ಭಟ್ಕಳ: ಪ್ರತಿಭಾ ಕಾರಂಜಿಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳ ಅನಾವರಣಕ್ಕೆ ಪ್ರೇರಕವಾಗುತ್ತಿದ್ದು ಇದನ್ನು ಸದೂಪಯೋಗಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಜಿ.ಪಂ. ಮಾಜಿ ಉಪಾಧ್ಯಕ್ಷ ಹಾಗೂ ದುರ್ಗಾಪರಮೇಶ್ವರಿ ಅಳ್ವೇಕೋಡಿ ಪ್ರೌಢಶಾಲೆಯ ಸ್ಥಪಕಾಧ್ಯಕ್ಷ ರಾಮಾ ಮೊಗೇರ್ ಹೇಳಿದರು.
ಅವರು ಶನಿವಾರ ದುರ್ಗಾಪರಮೇಶ್ವರಿ ಅಳ್ವೆಕೋಡಿ ಸಭಾಂಗಣದಲ್ಲಿ ಅಳ್ವೆಕೋಡಿ ಪ್ರೌಢಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯಾಲಯ ಜಟಿಯಾಗಿ ಆಯೋಜಿಸಿದ್ದ ಶಿರಾಲಿ ವಲಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾ.ಪಂ. ಸದಸ್ಯೆ ಮಾಲತಿ ದೇವಾಡಿಗ, ಮೊಬೈಲ್ ಲೋಕದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಗಳನ್ನು ಮರೆಯತೊಡಗಿದ್ದು ಮೊಬೈಲ್ ನಿಂದ ಹೊರಬಂದು ಪ್ರತಿಭೆಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿ ಈ ವಲಯದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಧರ್ಮದರ್ಶಿ ತಿಮ್ಮಪ್ಪ ಮಗೇರ್ ಹೊನ್ನೆಮನೆ, ಶಿಕ್ಷಣ ಸಂಯೋಜಕ ಶಂಕರ್ ಉಪ್ಪರಗಿಮನೆ, ಅಳ್ವೆಕೋಡಿ ಶಾಲೆಯ ಉಪಾಧ್ಯಕ್ಷ ದುರ್ಗಪ್ಪ ಮೊಗೇರ್ ಮಾತನಾಡಿ ವಿದ್ಯಾರ್ಥಿಗಳ ಯಶಸ್ಸುಗಳಿಸಲಿ ಎಂದು ಹಾರೈಸಿದರು.
ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಕೆ.ಬಿ.ಮಡಿವಾಳ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವಿ.ಟಿ.ಗುಬ್ಬಿಮನೆ ವಂದಿಸಿದರು. ಪ್ರಕಾಶ ಪಟಗಾರ ನಿರೂಪಿಸಿದರು.
ಭಾಸ್ಕರ್ ಮೊಗೇರ್, ಸುನಿತಾ ಹೇರೂರ್ಕರ್, ಶಿಕ್ಷಣ ಸಂಯೋಜಕ ಆರ್.ಎಸ್.ಗೊಂಡಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಪ್ರತಿಭಾಕಾರಂಜಿ ಸ್ಪರ್ಧೆಗಳು ಜರಗಿದವು.