ಭಟ್ಕಳದಲ್ಲಿ ಸಮಗ್ರ ಕೃಷಿ ಅಭಿಯಾನಕ್ಕೆ ಸುನಿಲ್ ಚಾಲನೆ
ಭಟ್ಕಳ: ಕೃಷಿ ಇಲಾಖೆ ಭಟ್ಕಳ ಇವರ ವತಿಯಿಂದ ಇಲ್ಲಿನ ತಾಲೂಕು ಪಂಚಾಯತ ಆವರಣದಲ್ಲಿ ಹಮ್ಮಿಕೊಳ್ಳಲಾದ ಸಮಗ್ರ ಕೃಷಿ ಅಭಿಯಾನಕ್ಕೆ ಶಾಸಕ ಸುನಿಲ್ ನಾಯ್ಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ನಮ್ಮ ರೈತರು ಪರಂಪರಾಗತವಾಗಿ ಕೃಷಿ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಆಹಾರ ಪದಾರ್ಥಗಳ ಬೇಡಿಕೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರು ಕೃಷಿಯಲ್ಲಿ ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಇಳುವರಿಯನ್ನು ಹೆಚ್ಚು ಪಡೆಯಲು ಸಾಧ್ಯ ಇದೆ. ಈ ಕೃಷಿ ಅಭಿಯಾನ ವರ್ಷಕ್ಕೊಮ್ಮೆ ಸೀಮಿತವಾಗದೇ ನಿರಂತರವಾಗಿ ನಡೆಯುತ್ತಿರಬೇಕು. ಭಟ್ಕಳದಲ್ಲಿ 80% ಜನರು ಕೃಷಿ ಅವಲಂಬಿತರಾಗಿದ್ದು, ಅಭಿಯಾನ ಪ್ರತಿ ಹಳ್ಳಿಯನ್ನು ತಲುಪಬೇಕು. ಕೃಷಿ ಸಂಬಂಧಿತ ವಿಷಯವನ್ನು ಅಧಿಕಾರಿಗಳು ಸವಾಲಾಗಿ ಸ್ವೀಕರಿಸಿ ರೈತರಿಗೆ ಯಶಸ್ಸು ತಂದುಕೊಡಲು ಶ್ರಮಿಸಬೇಕಾಗಿದೆ ಎಂದರು. ತಾಪಂ ಸದಸ್ಯರಾದ ಮಹಾಬಲೇಶ್ವರ ನಾಯ್ಕ, ವಿಷ್ಣು ದೇವಡಿಗ, ಸುಲೋಚನಾ ಸತೀಶ ನಾಯ್ಕ, ಮಾಲತಿ ಮೋಹನ ದೇವಡಿಗ, ಕೃಷಿ ಸಹಾಯಕ ನಿರ್ದೇಶಕ ಮಧುಕರ ನಾಯ್ಕ, ಸಹಾಯಕ ಅಧಿಕಾರಿ ಜಿ.ಎನ್.ನಾಯ್ಕ, ರೈತ ಪ್ರಮುಖರಾದ ಶ್ರೀಧರ ಹೆಬ್ಬಾರ, ತಿಮ್ಮಪ್ಪ ನಾಯ್ಕ, ಮಂಜುನಾಥ ನಾಯ್ಕ ಮುಂಡಳ್ಳಿ ಮೊದಲಾದವರು ಉಪಸ್ಥಿತರಿದ್ದರು.