ಕೋಲಾರ ಜು.21: ಭಾರತ ಸೇವಾದಳ ನೀತಿ ಮತ್ತು ಆಜ್ಞೆಗನುಗುಣವಾಗಿ ಭಾರತ ಸೇವಾದಳದ ಮೂಲಕ ನಮ್ಮ ರಾಷ್ಟ್ರದ ಮತ್ತು ಜನರ ಸೇವೆಯನ್ನು ನಮ್ಮ ಶಕ್ತಿ ಮೀರಿ ಮಾಡಲು ಭಾರತ ಸೇವಾದಳದ ಎಲ್ಲಾ ಸದಸ್ಯರು ಶ್ರಮಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಜಾತಿಯ ಮತ್ತು ವಣ ್ೀಯ ಭಾವನೆಗಳನ್ನು ತೆಜಿಸಿ ಜಿಲ್ಲೆಯಾದ್ಯಂತ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ರಾಷ್ಟ್ರೀಯತೆಯನ್ನು ಹೆಚ್ಚಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯ ಬಿ.ಕೆ. ವೆಂಕಟ್ನಾರಾಯಣ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಭಾರತ ಸೇವಾದಳ ಕಾರ್ಯಾಲಯದಲ್ಲಿಂದು ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಪ್ರಥಮ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರಪಿತ ಮಹಾತ್ಮಾಗಾಂಧಿಜೀಯವರ ತತ್ವ ಮತ್ತು ಕಾರ್ಯಕ್ರಮಗಳ ತಳಹದಿಯ ಮೇಲೆ ವಿದ್ಯಾರ್ಥಿ ಹಾಗೂ ಯುವಜನರನ್ನು ಸಂಘಟಿಸಿ ಶಿಸ್ತು, ರಾಷ್ಟ್ರೀಯ ಸೇವೆಗಾಗಿ ತರಬೇತಿಯನ್ನು ನೀಡುವ ಸೇವಾದಳದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದರು.
ಜಿಲ್ಲಾ ಭಾರತ ಸೇವಾದಳದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ ಯುವಕರನ್ನು ಭಾರತದ ಆದರ್ಶ ನಾಯಕರನ್ನಾಗಿ ಮಾಡಲು ಅವರಲ್ಲಿ ಸಂಯಮ, ಧೈರ್ಯ, ತ್ಯಾಗ, ಸರಳತೆ, ಸೇವೆ, ಸಹಕಾರ ಮನೋಭಾವನೆಯನ್ನು ಮೂಡಿಸುವುದೇ ಅಲ್ಲದೆ ಸೇವೆಗಾಗಿ ಬಾಳುವ ಗುರಿಯನ್ನು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಬಿತ್ತಬೇಕೆಂದು ಇದಕ್ಕೆ ಜಿಲ್ಲೆಯ ಎಲ್ಲಾ ಸೇವಾದಳ ಸ್ವಯಂಸೇವಕರು ಸಹಕಾರಿಗಳಾಗಬೇಕು ಎಂದರು.
ಸಮಾರಂಭದಲ್ಲಿ ಭಾರತ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಜಿ. ಶ್ರೀನಿವಾಸ್, ಕಾರ್ಯದರ್ಶಿ ಎಸ್. ಸುಧಾಕರ್, ಕೋಶಾದ್ಯಕ್ಷ ಆರ್. ರವಿಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ವಿ.ಪಿ.ಸೋಮಶೇಖರ್, ಎಂ.ನಾಗರಾಜ್, ಡಿ.ಮುನೇಶ್, ಸಿ.ನಾರಾಯಣಸ್ವಾಮಿ, ರಾಜೇಶ್ ಸಿಂಗ್, ಹೆಚ್.ಸಿ. ಬೈರೇಗೌಡ, ಸಂಘಟಕ ಎಂ.ಬಿ. ದಾನೇಶ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ನಿರ್ಣಯದಂತೆ ಭಾರತ ಸೇವಾದಳ ವಿಶೇಷ ಆಹ್ವಾನಿತರಾಗಿ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಅಪ್ಪಿ ನಾರಾಯಣಸ್ವಾಮಿ, ಆರ್. ಶ್ರೀನಿವಾಸನ್, ಚಾಮುಂಡೇಶ್ವರಿದೇವಿ, ಕೆ.ಟಿ. ನಾಗರಾಜ್, ಪಿ.ಎನ್. ಪರಮೇಶ್ ಹಾಗೂ ತಾಲ್ಲೂಕು ಸಂಘಟಕರಾಗಿ ಶ್ರೀನಿವಾಸಪುರ ಎಂ. ನಾಗರಾಜ್, ಮಾಲೂರು ಬಹದ್ದೂರ್ ಸಾಬ್, ಬಂಗಾರಪೇಟೆ ಕೆ.ಸಿ.ಗೋಪಾಲ್, ಮುಳಬಾಗಿಲು ರೆಡ್ಡೆಪ್ಪ ರವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
(ಜಿ. ಶ್ರೀನಿವಾಸ್)
ಕೋಲಾರ.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ