ನವದೆಹಲಿ, ಜ ೬: ಬೆಂಗಳೂರಿಂದ ದೆಹಲಿಗೆ ಹೊರಟಿದ್ದ ಸ್ಪೈಸ್ಜೆಟ್ ವಿಮಾನವು ಶುಕ್ರವಾರ ಬೆಳಗ್ಗೆ ತಾಂತ್ರಿಕ ದೋಷದಿಂದಾಗಿ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
ಎಸ್ಜಿ 136 ವಿಮಾನದ ಗಾಲಿಗಳನ್ನು ಕೆಳಗಿಳಿಸುವ ಹೈಡ್ರಾಲಿಕ್ ದ್ರವದ ಸೋರಿಕೆಯಿಂದಾಗಿ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ತೊಂದರೆ ಕಂಡು ಬಂದಿತ್ತು. ತಕ್ಷಣ ಎಚ್ಚೆತ್ತ ಸಿಬ್ಬಂದಿ ವರ್ಗ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂರ್ಪಸಿ ತುರ್ತು ಭೂಸ್ಪರ್ಶಕ್ಕೆ ಸೂಕ್ತ ವ್ಯವಸ್ಥೆಯನ್ನು ಆಗ್ರಹಿಸಿದ್ದರು. ವಿಮಾನ ಬೆಳಗ್ಗೆ 8.45ಕ್ಕೆ ಸುರಕ್ಷಿತವಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ವಿಮಾನದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 176 ಜನರಿದ್ದರು ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸ್ಪೈಸ್ಜೆಟ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.