ಭಟ್ಕಳ: ಮಾವಿನಕುರ್ವೆ ಗ್ರಾ.ಪಂ.ವ್ಯಾಪ್ತಿಯ ಬೆಳ್ನಿ ಡೊಂಗರಪಳ್ಳಿ ಹಾಗೂ ಬಂದರ ರಸ್ತೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಸ್ಥಳೀಯ ಜನರು ವಿರೋಧಿಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಭಾಗದಲ್ಲಿ ಹಲವು ಮನೆಗಳು, ಪುರಾತನ, ದರ್ಗಾ, ದೇವಸ್ಥಾನ ಇದ್ದು ರೈತರ ಜಮೀನು ಕೂಡಾ ಇರುತ್ತದೆ, ಈ ಜನವಸತಿ ಪ್ರದೇಶದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಮಾಡಿದ್ದರೆ ಈ ಭಾಗದಲ್ಲಿ ರೋಗ ರುಜಿನಗಳು ಹರಡುವ ಭೀತಿ ಇರುತ್ತದೆ. ಅಲ್ಲದೇ ಈ ಭಾಗದಿಂದ ಕೆಲ ಭಾಗದಲ್ಲಿ ನೂರಾರು ಹಿಂದೂ ಮುಸ್ಲಿಂ ಮನೆಗಳದ್ದು ಮನೆಯ ಕುಡಿಯುವ ನೀರಿನ ಬಾವಿಗೆ ಕಲುಷಿತ ನೀರು ಬಂದು ನಂತರದಲ್ಲಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ, ಈ ಭಾಗದಲ್ಲಿ ಮನೆಗಳು ಅಲ್ಲದೇ ಶಾಲೆ, ಪುರಾತನ, ಮಸೀದಿ, ದೇವಸ್ಥಾನ, ದರ್ಗಾ ಇದ್ದು ಕಸ ವಿಲೇವಾರಿ ಘಟಕದಿಂದ ನಮ್ಮ ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ.
ಜನರ ಮಧ್ಯದಲ್ಲಿ ಕಸ ಹಾಕಲುಪರಿಸರ ಮಾಲಿನ್ಯ ಇಲಾಖೆಯವರು ಕೂಡಾ ಒಪ್ಪತಕ್ಕದ್ದಲ್ಲ, ಈ ರೀತಿಯಾಗಿ ಏನಾದರು ನಮ್ಮ ವಿರೋಧದ ನಡುವೆಯೂ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೆಲಸ ಮುಂದುವರಿದರೆ ಮುಂದಾಗುವ ಪರಿಣಾಮಕ್ಕೆ ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯತ್ ಹೊಣೆಯಾಗಬೇಕಾಗುತ್ತದೆ. ತ್ಯಾಜ್ಯ ವಿಲೇವಾರಿ ಘಟಕದ ಕೆಲಸ ಮುಂದುವರಿದರೆ ತೀವ್ರ ಹೋರಾಟ ಮಾಡುವುದು ಅನಿವಾರ್ಯವಾಗುವುದು ತಕ್ಷಣ ಕೆಲಸ ನಿಲ್ಲಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದರು. ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಮನವಿ ಪತ್ರವನ್ನು ಸ್ವೀಕರಿಸಿದರು.
ಯೂಸುಫ್ ಬೆಲ್ಲಿ, ಫವಾಜ್ ನದ್ವಿ, ಜಲಾಲ್, ಶಾಹಿದ್, ಸಿದ್ಧಾರ್ಥ ನಾಯ್ಕ, ಮಂಜುನಾಥ ನಾಯ್ಕ, ಸಚಿನ್, ಸೈದ್ ಉಮರ್, ಫಹದ್ ಮುಂತಾದವರು ಉಪಸ್ಥಿತರಿದ್ದರು.