ಹೊಸದಿಲ್ಲಿ: ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಕನ್ನಯ್ಯ ಕುಮಾರ್ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಗುಜರಾತ್ ಶಾಸಕ ಜಿಸ್ಟ್ರೇಶ್ ಮೇವಾನಿ ಅವರು ತಾಂತ್ರಿಕ ಕಾರಣಗಳಿಂದಾಗಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿಲ್ಲವಾದರೂ, ಆ ಪಕ್ಷಕ್ಕೆ ತನ್ನ ಬೆಂಬಲ ಘೋಷಿಸಿದ್ದಾರೆ. ದಿಲ್ಲಿಯಲ್ಲಿರುವ ಎಐಸಿಸಿ ಮುಖ್ಯ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಯ್ಯ ಕುಮಾರ್ ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉಪಸ್ಥಿತರಿದ್ದರು.
ಕಾಂಗ್ರೆಸ್ಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಕನ್ನಯ್ಯ ಕುಮಾರ್ ಅವರು, ಬಿಜೆಪಿಯ ಮೇಲೆ ಪರೋಕ್ಷ ಟೀಕಾಪ್ರಹಾರ ನಡೆಸಿದರು. ಕೆಲವು ಜನರು ದೇಶದ ಇತಿಹಾಸವನ್ನು, ಅದರ ಭೂತಕಾಲ ಹಾಗೂ ವರ್ತಮಾನವನ್ನು ನಾಶಪಡಿಸಲು ಯತ್ನಿಸುತ್ತಿದ್ದು ಅದನ್ನು ತಡೆಗಟ್ಟಬೇಕಾಗಿದೆ ಎಂದರು.
ತಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಕಾರಣ ವನ್ನು ಕನ್ನಯ್ಯ ವಿವರಿಸುತ್ತಾ, ತಾನು ಯಾರನ್ನು ವಿರೋಧಿಸಬೇಕೆಂಬುದನ್ನು ಒಬ್ಬ ವ್ಯಕ್ತಿ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಆನಂತರ ಇದಕ್ಕಾಗಿ ತನ್ನ ಬೆಂಬಲಿಸುವ ಸ್ನೇಹಿತರಿಗಾಗಿ ಆತ ಹುಡುಕಾಟ ನಡೆಸಬೇಕಾಗಿದೆ ಎಂದರು.
ಒಂದು ವೇಳೆ ಕಾಂಗ್ರೆಸ್ ಪಕ್ಷವನ್ನು ರಕ್ಷಿಸಲಾಗದೆ ಇದ್ದಲ್ಲಿ ಈ ದೇಶ ಕೂಡಾ ಉಳಿಯಲಾರದು ಎಂಬ ಕಾರಣದಿಂದ ನಾನು ಈ ಪ್ರಜಾಸತಾಕವಾದ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದು ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಸ್ಟ್ರೇಶ್ ಮೇವಾನಿ ಮಾತನಾಡಿ, ತಾನು ಪಕ್ಷೇತರ ಶಾಸಕನಾಗಿರುವ ಕಾರಣ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಸಾಧ್ಯವಾಗದು. ತಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡಲ್ಲಿ, ತನಗೆ ಶಾಸಕನಾಗಿ ಮುಂದುವರಿಯಲಾಗದು ಎಂದರು. ಮೇವಾನಿ ಅವರು 2017ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ವಡ್ಗಾಮ್ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ತಾನು ಹಾಗೂ ಕನ್ನಯ್ಯ ಕುಮಾರ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವುದಾಗಿ ಮೇವಾನಿ ಮಂಗಳವಾರ ಘೋಷಿಸಿದ್ದರು. ಜವಾಹರಲಾಲ್ ನೆಹರೂ ವಿವಿಯ ವಿದ್ಯಾರ್ಥಿ ಒಕ್ಕೂಟದ
ಅಧ್ಯಕ್ಷರಾಗಿದ್ದ ಕನ್ನಯ್ಯ ಕುಮಾರ್ ಅವರನ್ನು 2016ರ ಫೆಬ್ರವರಿಯಲ್ಲಿ ದೇಶದ್ರೋಹದ ಘೋಷಣೆಗಳನ್ನು ಕೂಗಿದ ಆರೋಪದಲ್ಲಿ ಬಂಧಿಸಲಾಗಿತ್ತು. ಆದರೆ ಅವರ ಭಾಷಣ ವೀಡಿಯೊವನ್ನು ತಿರುಚಲಾಗಿದೆಯೆಂದು ತನಿಖೆಯಿಂದ ದೃಢಪಟ್ಟ ಬಳಿಕ ಅವರನ್ನು ದೋಷಮುಕ್ತಗೊಳಿಸಲಾಗಿತ್ತು. ಆನಂತರ 2019ರ ಲೋಕಸಭಾ ಚುನಾವಣೆಯಲ್ಲಿ ಕನ್ನಯ್ಯ ಕುಮಾರ್ ಬಿಹಾರದ ಬೆಗುಸರಾಯ್ ಲೋಕಸಭಾ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪರಾಭವಗೊಂಡಿದ್ದರು.
ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ನಿರ್ಲಕ್ಷಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ ಮೇವಾನಿ, * ರೈತರು ಮತ್ತು ಕಾರ್ಮಿಕರಿಗೆ ಅಧಿಕಾರ ನೀಡುವುದೇ ಕ್ರಾಂತಿಯೆಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ವ್ಯಾಖ್ಯಾನಿಸಿದ್ದರು. ಆದರೆ
ನರೇಂದ್ರ ಮೋದಿಯವರು ಪರಿಶೀಲನೆಗೆಂದು ಸೆಂಟ್ರಲ್ ವಿಸ್ಟಾಗೆ ಭೇಟಿ ನೀಡುತ್ತಾರೆ. ಆದರೆ ರೈತರ ಭೇಟಿಗೆ ಅವರಿಗೆ ಸಮಯವಿಲ್ಲ ಎಂದರು.
2017ರ ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ, ಜಿಗೇಶ್ ಮೇವಾನಿ ದಲಿತ ಹಕ್ಕುಗಳ ಚಳವಳಿಯ ಪ್ರಮುಖ ನಾಯಕರಾಗಿ ಹೊರಹೊಮ್ಮಿದ್ದರು. ಅವರು ಹಾಗೂ ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಮತ್ತು ಠಾಕೂರ್ ಸಮುದಾಯದ ನಾಯಕ ಅಲ್ವೇಶ್ ಠಾಕೂರ್ ಯಾವುದೇ ರಾಜಕೀಯ ಪಕ್ಷಕ್ಕೆ ನಿಷ್ಠೆಯನ್ನು ತೋರಿಸದೆಯೇ ಬಿಜೆಪಿ ವಿರುದ್ಧ ವ್ಯಾಪಕ ಅಭಿಯಾನ ನಡೆಸಿದ್ದರು. ಹಾರ್ದಿಕ್ ಅವರು ಪ್ರಸಕ್ತ ಕಾಂಗ್ರೆಸ್ನ ಗುಜರಾತ್ ಘಟಕದ ಕಾರ್ಯನಿರತ ಅಧ್ಯಕ್ಷರಾಗಿದ್ದಾರೆ. 2017ರಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದ ಅಲ್ವೇಶ್ ಅವರು 2019ರಲ್ಲಿ ಆ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದರು.