ಗಾಂಜಾ ಮಾರಾಟ ಜಾಲ ಪ್ರಕರಣ; ವೈದ್ಯ ವಿದ್ಯಾರ್ಥಿ ಸಹಿತ ಮತ್ತೆ ಮೂವರ ಬಂಧನ; 13ಕೆ ಏರಿದ ಬಂಧಿತರ ಸಂಖ್ಯೆ
ಮಂಗಳೂರು: ನಗರದ ಪ್ರತಿಷ್ಠಿತ ಎರಡು ವೈದ್ಯಕೀಯ ಕಾಲೇಜುಗಳ ವೈದ್ಯರು ಭಾಗಿಯಾಗಿರುವ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಮಂಗಳೂರು ನಗರ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.
ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ಪೆಥಾಲಜಿ ಎಂಡಿ ವ್ಯಾಸಂಗ ಮಾಡುತ್ತಿರುವ ತುಮಕೂರು ಮೂಲದ ಡಾ.ಹರ್ಷ ಕುಮಾರ್, ಖಾಸಗಿ ಕಾಲೇಜಿ ನಲ್ಲಿ ಅಂತಿಮ ವರ್ಷದ ಡಿ ಫಾರ್ಮಾ ಕಲಿ ಯುತ್ತಿರುವ ಕೇರಳದ ಕೊಚ್ಚಿನ್ ಮೂಲದ ಅಡಾನ್ ದೇವ್ ಮತ್ತು ಮಂಗಳೂರು ಕಸಬ ಬೆಂಗ್ರೆ ನಿವಾಸಿ, ಹಣ್ಣುಹಂಪಲು ಮಾರಾಟ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಹಮ್ಮದ್ ಅಫ್ರಾರ್ (23) ಬಂಧಿತ ಆರೋಪಿಗಳೆಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಬಂಧಿತ ಮೂವರು ಆರೋಪಿಗಳನ್ನು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿ ರುವ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಸೇವನೆ ಜಾಲವೊಂದನ್ನು ಭೇದಿಸಿರುವ ಮಂಗಳೂರು ನಗರ ಪೊಲೀಸರು ನಗರದ ಪ್ರತಿಷ್ಠಿತ 2 ವೈದ್ಯಕೀಯ ಕಾಲೇಜುಗಳ ವೈದ್ಯರು, ವೈದ್ಯಕೀಯ ಮತ್ತು ದಂತ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 10 ಮಂದಿ ಆರೋಪಿಗಳನ್ನು ಜ.11ರಂದು ಬಂಧಿಸಿದ್ದರು. ಈ ಪೈಕಿ ನಾಲ್ವರು ಯುವತಿಯರೂ ಸೇರಿದ್ದರು. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಒಟ್ಟು ಸಂಖ್ಯೆ 13ಕ್ಕೇರಿದೆ.
ಮಂಗಳೂರಿನಲ್ಲಿ ಕಳೆದ 15 ವರ್ಷಗಳಿಂದ ನೆಲೆಸಿರುವ ಬ್ರಿಟನ್ ಪ್ರಜೆ ನೀಲ್ ಕಿಶೋರಿ ಲಾಲ್ ರಾಮ್ಜಿ ಶಾ ಎಂಬಾತನನ್ನು ಮರಕ್ಕೆ ಪಡೆಯುವುದರೊಂದಿಗೆ ಪ್ರಕರಣ ಬೆಳಕಿಗೆ ಬಂದಿತ್ತು.
ಆತ ನೀಡಿದ ಮಾಹಿತಿಯನ್ನು ಆಧರಿಸಿ ವೈದ್ಯರಾದ ಕೇರಳ ಮೂಲದ ಡಾ.ಸಮೀರ್ (32) ಮತ್ತು ತಮಿಳುನಾಡಿನ ಡಾ.ಮಣಿಮಾರನ್ ಮುತ್ತು (28), ವೈದ್ಯಕೀಯ ವಿದ್ಯಾರ್ಥಿನಿಯರಾದ ಕೇರಳದ ಡಾ.ನಾದಿಯಾ ಸಿರಾಜ್ (24), ಆಂಧ್ರ ಪ್ರದೇಶದ ಡಾ.ವರ್ಷಿಣಿ ಪ್ರಾಥಿ (26), ಮಹಾರಾಷ್ಟ್ರ ಪುಣೆಯ ಡಾ.ಇರಾ ಬಾಸಿನ್ (23), ಪಂಜಾಬ್ ಚಂಡಿಗಡದ ಡಾ.ರಿಯಾ ಚಡ್ಡಾ (22), ವೈದ್ಯ ವಿದ್ಯಾರ್ಥಿಗಳಾದ ಚಂಡಿಗಡದ ಡಾ.ಭಾನು ಧಹಿಯಾ(27), ದಿಲ್ಲಿಯ ಡಾ.ಕ್ಷಿತಿಜ್ ಗುಪ್ತಾ (25) ಮತ್ತು ಬಂಟ್ವಾಳ ತಾಲೂಕಿನ ಮಾರಿಪಳ್ಳದ ಮುಹಮ್ಮದ್ ರವೂಫ್ ಗೌಸ್ (34) ಎಂಬವರನ್ನು ಬಂಧಿಸಿದ್ದಾರೆ.