ರೋಹಿಣಿ ಸಿಂಧೂರಿ-ರೂಪಾ ಮುದ್ಗಿಲ್ ಗೆ ಸ್ಥಳ ನಿಯುಕ್ತಿಗೊಳಿಸದೆ ಎತ್ತಂಗಡಿ; ಮುಜುಗರ ದಿಂದ ಪಾರಾಗಲು ರಾಜ್ಯ ಸರಕಾರದ ಕ್ರಮ
ಬೆಂಗಳೂರು: ಸಾರ್ವಜನಿಕವಾಗಿ ಪರಸ್ಪರ ವಾಗ್ವಾದಕ್ಕೆ ಇಳಿದಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದಗಿಲ್ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರಕಾರವು, ಅವರಿಗೆ ಸ್ಥಳ ನಿಯುಕ್ತಿಗೊಳಿಸದೆ ವರ್ಗಾವಣೆ ಮಾಡಿದೆ.
ಜೊತೆಗೆ, ರೂಪಾ ಮುದ್ಗಿಲ್ ಅವರ ಪತಿ ಕಂದಾಯ ಇಲಾಖೆಯ ಭೂಮಾಪನ ಹಾಗೂ ಭೂದಾಖಲೆ ವಿಭಾಗದ ಆಯುಕ್ತರಾಗಿದ್ದ ಮುನೀಶ್ ಮುದ್ಗಿಲ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿ ದಾಸರಿ ಅವರ ಜಾಗಕ್ಕೆ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ಉದ್ಯಮಶೀಲತೆ ವಿಭಾಗದ ಜಂಟಿ ಕಾರ್ಯದರ್ಶಿಯಾಗಿದ್ದ ಎಚ್. ಬಸವರಾಜೇಂದ್ರ ಅವರನ್ನು ನೇಮಕ ಮಾಡಲಾಗಿದೆ.
ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡಿ. ರೂಪಾ ಅವರ ಜಾಗಕ್ಕೆ ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಡಿ.ಭಾರತಿ ಅವರನ್ನು ನೇಮಕ ಮಾಡಲಾಗಿದೆ. ಇದಲ್ಲದೆ, ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆಯ ಹೆಚ್ಚುವರಿ ನಿರ್ದೇಶಕ ಸಿ.ಎನ್.ಶ್ರೀಧರ ಅವರನ್ನು ಭೂ ಮಾಪನ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರನ್ನಾಗಿ ಹಾಗೂ ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಎಚ್.ವಿ. ದರ್ಶನ್ ಅವರನು ತುಮಕೂರು ಮಹಾನಗರ ಪಾಲಿಕೆಯ ವರ್ಗಾವಣೆ ಆಯುಕ್ತರನ್ನಾಗಿ ಮಾಡಲಾಗಿದೆ.
ಸಂಪುಟ ಸಭೆಯಲ್ಲಿ ಚರ್ಚೆ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಮಾಧ್ಯಮಗಳ ಎದುರು ಜಟಾಪಟಿಗೆ ಪರಸ್ಪರ ಇಳಿದಿದ್ದ ಪ್ರಕರಣ ರಾಜ್ಯ ಸರಕಾರಕ್ಕೆ ಇರಿಸುಮುರಿಸು ಉಂಟು ಮಾಡಿತ್ತು. ವಿಧಾನ ಮಂಡಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಈ ರೀತಿ ವರ್ತಿಸುತ್ತಿರುವುದು ವಿರೋಧ ಪಕ್ಷಗಳಿಗೆ ಸರಕಾರದ ವಿರುದ್ಧ ವಾಗ್ದಾಳಿ ನಡೆಸಲು ಅವಕಾಶ ಮಾಡಿಕೊಟ್ಟಂತಾಗಿತ್ತು.
ಈ ನಡುವೆ ಸೋಮವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಿರಿಯ ಸಚಿವರು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಮುಖ್ಯ ಕಾರ್ಯದರ್ಶಿಗೆ ಆ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡುವಂತೆ ಸೂಚಿ ಸಲಾಗಿತ್ತು. ಐಎಎಸ್ ಅಧಿಕಾರಿಗಳ ವರ್ತನೆಯನ್ನು ಗಂಬೀರವಾಗಿ ಪರಿಗಣಿಸಿದ ಸರ್ಕಾರ ಸ್ಥಳ ನಿಯುಕ್ತಿ ಮಾಡದೆ ವರ್ಗಾವಣೆ ಮಾಡುವ ಮೂಲಕ ಕಡ್ಡಾಯ ರಜೆಯ ಶಿಕ್ಷೆ ನೀಡಿದೆ.
ಮಾಧ್ಯಮಗಳ ಎದುರು ಬಾಯಿಬಿಡದಂತೆ ಎಚ್ಚರಿಕೆ: ಸರಕಾರಿ ನೌಕರರ ಸೇವಾ ನಿಯಮಗಳ ವಿರುದ್ದವಾಗಿ ಮಾಧ್ಯಮಗಳ ಎದುರು ಮತ್ತೊಬ್ಬ ಸರಕಾರಿ ನೌಕರರ ವಿರುದ್ಧ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಅಧಿಕಾರಿಗಳು ಮಾಧ್ಯಮಗಳ ಎದುರು ಅಗತ್ಯ ಸಂದರ್ಭಗಳಲ್ಲಿ ತಮ್ಮ ಕರ್ತವ್ಯಕ್ಕೆ ಸಂಬಂಧಿಸಿದ, ಸರಕಾರಿ ಯೋಜನೆಗಳ ಕುರಿತು ಮಾಹಿತಿ ನೀಡಬಹುದು. ಅಹವಾಲುಗಳು, ಆಪಾದನೆಗಳು ಸೇರಿದಂತೆ ಇನ್ನಿತರ ವಿಚಾರಗಳನ್ನು ಸಕ್ಷಮ ಪ್ರಾಧಿಕಾರದ ಎದುರು ಮಾತ್ರ ತಿಳಿಸಬೇಕು'. ಅಖಿಲ ಭಾರತ ಸೇವಾ ನಿಯಮಗಳ ವಿರುದ್ಧವಾಗಿ ವರ್ತಿಸದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.