರು.
ಐಐಟಿ, ದಿಲ್ಲಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವೀಧರರಾದ ಪ್ರವೀಣ್ ಸೂದ್ ಅವರು ಬೆಂಗಳೂರಿನ ಐಐಎಂ ಹಾಗೂ ನ್ಯೂಯಾರ್ಕ್ ಸಿರಾಕ್ಯೂಸ್ ವಿವಿಯ ಮ್ಯಾಕ್ಸ್ವೆಲ್ ಸ್ಕೂಲ್ ಆಫ್ ಗವರ್ನನನಲ್ಲಿ ಸಾರ್ವಜನಿಕ ನೀತಿ ಹಾಗೂ ನಿರ್ವಹಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ಪೊಲೀಸ್ ಇಲಾಖೆಯಲ್ಲಿನ ವಿಶಿಷ್ಟ ಸೇವೆಗಾಗಿ ಪ್ರವೀಣ್ ಸೂದ್ ಅವರಿಗೆ 2011ರಲ್ಲಿ ರಾಷ್ಟ್ರಪತಿಯವರ ಪೊಲೀಸ್ ಪದಕ ಹಾಗೂ 2002ರಲ್ಲಿ ಅಸಾಧಾರಣ ಸೇವೆಗಾಗಿನ ಪೊಲೀಸ್ ಪದಕ ಪಡೆದಿದ್ದರು. 1996ರಲ್ಲಿ ಉತ್ಕೃಷ್ಟ ಸೇವೆಗಾಗಿ ಮುಖ್ಯಮಂತ್ರಿಯವರ ಚಿನ್ನದ ಪದಕ, 2011ರಲ್ಲಿ ಟ್ರಾಫಿಕ್ ನಿರ್ವಹಣೆಯಲ್ಲಿ ಅತ್ಯಂತ ತಂತ್ರಜ್ಞಾನದ ಸಂಶೋಧನಾತ್ಮಕ ಬಳಕೆ ಹಾಗೂ ಸುರಕ್ಷತೆ, ಸಂಚಾರ ನಿರ್ವಹಣೆಗೆ ಸಂಬಂಧಿಸಿ 2006ರಲ್ಲಿ ರಾಜಕುಮಾರ ಮೈಕೆಲ್ ಇಂಟರ್ ನ್ಯಾಶನಲ್ ರಸ್ತೆ ಸುರಕ್ಷತಾ ಪ್ರಶಸ್ತಿ ಪಡೆದಿದ್ದರು.