ಭಟ್ಕಳ: ಕೊರೊನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಸೌಹಾರ್ದತೆ ಅತ್ಯಗತ್ಯವಾಗಿದೆ. ಸರಕಾರದ ಆದೇಶ ಪಾಲನೆಯಾಗದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭಟ್ಕಳ ಎಎಸ್ಪಿ ನಿಖಿಲ್ ಬಿ. ಹೇಳಿದ್ದಾರೆ.
ಅವರು ಮಂಗಳವಾರ ಭಟ್ಕಳ ಸಹಾಯಕ ಆಯುಕ್ತರ ಕಚೇರಿಯಲ್ಲಿ ಈದ್ ಉಲ್ ಆಝ್ಹಾ (ಬಕ್ರೀದ್) ಪ್ರಯುಕ್ತ ಕರೆಯಲಾದ ಶಾಂತಿ ಸಭೆಯಲ್ಲಿ ಮಾತನಾಡಿದರು. ಯಾವ ವ್ಯಕ್ತಿಯೇ ಆಗಿರಲಿ ಕಾನೂನು ಕೈಗೆ ತೆಗೆದುಕೊಳ್ಳಲು ಯಾರಿಗೂ ಆಸ್ಪದ ಇಲ್ಲ. ಸಮಸ್ಯೆ ಇದ್ದರೆ ನೇರವಾಗಿ ಪೊಲೀಸರನ್ನು ಸಂಪರ್ಕಿಸಬಹುದು. ದಿನದ 24 ಗಂಟೆಯೂ ಜನ ಸೇವೆಗೆ ಪೊಲೀಸ್ ಇಲಾಖೆ ಸಿದ್ಧವಿದೆ. ಬುದ್ದಿಹೀನ, ಕಾನೂನು ಬಾಹೀರ ಚಟುವಟಿಕೆಗಳನ್ನು ಸಹಿಸಿಕೊಳ್ಳಲು ನಮ್ಮಿಂದ ಸಾಧ್ಯ ಇಲ್ಲ. ಕೋವಿಡ್-19 ತಡೆಯುವಲ್ಲಿ ಸ್ಥಳೀಯವಾಗಿ ಸಾರ್ವಜನಿಕರಿಂದ ಉತ್ತಮ ಸಹಕಾರ ದೊರೆತಿದೆ. ಹಬ್ಬಹರಿದಿನಗಳ ಸಂದರ್ಭದಲ್ಲಿಯೂ ಅದು ಪುನರಾವರ್ತನೆಯಾಗಬೇಕು ಎಂದರು. ಭಟ್ಕಳ ಸಹಾಯಕ ಆಯುಕ್ತ ಭರತ್ ಮಾತನಾಡಿ, ಬಕ್ರೀದ್ ಆಚರಣೆಯ ಸಂದರ್ಭದಲ್ಲಿ ಶಾರೀರಿಕ ಅಂತರ ಪಾಲನೆಗೆ ಒತ್ತು ನೀಡಬೇಕು ಎಂದು ತಿಳಿಸಿದರು. ತಹಸೀಲ್ದಾರ ಎಸ್. ರವಿಚಂದ್ರ, ಸಿಪಿಐ ದಿವಾಕರ, ಎಸೈ ಭರತ್ ಉಪಸ್ಥಿತರಿದ್ದರು.
ಸಭೆಯಲ್ಲಿ ಮುಖಂಡರು ಹೇಳಿದ್ದೇನು?
ಬಕ್ರೀದ್ ಆಚರಣೆಯ ಸಂದರ್ಭದಲ್ಲಿ ಪ್ರಾಣಿಗಳ ತ್ಯಾಜ್ಯ ವಸ್ತು ವಿಲೇವಾರಿ ನಿರ್ವಹಣೆ ಸರಿಯಾಗಿ ಆಗಬೇಕು, ಇಲ್ಲದಿದ್ದರೆ ಕೊರೊನಾದಂತಹ ರೋಗಗಳು ಊರನ್ನು ವ್ಯಾಪಿಸಿಕೊಳ್ಳಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಕೇದಾರ್ ಕೊಲ್ಲೆ ಸಭೆಯ ಗಮನಕ್ಕೆ ತಂದರು. ಮಿತಿಮೀರಿದ ಓಡಾಟ, ಕಾನೂನು ಬಾಹೀರ ನಡವಳಿಕೆಯನ್ನು ನಿಯಂತ್ರಿಸಲು ಆಯಾ ಸಮುದಾಯದ ಮುಖಂಡರು ಕಾಳಜಿ ವಹಿಸಬೇಕು, ಇದರಿಂದ ಶಾಂತಿ ಪಾಲನೆ ಸುಲಭವಾಗುತ್ತದೆ ಎಂದು ಆಸರಕೇರಿಯ ಶ್ರೀಕಾಂತ ನಾಯ್ಕ ತಿಳಿಸಿದರು. ಭಟ್ಕಳ ಮಜ್ಲಿಸೇ ಇಸ್ಲಾ ತಂಜೀಮ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಕೀಬ್ ಎಮ್.ಜೆ., ಮುಖಂಡ ಹನೀಫ್ ಶಬಾಬ್, ಬಕ್ರೀದ್ ಆಚರಣೆಯ ಕಾಲದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಸೌಹಾರ್ದತೆ ನೆಲೆಸಲು ಎಲ್ಲರ ಸಹಕಾರವನ್ನು ಕೋರುವುದಾಗಿ ತಿಳಿಸಿದರು. ಮೊಹಿದ್ದೀನ್ ರುಕ್ನುದ್ದೀನ್, ಶಾಂತಾರಾಮ ಭಟ್ಕಳ, ಇಮ್ರಾನ್ ಲಂಕಾ, ಮುನೀರ್ ಮೊದಲಾದವರು ಉಪಸ್ಥಿತರಿದ್ದರು.