ಕಾರವಾರ: ಇಲ್ಲಿನ ಜರ್ನಲಿಸ್ಟ ಅಸೋಸಿಯೇಶನ್ ಉತ್ತರ ಕನ್ನಡ ಜಿಲ್ಲಾ ಘಟಕ ಕೊಡಮಾಡುವ ಪ್ರತಿಷ್ಠಿತ ಹಮನ್ ಮೊಗ್ಲಿಂಗ್ ಪ್ರಶಸ್ತಿಗೆ ದೃಶ್ಯಮಾದ್ಯಮವೊಂದರ ತನಿಖಾ ವರದಿಗಾರ್ತಿ ವಿಜಯಲಕ್ಷ್ಮಿ ಶಿಬರೂರು ಆಯ್ಕೆಯಾಗಿದ್ದಾರೆ.
ಟೈಂಸ್ ಆಫ್ ಇಂಡಿಯಾದ ವರದಿಗಾಗ ದೀಪಕ್ ಕುಮಾರ್ ಶೆಣ್ವಿ,ಕಸಾಪ ತಾಲೂಕಾ ಅಧ್ಯಕ್ಷ ನಾಗರಾಜ್ ಹರಪನಹಳ್ಳಿ, ಸಾಮಾಜಿಕ ಕಾರ್ಯಕರ್ತೆ ಅನು ಕಳಸ ಅವರಿದ್ದ ಸಮಿತಿ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಅವರನ್ನು ಆಯ್ಕೆ ಮಾಡಿದೆ ಎಂದು ಜರ್ನಲಿಸ್ಟ ಅಸೋಸಿಯೇಶನ್ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಕಡತೋಕ ಮಂಜು ತಿಳಿಸಿದ್ದಾರೆ. ಕಳೆದ ವರ್ಷದಿಂದ ಕನ್ನಡ ಪತ್ರಿಕೋದ್ಯಮದ ಹರಿಕಾರ ಜರ್ಮನ್ ಮೂಲದ ಹರ್ಮನ್ ಮೊಗ್ಲಿಂಗ್ ಹೆಸರಲ್ಲಿ ಈ ಪ್ರಶಸ್ತಿ ನೀಡುತ್ತಾ ಬರಲಾಗುತ್ತಿದೆ. 2017ನೇ ಸಾಲಿನ ಪ್ರಶಸ್ತಿ ಮಹಿಳಾ ಪತ್ರಕರ್ತೆಯ ಪಾಲಾಗಿದೆ. ಜುಲೈ.1 ರಂದು ಕಾರವಾರದಲ್ಲಿ ನಡೆವ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಮೊಗ್ಲಿಂಗ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಐದು ಸಾವಿರ ರೂ.ನಗದು, ಪ್ರಶಸ್ತಿ ಪತ್ರ ಮತ್ತು ಫಲಕವನ್ನು ಒಳಗೊಂಡಿದೆ. ಶೈಕ್ಷಣಿಕ ಮತ್ತು ಸಾಹಿತ್ಯ, ಸಾಮಾಜಿಕ ಕ್ಷೇತ್ರದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ವಿಜಯಲಕ್ಷ್ಮಿ ಪರಿಚಯ:
ಮಂಗಳೂರಿನ ಮಂಗಳ ಗಂಗೋತ್ರಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿಜಯಲಕ್ಷಿ ಕಟೀಲು ಸಮೀಪದ ಶಿಬರೂರಿನವರು. 1998 ರಿಂದ ಪತ್ರಿಕೋದ್ಯಮದಲ್ಲಿ ಕೆಲಸ ಪ್ರಾರಂಭಿಸಿದ್ದು ಜನವಾಹಿನಿ ಪತ್ರಿಕೆಯ ಮೂಲಕ. ನಂತರ ಮಂಗಳೂರು ಆಕಾಶವಾಣಿ, ಸಂಯುಕ್ತ ಕರ್ನಾಟಕ, ಈಟಿವಿ ಕನ್ನಡ, ಟಿವಿ9 ನಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಸುವರ್ಣವಾಹಿನಿಯಲ್ಲಿ ತನಿಖಾ ವರದಿಯ ವಿಭಾಗದ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ.