ಮಂಗಳೂರು: ರಾಜ್ಯದಲ್ಲಿ ಬರದ ಸ್ಥಿತಿ ವಿಸ್ತಾರಗೊಳ್ಳುತ್ತಾ ಸಾಗಿರುವಂತೆಯೇ, ಸಮುದ್ರ ಹಾಗೂ ನದಿಗಳಿಂದ ಸುತ್ತುವರಿದಿರುವ ದ.ಕ. ಜಿಲ್ಲೆಯಲ್ಲಿ ಮಳೆಗಾಲದಲ್ಲಿಯೂ ಬಿಸಿಲ ಝಳಕ್ಕೆ ಜನಜೀವನ ನಲುಗುತ್ತಿದೆ. ಮಾತ್ರವಲ್ಲದೆ, ಜೀವ ನದಿಗಳಲ್ಲಿ ನೀರಿನ ಒಳಹರಿವು ಆಗಸ್ಟ್ ತಿಂಗಳಲ್ಲಿಯೇ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಈ ಬಾರಿ ವರ್ಷಾಂತ್ಯದಲ್ಲೇ ಕುಡಿಯುವ ನೀರಿನ ಆತಂಕಕ್ಕೆ ಕಾರಣವಾಗಿದೆ.
ಜುಲೈನಲ್ಲಿ ಒಂದೆರಡು ವಾರದ ಮಳೆ ಹೊರತುಪಡಿಸಿದರೆ, ಈ ಬಾರಿ ಮಳೆಗಾಲದ ವಾತಾವರಣ ಕಂಡು ಬಂದಿಲ್ಲ. ಜುಲೈ ತಿಂಗಳಲ್ಲಿ ವಾಡಿ ಕೆಗಿಂತ ತುಸು ಹೆಚ್ಚು ಮಳೆ ಸುರಿದಿತ್ತು. (ಜುಲೈನಲ್ಲಿ ವಾಡಿ ಕೆಯಂತೆ 1,232 ಮಿ.ಮೀ ಮಳೆಯಾಗುತ್ತಿದ್ದು, ಈ ಬಾರಿ ಜುಲೈನಲ್ಲಿ 1,486 ಮಿ.ಮೀ ಮಳೆ ದಾಖಲಾಗಿತ್ತು).
ಆಗಸ್ಟ್ ನಲ್ಲಿ ಶೇ. 73 ಮಳೆ ಕೊರತೆ: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ಮಾಹಿತಿಯ ಪ್ರಕಾರ, ದ.ಕ. ಜಿಲ್ಲೆಯಲ್ಲಿ ಆಗಸ್ಟ್ನಲ್ಲಿ ವಾಡಿಕೆಯಂತೆ ಸುರಿಯಬೇಕಾಗಿದ್ದ 892 ಮಿ.ಮೀ. ಮಳೆಯ ಬದಲಿಗೆ ಸುರಿದಿರುವುದು ಕೇವಲ 239 ಮಿ.ಮೀ. ಮಾತ್ರ(ಶೇ.73 ಮಳೆ ಕೊರತೆ), ಜೂನ್ 1ರಿಂದ 4.31ರವರೆಗೆ ಜಿಲ್ಲೆಯಲ್ಲಿ 3,065ಮಿ.ಮೀ. ಮಳೆಯಾಗಬೇಕಿದ್ದು, ಸುರಿದಿರುವುದು 2,069 ಮಿ.ಮೀ. ಮಾತ್ರ. ಈ ಮೂಲಕ ಈ ಅವಧಿಯಲ್ಲಿ ಶೇ. 32ರಷ್ಟು ಮಳೆ ಕೊರತೆಯಾಗಿದೆ. ಜನವರಿಯಿಂದ ಆಗಸ್ಟ್ವರೆಗಿನ ಲೆಕ್ಕಾಚಾರದ ಪ್ರಕಾರ 3,308 ಮಿ.ಮೀ. ಮಳೆಯ ಬದಲಿಗೆ ಆಗಿರುವುದು 2,188 ಮಿ.ಮೀ. ಮಾತ್ರ, ಈ ಅವಧಿಯಲ್ಲಿ ಶೇ.34ರಷ್ಟು ಮಳೆ ಕೊರತೆ ಜಿಲ್ಲೆಯಲ್ಲಿ ದಾಖಲಾಗಿದೆ.
ತುಂಬೆ ಡ್ಯಾಂ ಗೇಟ್ ಬಂದ್: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀರು ಪೂರೈಕೆ ಮಾಡುವ ತುಂಬೆ ಆಣೆಕಟ್ಟಿನಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಗೇಟುಗಳನ್ನು ತೆರೆಯಲಾಗುತ್ತದೆ. ಪಶ್ಚಿಮ ಘಟ್ಟದಿಂದ ಹರಿದು ಬರುವ ಮಳೆ ನೀರು ನದಿಯ ಒಡಲು ಸೇರಿ ಅಲ್ಲಿಂದ ಅಣೆಕಟ್ಟಿನ ಗೇಟುಗಳ ಮೂಲಕ ಸಮುದ್ರ ಸೇರುತ್ತದೆ. ಕರಾವಳಿಯಲ್ಲಿ ಅಕ್ಟೋಬರ್, ನವೆಂಬರ್ನಲ್ಲಿಯೂ ಸಾಮಾನ್ಯವಾಗಿ ಆಗಾಗ್ಗೆ ಮಳೆ ಸುರಿಯುವುದರಿಂದ ನದಿಗಳಿಗೆ ಪಶ್ಚಿಮ ಘಟ್ಟಗಳಿಂದ ಡಿಸೆಂಬವರೆಗೂ ಒಳಹರಿವು ಸಾಮಾನ್ಯವಾಗಿ ರುವುದರಿಂದ ಬಹುತೇಕವಾಗಿ ಅಣೆಕಟ್ಟಿನ ಗೇಟ್ ಗಳನ್ನು ಡಿಸೆಂಬರ್ ವೇಳೆಗೆ ಮುಚ್ಚಲಾಗುತ್ತದೆ. ಆದರೆ ಈ ಬಾರಿ ಮಳೆಗಾಲದಲ್ಲಿಯೇ ಅಣೆಕಟ್ಟಿನ ಗೇಟ್ಗಳನ್ನು ಬಂದ್ ಮಾಡಲಾಗಿದೆ. ಅಣೆಕಟ್ಟಿಗೆ ನೀರಿನ ಒಳಹರಿವು ಕಡಿಮೆಯಾಗಿರುವ ಕಾರಣ ಒಟ್ಟು 30 ಗೇಟ್ಗಳಲ್ಲಿ ಒಂದು ಮಾತ್ರ ತೆರೆದಿದೆ. ಕಳೆದ ಫೆಬ್ರವರಿ ತಿಂಗಳಿನಿಂದಲೇ ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ಕಾಡಲಾರಂಭಿಸಿತ್ತು. ಹವಾಮಾನ ಇಲಾಖೆಯ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ ಮಳೆಯಾಗುವ ಸೂಚನೆ ನೀಡಲಾಗಿದೆ. ಒಂದು ವೇಳೆ ಮಳೆ ಕೊರತೆ ಇದೇ ರೀತಿ ಮುಂದುವರಿದರೆ ಈ ಬಾರಿ ನೀರಿನ ಸಮಸ್ಯೆ ವರ್ಷಾಂತ್ಯಕ್ಕೆ ಕಾಣಿಸಿಕೊಳ್ಳುವ ಆತಂಕವನ್ನು ತಳ್ಳಿಹಾಕುವಂತಿಲ್ಲ. ಈಗಾಗಲೇ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹಕ್ಕೆ ಜಿಲ್ಲಾಡಳಿತ ಸೇರಿದಂತೆ ಸ್ಥಳೀಯಾಡಳಿತ ಗಮನ ಹರಿಸುವ ಜತೆಗೆ ನೀರು ಪೋಲಾಗದಂತೆ ಸಾರ್ವಜನಿಕರೂ ಎಚ್ಚರ ವಹಿಸುವುದು ಅಗತ್ಯವಾಗಿದೆ.
ಮೂಲದಲ್ಲೇ ಸೊರಗುತ್ತಿವೆ ನದಿಗಳು: ದ.ಕ. ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ, ಫಲ್ಗುಣಿ, ನಂದಿನಿ, ಸೌಪರ್ಣಿಕ, ಕುಮಾರಧಾರ ನದಿಗಳು ತುಂಬಿ ಹರಿಯಬೇಕಾದರೆ ಚಾರ್ಮಾಡಿ, ಶಿರಾಡಿ, ಬಿಸಿಲೆ ಘಾಟಿಯಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಬೇಕು. ಆದರೆ ಈ ಬಾರಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಬರದ ಛಾಯೆ ಸಂಪೂರ್ಣವಾಗಿ ಆವರಿಸಿದಂತಿದೆ ಎನ್ನುತ್ತಾರೆ ಪರಿಸರ ಹೋರಾಟಗಾರರು. ಪ್ರತಿ ವರ್ಷ ಮಳೆಗಾಲದ ಈ ಅವಧಿಯಲ್ಲಿ ತುಂಬಿ ಹರಿಯುವ ನೇತ್ರಾವತಿ ನದಿ ಬೆಳ್ತಂಗಡಿ ಭಾಗದಲ್ಲಿಯೇ ಸೊರಗಿರುವುದು ಕಂಡುಬರುತ್ತಿದೆ.
ಪುತ್ತೂರು ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಪೂರೈಕೆಯ ಪ್ರಮುಖ ಜೀವನದಿ ಕುಮಾರಧಾರದಲ್ಲೂ ನೀರಿನ ಒಳಹರಿವು ಕ್ಷೀಣಿಸಿದೆ. ಸಾಮಾನ್ಯವಾಗಿ ಮಾರ್ಚ್- ಎಪ್ರಿಲ್ ತಿಂಗಳ ನದಿ ನೀರಿನ ಪರಿಸ್ಥಿತಿ ಈಗ ಕಂಡು ಬರುತ್ತಿದೆ.