ಭದ್ರತಾ ವೈಫಲ್ಯ: ಅಮಿತ್ ಶಾ ಹೇಳಿಕೆಗೆ ಪಟ್ಟು; 92 ಪ್ರತಿಪಕ್ಷ ಸಂಸದರ ಅಮಾನತು

Source: Vb | By I.G. Bhatkali | Published on 19th December 2023, 8:30 AM | National News |

ಹೊಸದಿಲ್ಲಿ: ಸಂಸತ್ ಭದ್ರತಾ ವೈಫಲ್ಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಾಗಿ ಪಟ್ಟು ಹಿಡಿದಿದ್ದ ಲೋಕಸಭೆಯ 33 ಮತ್ತು ರಾಜ್ಯಸಭೆಯ 45 ಸದಸ್ಯರು ಸೇರಿದಂತೆ ಒಟ್ಟು 78 ಪ್ರತಿಪಕ್ಷ ಸಂಸದರನ್ನು ಸಂಸತ್ ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡಿದ್ದಕ್ಕಾಗಿ ಸೋಮವಾರ ಅಮಾನತು ಗೊಳಿಸಲಾಗಿದೆ. ಇದರೊಂದಿಗೆ ಅಮಾನತುಗೊಂಡಿರುವ ಸಂಸದರ ಒಟ್ಟು ಸಂಖ್ಯೆ 92ಕ್ಕೇರಿದೆ. ಕಳೆದ ವಾರ ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡಿದ್ದಕ್ಕಾಗಿ ಲೋಕಸಭೆಯ 13 ಮತ್ತು ರಾಜ್ಯಸಭೆಯ ಓರ್ವ ಪ್ರತಿಪಕ್ಷಸದಸ್ಯರನ್ನು ಅಮಾನತುಗೊಳಿಸಲಾಗಿತ್ತು.

ಸಂಸತ್ ಭದ್ರತೆ ಉಲ್ಲಂಘನೆ ಕುರಿತು ಫಲಕಗಳನ್ನು ಪ್ರದರ್ಶಿಸಿದ್ದಕ್ಕಾಗಿ ಮತ್ತು ಘೋಷಣೆಗಳನ್ನು ಕೂಗಿದ್ದಕ್ಕಾಗಿ ಅಧೀರ್ ರಂಜನ್ ಚೌಧುರಿ, ಟಿ.ಆರ್.ಬಾಲು ಮತ್ತು ಸೌಗತ್ ರೇ ಸೇರಿದಂತೆ 33 ಪ್ರತಿಪಕ್ಷ ಸದಸ್ಯರನ್ನು ಲೋಕಸಭೆಯು ಸದನದಿಂದ ಅಮಾನತುಗೊಳಿಸಿತು.

ಪ್ರತಿಪಕ್ಷ ಸದಸ್ಯರು ಭದ್ರತಾ ವೈಫಲ್ಯದ ಕುರಿತು ಶಾ ಹೇಳಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು.

ಡಿಎಂಕೆಯ 10,ಟಿಎಂಸಿಯ ಒಂಭತ್ತು, ಕಾಂಗ್ರೆಸ್‌ನ ಎಂಟು, ಐಯುಎಂಎಲ್, ಜೆಡಿಯು ಮತ್ತು ಆರ್‌ಎಪಿಯ ತಲಾ ಓರ್ವರು ಸೇರಿದಂತೆ 30 ಸದಸ್ಯರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಮತ್ತು ಇತರ ಮೂವರು ಕಾಂಗ್ರೆಸ್ ಸದಸ್ಯರನ್ನು ಹಕ್ಕು ಬಾಧ್ಯತಾ ಸಮಿತಿಯ ವರದಿಯು ಬರುವವರೆಗೆ ಅಮಾನತುಗೊಳಿಸಲಾಗಿದೆ.

33 ಸದಸ್ಯರ ಅಮಾನತು ಘೋಷಣೆಯ ಬೆನ್ನಿಗೇ ಲೋಕಸಭೆಯನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಕಾಂಗ್ರೆಸ್‌ನ ಗೌರವ್ ಗೊಗೊಯಿ ಮತ್ತು ಕೆ.ಮುರಳೀಧರನ್, ಟಿಎಂಸಿಯ ಪ್ರಸೂನ್ ಬ್ಯಾನರ್ಜಿ ಮತ್ತು ಕಾಕೋಲಿ ಘೋಷ್ ದಸ್ತಿದಾ‌ರ್, ಡಿಎಂಕೆಯ ದಯಾನಿಧಿ ಮಾರನ್ ಮತ್ತು ಎ.ರಾಜಾ ಅವರೂ ಇಂದು ಅಮಾನತುಗೊಂಡ ಲೋಕಸಭಾ ಸಂಸದರಲ್ಲಿ ಸೇರಿದ್ದಾರೆ.

ಸ್ಪೀಕರ್ ವೇದಿಕೆಯನ್ನು ಹತ್ತಿ ಘೋಷಣೆಗಳನ್ನು ಕೂಗಿದ್ದ ಕಾಂಗ್ರೆಸ್ ಸದಸ್ಯರಾದ ಕೆ.ಜಯಕುಮಾ‌ರ್, ವಿಜಯ ವಸಂತ ಮತ್ತು ಅಬ್ದುಲ್ ಖಾಲಿಕ್ ಅವರನ್ನು ಅವರ ಅಸಂಸದೀಯ ನಡವಳಿಕೆ ಕುರಿತು ಹಕ್ಕು ಬಾಧ್ಯತೆ ಸಮಿತಿಯ ವರದಿ ಬರುವವರೆಗೆ ಅಮಾನತುಗೊಳಿಸಲಾಗಿದೆ.

ಅತ್ತ ರಾಜ್ಯಸಭೆಯಲ್ಲಿ ಸಂಸತ್ ಭದ್ರತಾ ವೈಫಲ್ಯ ಕುರಿತು ಘೋಷಣೆಗಳನ್ನು ಕೂಗಿದ್ದ ಮತ್ತು ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡಿದ್ದ 45 ಪ್ರತಿಪಕ್ಷ ಸದಸ್ಯರನ್ನು ಅಶಿಸ್ತಿನ ವರ್ತನೆ ಮತ್ತು ಪೀಠದ ನಿರ್ದೇಶನಗಳನ್ನು ಧಿಕ್ಕರಿಸಿದ್ದಕ್ಕಾಗಿ ಸದನದಿಂದ ಅಮಾನತುಗೊಳಿಸಲಾಗಿದೆ.

ಕಾಂಗ್ರೆಸ್ ಸದಸ್ಯರಾದ ಪ್ರಮೋದ್ ತಿವಾರಿ, ಕೆ.ಸಿ. ವೇಣುಗೋಪಾಲ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಎಸ್‌ಪಿಯ ರಾಮಗೋಪಾಲ್ ವರ್ಮಾ ಅಮಾನತುಗೊಂಡ ಸದಸ್ಯರಲ್ಲಿ ಸೇರಿದ್ದಾರೆ.

34 ರಾಜ್ಯಸಭಾ ಸಂಸದರನ್ನು ಚಳಿಗಾಲದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದ್ದರೆ, 11 ಸದಸ್ಯರಿಗೆ ಅವರ ವರ್ತನೆಯ ಬಗ್ಗೆ ಹಕ್ಕು ಬಾಧ್ಯತಾ ಸಮಿತಿಯ ವಿಚರಣಾ ವರದಿಯು ಬರುವವರೆಗೆ ಸದನದಿಂದ ದೂರವಿರುವಂತೆ ತಾಕೀತು ಮಾಡಲಾಗಿದೆ. ಈ ಸಂಬಂಧ ಸದನ ನಾಯಕ ಪಿಯೂಷ್ ಗೋಯಲ್ ಅವರು ಮಂಡಿಸಿದ ಎರಡು ನಿರ್ಣಯಗಳನ್ನು ರಾಜ್ಯಸಭೆಯು ಅಂಗೀಕರಿಸಿತು.

ಮೂರು ತಿಂಗಳುಗಳಲ್ಲಿ ತನ್ನ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದ್ದು, ಅಲ್ಲಿಯವರೆಗೆ 11 ಸದಸ್ಯರು ಸದನದ ಕಲಾಪಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ.

ಸಭಾಪತಿ ಜಗದೀಪ್ ಧನರ್ ಅವರು ಮೊದಲು ಅಮಾನತುಗೊಂಡ ಸದಸ್ಯರ ಹೆಸರುಗಳನ್ನು ಓದಿ ನಂತರ ನಿರ್ಣಯವನ್ನು ಮತಕ್ಕೆ ಹಾಕಿದ್ದು, ಅದು ಧ್ವನಿಮತದಿಂದ ಅಂಗೀಕಾರಗೊಂಡಿತು. ಸಂಸತ್ತಿನ ಚಳಿಗಾಲದ ಅಧಿವೇಶನವು ಡಿ.22ರಂದು ಅಂತ್ಯಗೊಳ್ಳಲಿದೆ.

ಸಂಸತ್‌ನ ಇತಿಹಾಸದಲ್ಲೇ ಗರಿಷ್ಠ: ಸಂಸತ್‌ನ ಉಭಯ ಸದನಗಳಾದ ಲೋಕಸಭೆ ನಿಮತ್ತು ರಾಜ್ಯಸಭೆಗಳಲ್ಲಿ ಒಟ್ಟು 92 ವಿಪಕ್ಷ ಸಂಸದರನ್ನು ಪ್ರಸಕ್ತ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ಇಷ್ಟು ಸಂಖ್ಯೆಯ ಸಂಸದರನ್ನು ಅಮಾನತುಗೊಳಿಸಿರುವುದು ಸಂಸತ್‌ ಇತಿಹಾಸದಲ್ಲಿ ಇದೇ ಮೊದಲಸಲವಾಗಿದೆ. ಸೋಮವಾರ ಲೋಕಸಭೆಯ 33 ಮತ್ತು ರಾಜ್ಯಸಭೆಯ 45 ಸಂಸದರನ್ನು ಅಮಾನತುಗೊಳಿಸಲಾಗಿದೆ. ಡಿಸೆಂಬರ್ 13ರಂದು ಲೋಕಸಭೆ, ರಾಜ್ಯಸಭೆಗಳ ಒಟ್ಟು 14 ಸಂಸದರನ್ನು ಅಮಾನತು ಗೊಳಿಸಲಾಗಿತ್ತು.

1989ರಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ಇಂದಿರಾ ಗಾಂಧಿ ಹತ್ಯೆ ಕುರಿತ ಠಾಕೂರ್ ಸಮಿತಿಯ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದಾಗ ಭಾರೀ ಗದ್ದಲ ಉಂಟಾಗಿ, 63 ಸಂಸದರನ್ನು ಅಮಾನತು ಗೊಳಿಸಲಾಗಿತ್ತು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...