ಉಡುಪಿ : ಹಿಜಾಬ್ ಧರಿಸುತ್ತಾರೆಂಬ ಕಾರಣಕ್ಕೆ ಆರು ಮಂದಿ ವಿದ್ಯಾರ್ಥಿನಿಯರನ್ನು ನಾಲ್ಕು ದಿನಗಳಿಂದ ತರಗತಿ ಪ್ರವೇಶ ನಿರಾಕರಿಸಿ ಹೊರಗಡೆ ನಿಲ್ಲಿಸಿರುವ ಘಟನೆ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಆರು ಮಂದಿ ವಿದ್ಯಾರ್ಥಿಗಳು ನಾಲ್ಕು ದಿನಗಳಿಂದ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬರುತ್ತಿದ್ದು, ಈ ಕಾರಣಕ್ಕೆ ಪ್ರಾಂಶುಪಾಲರು ವಿದ್ಯಾರ್ಥಿನಿಯರ ತರಗತಿ ಪ್ರವೇಶಕ್ಕೆ ನಿರಕಾರಿಸಿ, ಹೊರಗಡೆ ನಿಲ್ಲಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ನಮ್ಮ ಧಾರ್ಮಿಕ ಹಕ್ಕನ್ನು ಗೌರವಿಸಿ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಬೇಕು ಎಂದು ವಿದ್ಯಾರ್ಥಿನಿಯರು ಪಟ್ಟುಹಿಡಿದಿದ್ದಾರೆ. ಹಿಂದು ಧರ್ಮದ ಹಾಗೆ ಸಂಸ್ಕೃತಿ ಪಾಲನೆ ಮಾಡಿದಂತೆ ಮುಸ್ಲಿಂ ಧರ್ಮದಲ್ಲಿ ಹಿಜಾಬ್ ಹಾಕುತ್ತಾರೆ. ಇದಕ್ಕಾಗಿ ಸರ್ಕಾರಿ ಶಾಲೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆಂಬುದು ವಿದ್ಯಾರ್ಥಿಗಳ ಅಳಲಾಗಿದೆ.
ಕಾಲೇಜಿನ ಇನ್ನೊಂದು ಬ್ಲಾಕ್ನಲ್ಲಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬರುತ್ತಿದ್ದಾರೆ. ಅದೇ ರೀತಿ ನಾವು ಕೂಡ ಮೂರು ನಾಲ್ಕು ದಿನಗಳಿಂದ ಹಿಜಾಬ್ ಹಾಕಿಕೊಂಡು ಬರುತ್ತಿದ್ದೇವೆ. ಆದರೆ ನಮ್ಮನ್ನು ತರಗತಿಗೆ ಬಿಡುತ್ತಿಲ್ಲ. ನಾವು ಬೇರೆ ಏನನ್ನು ಕೇಳುತ್ತಿಲ್ಲ. ಹಿಜಾಬ್ ಧರಿಸಲು ನಮಗೆ ಅವಕಾಶ ನೀಡಬೇಕು. ವಿದ್ಯಾರ್ಥಿನಿಯರು |
ಹಿಜಾಬ್ ಧರಿಸುವುದು ನಮ್ಮ ಸಂಸ್ಕೃತಿ. ನಮಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ. ಕಳೆದ ನಾಲ್ಕು ದಿನಳಿಂದ ಕಾಲೇಜಿಗೆ ಬರುತ್ತಿದ್ದರೂ ತರಗತಿಗೂ ಬಿಡುತ್ತಿಲ್ಲ. ಹಾಜರಾತಿಯೂ ನೀಡುತ್ತಿಲ್ಲ. ಈ ಬಗ್ಗೆ ಪೋಷಕರನ್ನು ಕರೆದುಕೊಂಡು ಬನ್ನಿ ಎನ್ನುತ್ತಿದ್ದಾರೆ. ಪೋಷಕರು ಬಂದರೆ ಅವರ ಬಳಿಯೂ ಮಾತನಾಡದೆ ಕೆಲಸದ ನೆಪ ಹೇಳಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಈ ಆರು ಮಂದಿ ವಿದ್ಯಾರ್ಥಿನಿಯರು ಪ್ರತಿದಿನ ಕಾಲೇಜಿಗೆ ಬಂದು ಹೊರಗಡೆ ನಿಂತು ಅಲ್ಲೇ ಊಟ ಮಾಡಿ ಮನೆಗೆ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಾಲೇಜಿನ ನಿಯಮದಂತೆ ಹಿಜಾಬ್ ತೆಗೆದು ಕಾಲೇಜಿಗೆ ಬಂದರೆ ಮಾತ್ರ ತರಗತಿಗೆ ಪ್ರವೇಶ ಕಲ್ಪಿಸಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಕಾಲೇಜಿನಲ್ಲಿ ಯಾವುದೇ ಭಾಷೆ ಮಾತನಾಡಲು ನಿರ್ಬಂಧವಿಲ್ಲ. ಆದರೆ ಇತ್ತೀಚೆಗೆ ಶಿಕ್ಷಕ ಪ್ರಕಾಶ್ ವಿದ್ಯಾರ್ಥಿಗಳನ್ನು ಕರೆದು ಕಾಲೇಜು ಆವರಣದಲ್ಲಿ ಉರ್ದು, ಬ್ಯಾರಿ ಭಾಷೆ ಮಾತನಾಡುವಂತಿಲ್ಲ, ಸಲಾಮ್ ಮಾಡುವಂತಿಲ್ಲ ಹಾಗೂ ಯಾವುದೇ ಮುಸ್ಲಿಂ ಧರ್ಮದ ಆಚರಣೆ ಮಾಡುವಂತಿಲ್ಲ ಎಂದು ಹೇಳಿರೋದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಲೇಜಿನ ಪ್ರಾಂಶುಪಾಲ ರುದ್ರೆಗೌಡ ಅವರು, ನಮ್ಮಲ್ಲಿ ಈವರೆಗೆ ಹಿಜಾಬ್ ಹಾಕಿಕೊಂಡು ತರಗತಿಗೆ ಹಾಜರಾಗುವ ನಿಯಮ ಇರಲಿಲ್ಲ. ಕಳೆದ ಮೂರು ದಿನಗಳಿಂದ ಸುಮಾರು 60 ಮಂದಿ ವಿದ್ಯಾರ್ಥಿಗಳಲ್ಲಿ ಕೇವಲ ಆರು ಮಂದಿ ಮಾತ್ರ ಹಿಜಾಬ್ ಧರಿಸಿಕೊಂಡು ಬರುತ್ತಿದ್ದಾರೆ. ಆ ಕಾರಣಕ್ಕೆ ಇವರನ್ನು ತರಗತಿಗೆ ತೆಗೆದುಕೊಂಡಿಲ್ಲ. ಇವರು ಹಿಜಾಬ್ ತೆಗೆದಿರಿಸಿ ಯಾವಾಗ ಬೇಕಾದರೂ ತರಗತಿಗೆ ಬರಬಹುದು. ಅವರ ಮನೆಯವರನ್ನು ಕರೆದು ಮಾತುಕತೆ ಮಾಡಿದ್ದೇವೆ ಅವರೆಲ್ಲರೂ ಅರ್ಥ ಮಾಡಿಕೊಂಡು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಖಂಡನೆ: ಸ್ಟಾರ್ಫ್ ಧರಿಸಿದ ಕಾರಣಕ್ಕಾಗಿ ತರಗತಿಗೆ ಪ್ರವೇಶ ನಿರಾಕರಣೆ ಮಾಡಿರುವ ಪ್ರಾಂಶುಪಾಲರ ಕ್ರಮವನ್ನು ಕರ್ನಾಟಕ ಮುಸ್ಲಿಮ್ ಜಮಾಅತ್ ಉಡುಪಿ ಜಿಲ್ಲೆ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಎಸ್ಸೆಸ್ಸೆಫ್ ಉಡುಪಿ ಜಿಲ್ಲೆ, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ, ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯ್ದಿನಬ್ಬ ತೀವ್ರವಾಗಿ ಖಂಡಿಸಿದ್ದಾರೆ.