ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ

Source: VB | By S O News | Published on 21st June 2021, 2:30 PM | National News | Technology |

ಹೊಸದಿಲ್ಲಿ: ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ಸಾಧನಗಳು ಬಳಕೆಯಾಗದೆ ಬಿದ್ದುಕೊಂಡಿವೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯೊಂದು ಈ ಆಘಾತಕಾರಿ ವಿಷಯವನ್ನು ಬಯಲುಗೊಳಿಸಿದೆ.

ಮೇ ಅಂತ್ಯದವರೆಗೆ ವಿವಿಧ ರಾಜ್ಯಗಳ ಉಗ್ರಾಣಗಳಲ್ಲಿ 5,500ಕ್ಕೂ ಅಧಿಕ ವೆಂಟಿಲೇಟರ್ ಗಳು ಧೂಳು ತಿನ್ನುತ್ತಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಂಗ್ಲ ಮಾಧ್ಯಮವೊಂದಕ್ಕೆ ನೀಡಿರುವ ಆರ್ ಟಿಐ ಉತ್ತರದಲ್ಲಿ ತಿಳಿಸಿದೆ. ಬೇಡಿಕೆ ಸಲ್ಲಿಸಲಾಗಿದ್ದ ದೇಶಾದ್ಯಂತ ವಿವಿಧ ಆಸ್ಪತ್ರೆಗಳಿಗೆ ಪೂರೈಸಲಾದ ಮತ್ತು ಅಳವಡಿಸಲಾದ ವೆಂಟಿಲೇಟರ್‌ಗಳ ಸಂಖ್ಯೆಯಲ್ಲಿಯೂ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿವೆ.

ಆರ್‌ಟಿಐ ಉತ್ತರದಲ್ಲಿ ತಿಳಿಸಿರುವಂತೆ ಆರೋಗ್ಯ ಸಚಿವಾಲಯವು 60,559 ವೆಂಟಿಲೇಟರ್‌ಗಳ ಖರೀದಿಗಾಗಿ ವಿವಿಧ ತಯಾರಕರಿಗೆ ಬೇಡಿಕೆಗಳನ್ನು ಸಲ್ಲಿಸಿತ್ತು ಮತ್ತು ಈ ಪೈಕಿ 46,511 ವೆಂಟಿಲೇಟರ್ ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿತ್ತು. ಉಳಿದ ವೆಂಟಿಲೇಟರ್‌ಗಳನ್ನು ಕೇಂದ್ರ ಸರಕಾರದ ಆಸ್ಪತ್ರೆಗಳಿಗೆ ಪೂರೈಸಲಾಗಿತ್ತು. ರಾಜ್ಯಗಳಿಗೆ 45,191 ವೆಂಟಿಲೇಟರ್‌ಗಳನ್ನು ಪೂರೈಸಲಾಗಿದ್ದು, ಈ ಪೈಕಿ 39,640 ವೆಂಟಿಲೇಟರ್‌ಗಳನ್ನು ಅವು ಸ್ಥಾಪಿಸಿದ್ದು,5,551 ವೆಂಟಿಲೇಟರ್‌ಗಳು ಬಳಕೆಯಾಗದೆ ಧೂಳುಹಿಡಿದಿವೆ.

ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಕರ್ನಾಟಕ ಮತ್ತು ಗುಜರಾತ್‌ಗಳಲ್ಲಿ ಗರಿಷ್ಠ ಸಂಖ್ಯೆಯ ವೆಂಟಿಲೇಟರ್‌ಗಳು ಬಳಕೆಯಾಗಿಲ್ಲ ಎಂದು ಆರ್‌ಟಿಐ ಉತ್ತರವು ತೋರಿಸಿದೆ. ಉತ್ತರ ಪ್ರದೇಶಕ್ಕೆ ಪೂರೈಕೆಯಾಗಿದ್ದ 5,116 ವೆಂಟಿಲೇಟರ್‌ಗಳ ಪೈಕಿ ಮೇ ಅಂತ್ಯದವರೆಗೆ 4,010 ಯಂತ್ರಗಳು ಅಳವಡಿಕೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, 1,106 ಯಂತ್ರಗಳು ಇನ್ನಷ್ಟೇ ಅಳವಡಿಕೆಯಾಗಬೇಕಿದ್ದವು. ಗುಜರಾತ್ ಮತ್ತು ಕರ್ನಾಟಕಕ್ಕೆ ಅನುಕ್ರಮವಾಗಿ 5,600 ಮತ್ತು 2,913 ವೆಂಟಿಲೇಟರ್‌ಗಳು ಪೂರೈಕೆಯಾಗಿದ್ದು, ಈ ಪೈಕಿ 4,991 ಮತ್ತು 2,004 ಯಂತ್ರಗಳು ಸ್ಥಾಪನೆಗೊಂಡಿವೆ, ಅಂದರೆ ಇವೆರಡು ರಾಜ್ಯಗಳಲ್ಲಿ ಅನುಕ್ರಮವಾಗಿ 600ಕ್ಕೂ ಅಧಿಕ ಮತ್ತು 900ಕ್ಕೂ ಅಧಿಕ ಯಂತ್ರಗಳು ಮೂಲೆಗುಂಪಾಗಿವೆ.

ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಆಡಳಿತದ ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಅನುಕ್ರಮವಾಗಿ ಕೇವಲ 56 ಮತ್ತು 29 ವೆಂಟಿಲೇಟರ್‌ಗಳು ಬಳಕೆಯಾಗದೆ ಉಳಿದುಕೊಂಡಿವೆ. ಪ್ರತಿಪಕ್ಷ ಆಡಳಿತವಿರುವ ರಾಜ್ಯಗಳಲ್ಲಿ ಜಾರ್ಖಂಡ್ ತನಗೆ ಪೂರೈಕೆಯಾಗಿದ್ದ 1,210 ವೆಂಟಿಲೇಟರ್‌ಗಳ ಪೈಕಿ ಕೇವಲ 461 ವೆಂಟಿಲೇಟರ್ ಗಳನ್ನು ಆಸ್ಪತ್ರೆಗಳಲ್ಲಿ ಸ್ಥಾಪಿಸುವ ಮೂಲಕ ಅತ್ಯಂತ ಹಿಂದುಳಿದಿದೆ.

ಮಧ್ಯಪ್ರದೇಶದಲ್ಲಿ ರೋಗಿಗಳು ವೆಂಟಿಲೇಟರ್ ಹಾಸಿಗೆಗಳಿಗಾಗಿ ಪರದಾಡುತ್ತಿದ್ದರೂ ರಾಜ್ಯ ಸರಕಾರವು ಈ ತಿಂಗಳ ಪೂರ್ವಾರ್ಧದಲ್ಲಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಹೇಳಿಕೆಯಲ್ಲಿ ಅಗತ್ಯ ಸಂದರ್ಭಗಳಿಗಾಗಿ 204 ವೆಂಟಿಲೇಟರ್ ಗಳನ್ನು ಗೋದಾಮಿನಲ್ಲಿ ದಾಸ್ತಾನಿಡಲಾಗಿದೆ ಎಂದು ತಿಳಿಸಿತ್ತು. ಮೇ ತಿಂಗಳಿನಲ್ಲಿ ಕೋವಿಡ್ ಎರಡನೇ ಅಲೆಯು ಉತ್ತುಂಗದಲ್ಲಿದ್ದಾಗ ಪಿಎಂ ಕೇರ್ಸ್ ಅಡಿ ತಮಗೆ ಪೂರೈಸಲಾದ ವೆಂಟಿಲೇಟರ್‌ಗಳು ದೋಷಪೂರಿತವಾಗಿವೆ ಮತ್ತು ಕಳಪೆ ಗುಣಮಟ್ಟದ್ದಾಗಿವೆ ಎಂದು ಪಂಜಾಬ್ ಮತ್ತು ರಾಜಸ್ಥಾನ ಸರಕಾರಗಳು ಆರೋಪಿಸಿದ್ದವು.

ನೂರಾರು ವೆಂಟಿಲೇಟರ್‌ಗಳು ಹಾಳಾಗಿ ಉಪಯೋಗಿ ಸಲಾರದ ಸ್ಥಿತಿಯಲ್ಲಿವೆ ಎಂದು ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಿಂದ ವರದಿಯಾಗಿದೆ. ಹಲವಾರು ಪ್ರಕರಣಗಳಲ್ಲಿ ವೆಂಟಿಲೇಟರ್‌ಗಳನ್ನು ನಿರ್ವಹಿಸಲು ನುರಿತ ವೈದ್ಯಕೀಯ ಸಿಬ್ಬಂದಿಯಿಲ್ಲದೆ ಅವುಗಳ ಪ್ಯಾಕ್‌ನ್ನು ಇನ್ನೂ ಬಿಚ್ಚಿಯೇ ಇಲ್ಲ.

ಕಾರ್ಯ ನಿರ್ವಹಿಸದ ವೆಂಟಿಲೇಟರ್‌ಗಳು ಮತ್ತು ತಯಾರಕರಿಗೆ ವಾಪಸ್ ಕಳುಹಿಸಲಾದ ವೆಂಟಿಲೇಟರ್‌ಗಳ ಕುರಿತ ಪ್ರಶ್ನೆಗೆ ಆರೋಗ್ಯ ಸಚಿವಾಲಯವು, ಕೇಂದ್ರದ ಬಳಿ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ತನ್ನ ಉತ್ತರದಲ್ಲಿ ತಿಳಿಸಿದೆ. ದೂರುಗಳನ್ನು ಸ್ವೀಕರಿಸಿದ ಬಳಿಕ ಯಂತ್ರಗಳ ಕಾರ್ಯ ನಿರ್ವಹಣೆಯ ಕುರಿತು ಆಡಿಟ್‌ಗೆ ತಾನು ಆದೇಶಿಸಿರುವುದಾಗಿ ಅದು ಬಹಿರಂಗಗೊಳಿಸಿದೆ.

ಸರಕಾರವು ವಿವಿಧ ಕಂಪೆನಿಗಳಿಂದ ಖರೀದಿಸಿರುವ ವೆಂಟಿಲೇಟರ್‌ಗಳ ದರಗಳಲ್ಲಿಯೂ ಬೃಹತ್ ವ್ಯತ್ಯಾಸಗಳಿವೆ. ಪ್ರತಿ ಯೂನಿಟ್‌ಗೆ 5,04,640 ರೂ.ನಂತೆ ಭಾರತ ಇಲೆಕ್ಟ್ರಾನಿಕ್ಸ್ ಗೆ 30,000 ಯಂತ್ರಗಳ ಖರೀದಿಗೆ ಬೇಡಿಕೆ ಸಲ್ಲಿಸಲಾಗಿದ್ದರೆ, 1,66,376 ರೂ.ಗಳಂತೆ 9,500 ಯಂತ್ರಗಳ ಖರೀದಿಗಾಗಿ ಎಎಂಟಿಝಡ್ (ಬೇಸಿಕ್)ಗೆ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಅಲೈಡ್ ಮೆಡಿಕಲ್ ಪ್ರತಿ ಯೂನಿಟ್‌ಗೆ 8,62,400 ರೂ.ದರದಲ್ಲಿ 350 ವೆಂಟಿಲೇಟರ್‌ಗಳನ್ನು ಪೂರೈಸಿತ್ತು.

ಸೈನೊಫಾರ್ಮ್‌ನಿಂದ ತಲಾ 10,89,500 ರೂ.ಗಳಂತೆ ಸುಮಾರು 1,000,ಹ್ಯಾಮಿಲ್ಟನ್‌ನಿಂದ ತಲಾ 10,32,400 ರೂ.ದರದಲ್ಲಿ 771 ಮತ್ತು ಡೇಜರ್‌ನಿಂದ ತಲಾ 17 ಲ.ರೂ.ದರದಲ್ಲಿ 15 ವೆಂಟಿಲೇಟರ್‌ಗಳನ್ನು ಖರೀದಿಸಲಾಗಿತ್ತು.

 

ರಾಜ್ಯ ಪೂರೈಕೆಯಾಗಿರುವ ವೆಂಟೆಲೇಟರ್‌ಗಳು ಅಳವಡಿಕೆಯಾಗಿರುವ ವೆಂಟಿಲೇಟರ್‌ಗಳು ಬಳಕೆಯಾಗದ ವೆಂಟಿಲೇಟರ್‌ಗಳು
ಉತ್ತರಪ್ರದೇಶ 5,116 4,010 1,106
ಗುಜರಾತ್ 5,600 4,991

609

ಕರ್ನಾಟಕ 2,913 2,004 909
ಜಾರ್ಖಂಡ್ 1,210 461 749

 

Read These Next

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

'ದಾರಿ ತಪ್ಪಿಸುವ ಜಾಹೀರಾತು' ಸಾರ್ವಜನಿಕ ಕ್ಷಮಾಪಣೆ ಕೇಳಲು ರಾಮ್‌ದೇವ್‌ಗೆ 1 ವಾರದ ಗಡುವು

ಅಲೋಪತಿ ವೈದ್ಯಕೀಯ ಪದ್ಧತಿಯ ವಿರುದ್ಧ ಅಪಪ್ರಚಾರ ಮಾಡದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಯೋಗ ಗುರು ರಾಮ್ ದೇವ್ ಮತ್ತು ಪತಂಜಲಿ ...

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಎ.ಜೆ.ಅಕಾಡೆಮಿ ಹಾಗೂ ನ್ಯೂಶಮ್ಸ್ ಸ್ಕೂಲ್ ವತಿಯಿಂದ ಭಟ್ಕಳ ತಾಲೂಕು ಮಟ್ಟದ ವಿಜ್ಞಾನ ಮತ್ತು ಸಂಶೋಧನೆ ಕುರಿತ ಸ್ಪರ್ಧೆ

ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಪರಿಸರ ...