ಚಿಂತಾಮಣಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಲಸೆ ಕಾರ್ಮಿಕ ಪುತ್ರನಿಗೆ 95.68% ಫಲಿತಾಂಶ
ಚಿಂತಾಮಣಿ: ತಾಲೂಕಿನ ಮುರುಘಮಲೆಯಲ್ಲಿ ನೆಲೆಸಿರುವ ವಲಸೆ ಕಾರ್ಮಿಕ ಪುತ್ರನ ಎಸ್ಎಸ್ಎಲ್ಸಿ ಸಾಧನೆಯು ಗಮನ ಸೆಳೆದಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 598(95.68%) ಅಂಕಗಳನ್ನು ಗಳಿಸುವ ಮೂಲಕ ಮುರುಘಮಲೆ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲಂದರ್ ದಸ್ತಗೀರ್ ಕುರಿ ಅಗ್ರ ಸ್ಥಾನೀಯನಾಗಿ ಹೊರಹೊಮ್ಮಿದ್ದಾನೆ.
ಮೂಲತಃ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರಿನವರಾದ ಕಾರ್ಮಿಕ ಕುಟುಂಬವು, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಆಶಯದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಮುರುಘಮಲೆಗೆ ವಲಸೆ ಬಂದಿದ್ದು, ಮಗನ ಎಸ್ಎಸ್ಎಲ್ಸಿ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ವಲಸೆ ಕಾರ್ಮಿಕ ದಸ್ತಗೀರ್ ಹಾಗೂ ಖುರ್ಷಿದ್ ಬಾನುರವರ ನಾಲ್ವರು ಮಕ್ಕಳಲ್ಲಿ ಕಲಂದರ್ ಮೊದಲನೆಯವನು. ಇತರ ಮೂವರು ಮಕ್ಕಳ ವಿದ್ಯಾಭ್ಯಾಸವನ್ನು ಇಲ್ಲಿಯೇ ಮುಂದುವರೆಸುತ್ತಿದ್ದು, ಪುಟ್ಟ ಬಾಡಿಗೆ ಮನೆಯಲ್ಲಿ ನೆಲೆಸಿರುವ ಕುಟುಂಬಕ್ಕೆ ಅಪ್ಪನ ದುಡಿಮೆಯೇ ಆಸರೆಯಾಗಿದೆ. ಮಗನ ಮುಂದಿನ ಓದಿಗೆ ಬೇಕಾದ ಪ್ರೋತ್ಸಾಹವನ್ನು ತಮ್ಮಿದಾದಷ್ಟು ನೀಡುವುದಾಗಿ ಹೆತ್ತವರು ಹೇಳುತ್ತಾರೆ.
ಮಗನ ಶೈಕ್ಷಣಿಕ ಸಾಧನೆಗೆ ಪ್ರೇರಣೆ ನೀಡುವ ಮೂಲಕ ತರಬೇತಿ ನೀಡಿದ ಮುರುಘಮಲ್ಲ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ನಾಗರಾಜ ಎಂ ವಿ, ಆರ್.ಹುಸೇನ್ ಹಾಗೂ ಶಿಕ್ಷಕ ವೃಂದವನ್ನು ಅವರು ಅಭಿನಂದಿಸಿದ್ದಾರೆ.