ಭಟ್ಕಳ: ವಿಶ್ವ ಕ್ಯಾನ್ಸರ್ ದಿನ:ಜಾಗೃತಿಗಾಗಿ 5 ಕಿ.ಮೀ. ಮ್ಯಾರಥಾನ್
ಭಟ್ಕಳ: ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಭಟ್ಕಳದ ಕ್ರಿಯಾಶೀಲ ಗೆಳೆಯರ ಸಂಘ, ಭಟ್ಕಳ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಮತ್ತಿತರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ 'ಭಟ್ಕಳ 5ಕೆ ಮ್ಯಾರಥಾನ್ 2023' ಕ್ಯಾನ್ಸರ್ ಜಾಗ್ರತಿಗಾಗಿ ಓಟ ಯಶಸ್ವಿಯಾಗಿ ನಡೆಯಿತು.
ಭಟ್ಕಳದ ಇತಿಹಾಸದಲ್ಲಿಯೇ ಪ್ರಥಮ ಪ್ರಯೋಗವಾಗಿರುವ ಮ್ಯಾರಥಾನ್ ಗೆ ಯಲ್ವಡಿಕವೂರ ಪಂಚಾಯತಿಯ ಪಿಯು ಕಾಲೇಜು ಮೈದಾನದಲ್ಲಿ ಉಪವಿಭಾಗಾಧಿಕಾರಿ ಮಮತಾದೇವಿ ಹಸಿರು ನಿಶಾನೆ ತೋರಿದರು. ಅಲ್ಲಿಂದ ಸರ್ಪನಕಟ್ಟೆ ಮಾರ್ಗವಾಗಿ ಪುರವರ್ಗ ಜೋಸೆಫ್ ಚರ್ಚ್, ಕಾಸ್ಮುಡಿ ದೇವಸ್ಥಾನ, ಚೌಥನಿ ರಸ್ತೆಯಿಂದ ಹೂವಿನ ಪೇಟೆ ರಸ್ತೆಯಾಗಿ ಮಾರಿಗುಡಿ ದೇವಸ್ಥಾನ, ಪುರಸಭೆ, ಭಟ್ಕಳ ಅರ್ಬನ್ ಬ್ಯಾಂಕ್ ರಸ್ತೆ, ಪಿಎಲ್ಡಿ ಬ್ಯಾಂಕ್, ಸಂಶುದ್ದೀನ್ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಯಿಂದ ಪೊಲೀಸ್ ಮೈದಾನದಲ್ಲಿ ಮ್ಯಾರಥಾನ್ ಸಮಾಪ್ತಿಗೊಂಡಿತು.
ವಯಸ್ಸಿನ ಆಧಾರದ ಮೇಲೆ ನಾಲ್ಕು ವಿಭಾಗದಲ್ಲಿ ಮ್ಯಾರಥಾನ್ ನಡೆಯಿತು. ನೂರಾರು ಜನ ಪಾಲ್ಗೊಂಡು ಜನರಲ್ಲಿ ಕ್ಯಾನ್ಸರ್ ಕುರಿತಾದ ಜಾಗ್ರತಿ ಹಾಗೂ ಮಾಹಿತಿ ನೀಡುವ ಕಾರ್ಯ ಮಾಡಿದರು.