ಕೋಲಾರ:- ಸಾಹಿತ್ಯ ರಚನೆ ಮಕ್ಕಳಲ್ಲಿ ರಾಷ್ಟ್ರಭಕ್ತಿ ಮೂಡಿಸುವ ಮತ್ತು ಸಾಮಾಜಿಕ ಬದುಕಿನಲ್ಲಿ ಸಹನೆ,ಸೌಹಾರ್ದತೆಯಿಂದ ಸಾಗುವ ಕುರಿತು ಜಾಗೃತಿ ಮೂಡಿಸುವಂತಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ ತಿಳಿಸಿದರು.
ತಮ್ಮ ಕಚೇರಿಯಲ್ಲಿ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ತಿಮ್ಮಸಂದ್ರ ನಾಗರಾಜ್ ಸಂಗ್ರಹಿಸಿದ ಜಾಗೃತಿ ಗೀತೆಗಳ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಮಕ್ಕಳಲ್ಲಿ ಕಲೆ,ಸಾಹಿತ್ಯಾಭಿರುಚಿ ಬೆಳೆಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದ ಅವರು, ಅನೇಕ ಮಕ್ಕಳಲ್ಲಿ ಚಿಕ್ಕವಯಸ್ಸಿನಲ್ಲೇ ಸಾಹಿತ್ಯ ರಚಿಸುವ ಪ್ರತಿಭೆ ಇರುತ್ತದೆ, ಅದನ್ನು ಹೊರತರಬೇಕೆಂದರು.
ತಿಮ್ಮಸಂದ್ರ ನಾಗರಾಜ್ ಅವರು ಸಂಗ್ರಹಿಸಿ ಹೊರ ತಂದಿರುವ ಜಾಗೃತಿ ಕೃತಿಯಲ್ಲಿನ ಅನೇಕ ಗೀತೆಗಳು ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಮೂಡಿಸುವ ಶಕ್ತಿ ಹೊಂದಿವೆ ಎಂದರು.
ಗ್ರಾಮೀಣರ ಬದುಕಿನಲ್ಲಿ ಕಷ್ಟದ ಕೆಲಸಗಳ ನಡುವೆ ಸ್ವಾಭಾವಿಕವಾಗಿಯೇ ಮೂಡಿ ಬಂದ ಅನೇಕ ಜಾನಪದ ಗೀತೆಗಳು ಇಂದು ಮರೆಯಾಗುತ್ತಿವೆ, ಇದನ್ನು ಸಂಗ್ರಹಿಸಿ ಉಳಿಸುವ ಕೆಲಸವನ್ನು ಮಾಡಿ ಎಂದು ಸಲಹೆ ನೀಡಿದರು.
ತಿಮ್ಮಸಂದ್ರ ನಾಗರಾಜ್ ಮಾತನಾಡಿ, ಜಾಗೃತಿ ಕೃತಿಯಲ್ಲಿ ಸಂಗ್ರಹಿಸಿರುವ ಗೀತೆಗಳು ಅಸ್ಪøಶ್ಯತೆ ವಿರುದ್ದ ಹೋರಾಡುವ, ಅನ್ಯಾಯದ ವಿರುದ್ದ ತಲೆಯೆತ್ತಿ ನಿಲ್ಲುವ ಜಾಗೃತಿಯೊಂದಿಗೆ ಸಾಮಾಜಿಕ ನ್ಯಾಯಕ್ಕೆ ಆಗ್ರಹಿಸುವುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಇಒ ಕಚೇರಿ ವ್ಯವಸ್ಥಾಪಕ ಕೆ.ಎಂ.ಮುನಿಸ್ವಾಮಿಗೌಡ, ಅಧೀಕ್ಷಕ ನಾರಾಯಣಸ್ವಾಮಿ, ವೆಂಕಟರಮಣಪ್ಪ, ಇಲಾಖೆಯ ಶ್ರೀನಿವಾಸಮೂರ್ತಿ, ಶಿಕ್ಷಕ ಶ್ರೀನಿವಾಸ್, ಸುಬ್ರಮಣಿ,ಗಿರೀಶ್ ಮತ್ತಿತರರಿದ್ದರು.ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ