ಯೋಜನೆಗಳ ಮಾಹಿತಿಯೊಂದಿಗೆ ಮನೋರಂಜನೆ ನೀಡಿದ ಮಾಹಿತಿ ಉತ್ಸವ
ಕಾರವಾರ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಇದೇ ಮೊದಲ ಬಾರಿಗೆ ಕಾರವಾರದ ಕಡಲ ತೀರದಲ್ಲಿ ಆಯೋಜಿಸಿರುವ ಮಾಹಿತಿ ಉತ್ಸವ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯೊಂದಿಗೆ ಮನರಂಜನೆಯನ್ನು ಉಣಬಡಿಸಿತು.
ಎರಡು ದಿನಗಳ ಮಾಹಿತಿ ಉತ್ಸವಕ್ಕೆ ಶನಿವಾರ ಚಾಲನೆ ನೀಡಿದ ಶಾಸಕ ಸತೀಶ ಸೈಲ್ ಸರಕಾರದ ಯೋಜನೆಗಳನ್ನು ಜನ ಸಾಮಾನ್ಯರು ಹೇಗೆ ಪಡೆದುಕೊಳ್ಳಬೇಕೆಂದು ತಿಳಿಸಲು ಮಾಹಿತಿ ಉತ್ಸವ ಒಂದು ವಿನೂತನ ಕಾರ್ಯಕ್ರಮವಾಗಿದೆ. ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಹಲವಾರು ಜನಪರ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದು, ಜಿಲ್ಲೆಯಲ್ಲಿ ಇದರ ಪರಿಣಾಮವನ್ನು ಗಮನಿಸಬಹುದಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ ಮನರಂಜನೆಯ ಮೂಲಕ ಸರಕಾರದ ವಿವಿದ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸಲು ಪ್ರಯತ್ನಿಸುವ ಕಾರ್ಯಕ್ರಮ ಇದಾಗಿದೆ. ಇಲ್ಲಿ ಹಾಕಲಾಗಿರುವ ವಿವಿಧ ಇಲಾಖೆಗಳ ಮಳಿಗೆಗಳಲ್ಲಿ ವಿವಿಧ ಯೋಜನೆಗಳ ಮಾಹಿತಿ ಲಭ್ಯವಿದ್ದು, ಇದರ ಉಪಯೋಗವನ್ನು ಜಿಲ್ಲೆಯ ಜನತೆ ಉಪಯೋಗಿಸಿಕೊಳ್ಳಿ ಎಂದು ಹೇಳಿದರು.
ಮಯೂರವರ್ಮ ವೇದಿಕೆ ಮುಂಭಾಗ ಮೈದಾನದ ಆಕರ್ಷಕ ವಸ್ತು ಪ್ರದರ್ಶನ ಮಳಿಗೆಗಳಲ್ಲಿ ಎಲ್ಲಾ ಪ್ರಮುಖ ಇಲಾಖೆಗಳು ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸಿದವು. ವಾರ್ತಾ ಇಲಾಖೆಯ ಆಕರ್ಷಕ ಪೆವಿಲಿಯನ್ ಗಮನ ಸೆಳೆಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ನಿರ್ದೇಶಕ ಶಫಿ ಸಾದುದ್ದೀನ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ನಗರ ಸಭೆ ಅಧ್ಯಕ್ಷ ಗಣಪತಿ ನಾಯ್ಕ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಾಂಸ್ಕøತಿಕ ಕಾರ್ಯಕ್ರಮಗಳ ಕಲರವ: ಮಯೂರವರ್ಮ ವೇದಿಕೆಯಲ್ಲಿ ನಡೆದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜನಮೆಚ್ಚುಗೆಗೆ ಪಾತ್ರವಾದವು. ಹುರುಗಲವಾಡಿ ರಾಮಯ್ಯ ಮತ್ತು ತಂಡ ಹಾಸನ ಕಲಾವಿದರಿಂದ ಆರಂಭವಾದ ಗೀತಗಾಯನ, ಗುಂಡುರಾಜ್ ಮತ್ತು ತಂಡ ಹಾಸನ ಕಲಾವಿದರ ತೊಗಲು ಗೊಂಬೆಯಾಟ, ಪರಿವರ್ತನಾ ಕಲಾತಂಡ ಚಾಮರಾಜನಗರ ಕಲಾವಿದರ ಕಂಸಾಳೆ ಗಮನ ಸೆಳೆದವು. ರಿದಂ ಹಾರ್ಟ್ ಬೀಟ್ ನೃತ್ಯ ಮತ್ತು ಕಲಾಸಂಸ್ಥೆ ಕಾರವಾರ ಕಲಾವಿದರ ನೃತ್ಯ ಪ್ರದರ್ಶನ ಹಾಗೂ ಯುನೈಟೆಡ್ ಬ್ರದರ್ಸ್ ನೃತ್ಯ ತಂಡ ಕಾರವಾರ ಕಲಾವಿದರ ಹಿಪ್ಹಾಪ್ ಡ್ಯಾನ್ಸ್ ಮೆಚ್ಚುಗೆಗೆ ಪಾತ್ರವಾದವು.