ಉಪ್ಪಿನಂಗಡಿ: ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಆರೋಪ: ಹತ್ತು ಮಂದಿ ಆರೋಪಿಗಳ ಬಂಧನ
ಉಪ್ಪಿನಂಗಡಿ: ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ವಶಪಡಿಸಿಕೊಂಡಿದ್ದ ಪಿಎಫ್ಐ ಮುಖಂಡರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಮಂಗಳವಾರ ನಡೆದ ಪ್ರತಿಭಟನೆಯ ಸಂದರ್ಭ ನಡೆದ ಸಾರ್ವಜನಿಕ ಶಾಂತಿ ಭಂಗ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕೋವಿಡ್ ನಿಯಮಾವಳಿ ಉಲ್ಲಂಘನೆ, ಕೊಲೆಯತ್ತ ಮತ್ತಿತರ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಆರೋಪಿಗಳ ಮೇಲೆ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದು, ಅದರಲ್ಲಿ ಒಂದು ಪ್ರಕರಣಕ್ಕೆ ಸಂಬಂಧಿಸಿ 10 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸಾರ್ವಜನಿಕ ಶಾಂತಿಭಂಗ: ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಓಮನಾ ಎನ್.ಕೆ. ದೂರು ನೀಡಿದ್ದು, ಪಿಎಫ್ಐ ಸಂಘಟನೆಯ ಮುಖಂಡರಾದ ಝಕರಿಯ, ಮುಸ್ತಫಾರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಆರೋಪಿತರು ಏಕಾಏಕಿಯಾಗಿ ಯಾವುದೇ ಅನುಮತಿ ಪಡೆಯದೆ ಅಕ್ರಮ ಕೂಟ ಸೇರಿಕೊಂಡು ಪೊಲೀಸ್ ಠಾಣೆಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಗುಂಪು ಕಟ್ಟಿಕೊಂಡು ಸೇರಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅಡ್ಡಿ ಯುಂಟು ಮಾಡುತ್ತಾ, ಸಂಜೆ 6 ಗಂಟೆಯ ಸುಮಾರಿಗೆ ಆರೋಪಿಗಳು ಠಾಣೆಗೆ ಪ್ರವೇಶಿಸಲು ಪ್ರಯತ್ನಿಸಿದ್ದು, ಈ ಸಂದರ್ಭ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತಳ್ಳಿ ಅವರ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಲ್ಲದೆ, ಯಾವುದೇ ಮಾಸ್ಕ್ ಧರಿಸದೆ ಸರಕಾರವು ಹೊರಡಿಸಿದ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಲಂ: 143.147. 151 341 353 269 270 en 149 ಭಾರತೀಯ ದಂಡ ಸಂಹಿತೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆಯತ್ನ, ಮಾನಭಂಗ ಯತ್ನ ಪ್ರಕರಣ: ಎರಡನೇ ದೂರು ನೀಡಿರುವ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಓಮನ ಎನ್.ಕೆ., 144 ಸೆಕ್ಷನ್ ಜಾರಿಯಲ್ಲಿದ್ದರೂ ಪೊಲೀಸ್ ಠಾಣೆಯ ಎದುರು ಜಮಾಯಿಸಿ, ಪ್ರತಿಭಟನೆ ನಡೆಸಿದ್ದ ಗುಂಪು ಪೊಲೀಸ್ ಠಾಣೆಯ ಒಳಗೆ ಏಕಾಏಕಿ ನುಗ್ಗಲು ಪ್ರಯತ್ನಿಸಿದ್ದು, ಸ್ಥಳದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ನನಗೆ ಹಲ್ಲೆ ನಡೆಸಿ, ಸಮವಸ್ತ್ರವನ್ನು ಹರಿದು ಹಲ್ಲೆ ನಡೆಸಿರುವುದಲ್ಲದೆ, ಮಾನಭಂಗಕ್ಕೆ ಯತ್ನಿಸಿ ಕೊಲೆಯತ್ನ ನಡೆಸಿದ್ದಾರೆ. ಅಲ್ಲದೇ, ಇದೇ ಸಂದರ್ಭ ನನ್ನ ಜೊತೆ ಕರ್ತವ್ಯದಲ್ಲಿದ್ದ ರೇಣು 2 ಹಾಗೂ ಇತರ ಪೊಲೀಸರಿಗೆ, ಅವರ ಮೇಲಾಧಿಕಾರಿಗಳಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಆರೋಪಿಗಳ ವಿರುದ್ಧ ಕಲಂ: 143,147,15 1,341,354,332,353,427,307,269,27 0 ಜೊತೆಗೆ 149 ಭಾದಂಸಂ ಮತ್ತು ಕಲಂ:2(ಎ), ಕೆಪಿಡಿಎಲ್ ಪಿ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧನ: ಕೊಲೆಯತ್ನ ಹಾಗೂ ಮಾನಭಂಗ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ಆರೋಪಿಗಳಾದ ಮುಹಮ್ಮದ್ ತಾಹಿರ್, ಸ್ವಾದಿಕ್, ಅಬ್ದುಲ್ ಮುಬಾರಕ್, ಅಬ್ದುಲ್ ಶರೀನ್, ಮುಹಮ್ಮದ್ ಜಾಹಿರ್, ಸುಜೀರ್ ಮುಹಮ್ಮದ್ ಫೈಝಲ್, ಮುಹಮ್ಮದ್ ಹನೀಫ್, ಎನ್. ಖಾಸಿಂ, ಮುಹಮ್ಮದ್ ಆಸಿಫ್, ತುಫೈಲ್ ಮುಹಮ್ಮದ್ ಎಂಬವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಬಗ್ಗೆ ಪೊಲೀಸರು ಕಲಂ 143,147,148,332 504, 427, 353, 307 ಜೊತೆಗೆ 149 ಭಾದಂಸಂ ಮತ್ತು ಕಲಂ 2(ಎ) ಕೆಪಿಡಿಎ ಆ್ಯಕ್ಷನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.