ಕಾರವಾರ: ಪ್ರತಿ ವರ್ಷದಂತೆ ಈ ವರ್ಷವೂ ಆಝಾದ್ ಯುಥ್ ಕ್ಲಬ್ ಕಾರವಾರದವರು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ನಿಮಿತ್ತ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಕಾರವಾರದವರೊಂದಿಗೆ ಸಂಯುಕ್ತವಾಗಿ ದಿನಾಂಕ 30.09.2017 ರಂದು ಸಾಧನೆ ಮಾಡಿದ ಹಿರಿಯ ನಾಗರಿಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ. ಅಂದು ಹಿರಿಯ ನಾಗರಿಕರಾಗಿರುವ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಪಂಪ ಪ್ರಶಸ್ತಿ ವಿಜೇತರಾಗಿರುವ ಕುಮಟಾದ ಡಾ.ಬಿ.ಎ.ಸನದಿ ರವರನ್ನು ಬೆಳಿಗ್ಗೆ 10.15 ರಂದು ಅವರ ಸ್ವಗೃಹದಲ್ಲಿ ಸನ್ಮಾನಿಸುವವರಿದ್ದಾರೆ. ಅಂದು ಮುಖ್ಯ ಅತಿಥಿಗಳಾಗಿ ಶಾಸಕಿಯಾದ ಶಾರದಾ ಎಮ್. ಶೆಟ್ಟಿ ಹಾಗೂ ತಾಮೀರ್ ಬ್ಯಾಂಕ್ನ ನಿರ್ದೇಶಕರಾದ ಇಸ್ಮಾಯಿಲ್ ಇಬ್ರಾಹಿಂ ಉಪ್ಪರ್ಕರ್ರವರು ಆಗಮಿಸುವವರಿದ್ದಾರೆ.
ಸುಲೇಮಾನ್ ಯು. ತಲಕಣಿ
ಅದೇ ದಿನದಂದು ಬೆಳಿಗ್ಗೆ 11.30ಕ್ಕೆ ಹೊನ್ನಾವರದ ಹಿರಿಯ ನಾಗರಿಕರೂ ಹಾಗೂ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಮಾಜಿ ಚೇರ್ಮೆನ್ರಾದ ಸುಲೇಮಾನ್ ಯು. ತಲಕಣಿ ಯವರನ್ನು ಹೊನ್ನಾವರದ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕ್ನನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅರವಿಂದ ಕರ್ಕಿಕೊಡಿ, ಪತ್ರಕರ್ತರಾದ ಜಿ.ಯು.ಭಟ್, ಹೊನ್ನಾವರದ ಅರ್ಬನ್ಬ್ಯಾಂಕ್ನ ಉಪಾಧ್ಯಕ್ಷರಾದ ಜಿ.ವಿ.ನಾಯ್ಕ ಹಾಗೂ ತಾಮೀರ್ ಬ್ಯಾಂಕ್ನ ನಿರ್ದೇಶಕರಾದ ಮೊಹಮ್ಮದ್ ತಲಾ ಶೇಖ್ರವರು ಆಗಮಿಸುವವರಿದ್ದಾರೆ.
ಬಿ.ಎಫ್.ಬೆಂಡಿಗಿರಿ
ನಂತರ ಸಂಜೆ 4.30ಕ್ಕೆ ಮುಂಡಗೋಡದ ಹಿರಿಯ ನಾಗರಿಕರಾದ ವಿವಿದ ರೀತಿಯಲ್ಲಿ ಜನರ ಸೇವೆಯನ್ನು ಮಾಡುತ್ತಾ ಬಂದಿರುವ ತಾಮೀರ್ ಕೋ-ಆಪರೇಟಿವ್ ಬ್ಯಾಂಕ್ನ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಬಿ.ಎಫ್.ಬೆಂಡಿಗಿರಿ ರವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸುವವರಿದ್ದಾರೆ.
ಈ ಕಾರ್ಯಕ್ರಮಕ್ಕೆ ಶಾಸಕರಾದ ಶಿವರಾಮ ಹೆಬ್ಬಾರ್, ಪಟ್ಟಣ ಪಂಚಾಯತ್ನ ಅಧ್ಯಕ್ಷರಾದ ಮೊಹಮ್ಮದ್ ರಫೀಕ್ ಇನಾಂದಾರ್ ಹಾಗೂ ತಾಮೀರ್ ಬ್ಯಾಂಕ್ನ ಅಧ್ಯಕ್ಷರಾದ ಮುಷ್ತಾಕ್ ಅಹಮದ್ ಶೇಖ್ರವರು ಆಗಮಿಸುವವರಿದ್ದಾರೆ.
ಈ ಕಾರ್ಯಕ್ರಮವನ್ನು ದಿ.ಉಸ್ಮಾನ್ ಶೇಖ್, ದಿ. ಶೇಖ್ ಇಸ್ಮಾಯಿಲ್ ಹಾಗೂ ದಿ.ಪುತ್ತಬ್ಬ ಕ್ಲಲೂರ್ ರವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕ್ಲಬ್ನ ಕಾರ್ಯದರ್ಶಿಯಾಗಿರುವ ಮೊಹಮ್ಮದ್ ಉಸ್ಮಾನ್ ಶೇಖ್ ರವರು ತಿಳಿಸಿರುತ್ತಾರೆ.