ಭಟ್ಕಳ : ಡಿಜಿಟಲ್ ಇಂಡಿಯಾದಂತಹ ಮಹತ್ತರ ಯೋಜನೆಯ ಮುಖಾಂತರ ಭಾರತವು ತಂತ್ರಜ್ಞಾನವನ್ನು ಅಪ್ಪಿಕೊಳ್ಳುತ್ತಿರುವಾಗ ನಾವು ಅದಕ್ಕನುಗುಣವಾಗಿ ನಮ್ಮ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕೆಂದು ಭಟ್ಕಳ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುರೇಶ ನಾಯಕ ಹೇಳಿದರು.
ಭಟ್ಕಳದ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನಲ್ಲಿ ಮಂಗಳೂರಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನವರು ಆಯೋಜಿಸಿದ್ದ ವೆಬ್ ಡಿಸೈನಿಂಗ್ ಕರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಣ್ಣ ಪುಟ್ಟ ಉದ್ಯಮಗಳು ಕೂಡ ತಮ್ಮದೇ ಜಾಲತಾಣವನ್ನು ಹೊಂದುತ್ತಿವೆ. ಹೀಗಾಗಿ ವೆಬ್ ಡಿಸೈನಿಂಗ್ ಮಾಡುವವರಿಗೆ ಬೇಡಿಕೆ ಹೆಚ್ಚುತ್ತಿದೆಯೆಂದು ಹೇಳಿದರು.
ಮಂಗಳೂರಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಮನೋಜ ಗಡಿಯಾರ, ಕಿಶೋರ ಶಿವತ್ತಾಯ ಮತ್ತು ಸುಜಿತ್ ಪೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಉಪನ್ಯಾಸಕ ವಿಶ್ವಾಸ ಪ್ರಭು ಸ್ವಾಗತಿಸಿ ನಿರೂಪಿಸಿದರು. ಪ್ರಾಂಶುಪಾಲ ಡಾ ವಿರೇಂದ್ರ ಶ್ಯಾನಭಾಗ ವಂದಿಸಿದರು.