ಹೊಸದಿಲ್ಲಿ: ಸಂಸತ್ತಿನಲ್ಲಿ ಪ್ರಶ್ನೆ ಗಳನ್ನು ಕೇಳಲು ಲಂಚವನ್ನು ಸ್ವೀಕರಿಸಿದ್ದ ಆರೋಪದಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯೆ ಮಹುವಾ ಮೊಯಿತ್ರಾ ಅವರನ್ನು ಶುಕ್ರವಾರ ಲೋಕಸಭೆಯಿಂದ ಉಚ್ಚಾಟಿಸಲಾಗಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರು ಲೋಕಸಭೆಯ ನೀತಿ ಸಮಿತಿಯು ಮಾಡಿರುವ ಶಿಫಾರಸಿನ ಆಧಾರದಲ್ಲಿ ಮೊಯಿತ್ರಾರ ಉಚ್ಚಾಟನೆಗೆ ಗೊತ್ತುವಳಿಯನ್ನು ಮಂಡಿಸಿದರು. ಮೊಯಿತ್ರಾ ತನ್ನ ಸಂಸತ್ ವೆಬ್ಸೈಟ್ ಲಾಗಿನ್ ವಿವರಗಳನ್ನು ಇತರರೊಂದಿಗೆ ಹಂಚಿಕೊಂಡಿದ ರು ಮತ್ತು ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಉಡುಗೊರೆಗಳನ್ನು ಸ್ವೀಕರಿಸಿದ್ದರು ಎಂದು ನೀತಿ ಸಮಿತಿಯು ಬೆಟ್ಟು ಮಾಡಿದೆ. ಗೊತ್ತುವಳಿಯು ಧ್ವನಿಮತದಿಂದ ಅಂಗೀಕಾರಗೊಂಡಿತು.
ಓರ್ವ ಸಂಸದೆಯಾಗಿ ಮೊಯಿತ್ರಾ ಅವರ ನಡವಳಿಕೆಯು ಅನೈತಿಕವಾಗಿತ್ತು ಮತ್ತು ಅಸಭ್ಯವಾಗಿತ್ತು ಎಂಬ ನೀತಿ ಸಮಿತಿಯ ತೀರ್ಮಾನಗಳನ್ನು ಸದನವು ಒಪ್ಪಿಕೊಳ್ಳುತ್ತದೆ. ಹೀಗಾಗಿ ಅವರು ಸಂಸದೆಯಾಗಿ ಮುಂದುವರಿಯುವುದು ಸೂಕ್ತವಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು. ಬಿಜೆಪಿ 3 ಸಂಸದ ನಿಶಿಕಾಂತ್ ದುಬೆ ಮತ್ತು ಮೊಯಿತಾರ ಪರಿತ್ಯಕ್ತ ಸಂಗಾತಿ ಎನ್ನಲಾಗಿರುವ ವಕೀಲ ಜೈ ಅನಂತ್ ದೇಹದ್ರಾಯ್ ಅವರು, ಟಿಎಂಸಿ ಸಂಸದೆ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚವನ್ನು ಸ್ವೀಕರಿಸಿದ್ದರು ಎಂದು ಆರೋಪಿಸಿದ್ದರು.
ನೀತಿ ಸಮಿತಿಯು ನ.9ರಂದು ನಡೆದಿದ್ದ ಸಭೆಯಲ್ಲಿ ಲೋಕಸಭೆಯಿಂದ ಮೊಯಿತ್ರಾ ಉಚ್ಚಾಟನೆಯನ್ನು ಶಿಫಾರಸು ಮಾಡಿರುವ ತನ್ನ ವರದಿಯನ್ನು ಅಂಗೀಕರಿಸಿತ್ತು. ಸಮಿತಿಯು ಮೊಯಿತ್ರಾರ ಕ್ರಮಗಳನ್ನು ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಕ್ರಿಮಿನಲ್ ಸ್ವರೂಪದ್ದು' ಎಂದು ಬಣ್ಣಿಸಿತ್ತು.
ಕಾಂಗ್ರೆಸ್ ಸಂಸದೆ ಪರನೀತ ಕೌರ್ ಸೇರಿದಂತೆ ನೀತಿ ಸಮಿತಿಯ ಆರು ಸದಸ್ಯರು ವರದಿಯನ್ನು ಬೆಂಬಲಿಸಿದ್ದರೆ, ನಾಲ್ವರು ಪ್ರತಿಪಕ್ಷ ನಾಯಕರು ಅದರ ವಿರುದ್ಧ ಭಿನ್ನಾಭಿಪ್ರಾಯದ ಟಿಪ್ಪಣಿಗಳನ್ನು ಸಲ್ಲಿಸಿದ್ದರು.
ಪ೦ಜಾಬ್ ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಪತ್ನಿ ಆಗಿರುವ ಕೌರ್ ಬಿಜೆಪಿಗೆ ನೆರವಾಗಲು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಕಾಂಗ್ರೆಸ್ ನಿಂದ ಅಮಾನತುಗೊಳಿಸಲಾಗಿತ್ತು.
ಇದು ಬಿಜೆಪಿಯ ಅಂತ್ಯದ ಆರಂಭ; ಮೊಯಿತ್ರಾ:
ನೀತಿ ಸಮಿತಿಗೆ ನನ್ನನ್ನು ಉಚ್ಚಾಟಿಸಲು ಯಾವುದೇ ಅಧಿಕಾರವಿಲ್ಲ. ಇದು ಬಿಜೆಪಿಯ ಅಂತ್ಯದ ಆರಂಭವಾಗಿದೆ ಎಂದು ಉಚ್ಚಾಟಿತ ಸಂಸದೆ ಮಹುವಾ ಮೊಯಿತ್ರಾ ಶುಕ್ರವಾರ ಕಿಡಿಕಾರಿದರು. “ನೀವು ಅರೆ-ನ್ಯಾಯಾಂಗ ಪ್ರಾಧಿಕಾರದ ಅಧಿಕಾರವನ್ನು ಹೊಂದಿರುವುದಾಗಿ ಭಾವಿಸಿದ್ದೀರಿ ಮತ್ತು ನನ್ನನ್ನು ಉಚ್ಚಾಟಿಸಿದ್ದೀರಿ. ಹೀಗೆ ಮಾಡಲು ನಿಮಗೆ ಯಾವುದೇ ಅಧಿಕಾರವಿಲ್ಲ. ನೀವು ಸರಿಯಾದ ಪ್ರಕ್ರಿಯೆಯನ್ನು ನಿರ್ಲಕ್ಷಿಸಿದ್ದೀರಿ. ಜಬ್ ನಾಶ್ ಮನುಷ್ ಪರ್ ಛಾ ಜಾತಿ ಹೈ,ತಬ್ ವಿವೇಕ್ ಮರ್ ಜಾತಾ ಹೈ (ವ್ಯಕ್ತಿಯು ವಿನಾಶವನ್ನು ಸಮೀಪಿಸಿದಾಗ ಆತನ/ಆಕೆಯ ವಿವೇಕವು ಸತ್ತು ಹೋಗುತ್ತದೆ )' ಎಂದರು. ಉಚ್ಚಾಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೊಯಿತ್ರಾ ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದರು. ನೀವು ತೋರಿಸಿದ ತರಾತುರಿ ಮತ್ತು ಸೂಕ್ತ ಪ್ರಕ್ರಿಯೆಯ ದುರುಪಯೋಗವು ಅದಾನಿ ನಿಮಗೆ ಎಷ್ಟೊಂದು ಮುಖ್ಯವಾಗಿದ್ದಾರೆ ಮತ್ತು ಒಂಟಿ ಸಂಸದೆಯ ಬಾಯಿ ಮುಚ್ಚಿಸಲು ಆಕೆಗೆ ಕಿರುಕುಳ ನೀಡಲು ಯಾವ ಮಟ್ಟಕ್ಕೆ ಇಳಿಯುತ್ತೀರಿ ಎನ್ನುವುದನ್ನಷ್ಟೇ ಈ ಕಾಂಗರೂ ನ್ಯಾಯಾಲಯವು ಸೂಚಿಸಿದೆ ಎಂದರು. ಬಿಜೆಪಿ ಸರಕಾರವು ಅಲ್ಪಸಂಖ್ಯಾತರು ಮತ್ತು ಮಹಿಳೆಯರನ್ನು ದ್ವೇಷಿಸುತ್ತಿದೆ ಎಂದೂ ಅವರು ಆರೋಪಿಸಿದರು.
ಸ್ವೀಕಾರಾರ್ಹವಲ್ಲ: ಮಮತಾ
ಲೋಕಸಭೆಯಿಂದ ಟಿಎಂಸಿ ಸಂಸದರ ಮಹುವಾ ಮೂತ್ರರ ಉಚ್ಛಾಟನೆ ಕರೆತಂತೆ ಶಕ್ರುವಾರ್ ಬಿಜೆಪಿಯನ್ನು ತರಾಟೆಗೆತ್ತಿಕೊಂಡ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು 'ಇದು ಅಸ್ವೀಕಾರಾರ್ಹ ಕ್ರಮವಾಗಿದೆ ಮತ್ತು ದೇಶದ ಸಂಸದೀಯ ಪ್ರಜಾಪ್ರಭುತ್ವಕ್ಕೆ ದ್ರೋಹವಾಗಿದೆ' ಎಂದು ಬಣ್ಣಿಸಿದರು. ಬಿಜೆಪಿಯ ವರ್ತನೆಯನ್ನು ನೋಡಿ ದುಃಖವಾಗಿದೆ. ಅವರು ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಿದ್ದಾರೆ. ಹೇಗೆ ವಂಚಿಸಿ ದ್ದಾರೆ, ಇದು ಸಂಸದೀಯ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು. ಮೊಯಿತ್ರಾರಿಗೆ ತನ್ನ ನಿಲುವನ್ನು ವಿವರಿಸಲು ಅವರು ಅವಕಾಶ ನೀಡಲಿಲ್ಲ. ಸಂಪೂರ್ಣ ಅನ್ಯಾಯವನ್ನು ಮಾಡಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ ಹೇಳಿದರು. ಟಿಎಂಸಿ ಮೊಯಿತ್ರಾರನ್ನು ಬೆಂಬಲಿಸುತ್ತದೆ ಎಂದು ಸ್ಪಷ್ಟಪಡಿಸಿದ
ಅವರು, 'ಅವರಿಗೆ (ಬಿಜೆಪಿ) ಚುನಾವಣೆಗಳಲ್ಲಿ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ,ಹೀಗಾಗಿ ಅವರು ಪ್ರತೀಕಾರದ ರಾಜಕೀಯಕ್ಕೆ ಇಳಿದಿದ್ದಾರೆ. ಇಂದು ದುಃಖದ ದಿನವಾಗಿದೆ. ಆದರೆ ಮೊಯಿತ್ರಾ ದೊಡ್ಡ ಜನಾದೇಶದೊಂದಿಗೆ ಸಂಸತ್ತಿಗೆ ಮರಳಲಿದ್ದಾರೆ. ಬಿಜೆಪಿಯು ತನಗೆ ಬಹುಮತವಿರುವುದರಿಂದ ತಾನು ಏನು ಬೇಕಾದರೂ ಮಾಡಬಹುದು ಎಂದು ಭಾವಿಸಿದೆ. ಬಿಜೆಪಿ ಅಧಿಕಾರವನ್ನು ಕಳೆದುಕೊಳ್ಳುವ ಒಂದು ದಿನವೂ ಬರಬಹುದು ಎನ್ನುವುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು' ಎಂದರು.