ಉಡುಪಿ: ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇಡಲು ಸಾಧ್ಯವೇ ಇಲ್ಲ. ಇದೆಲ್ಲ ಕೇವಲ ವದಂತಿ, ಈ ಸಂಬಂಧ ಹರಿದಾಡುತ್ತಿರುವ ಸುಳ್ಳು ವೀಡಿಯೊಗಳನ್ನು ಯಾರೂ ನಂಬಬಾರದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಹೇಳಿದ್ದಾರೆ.
ಉಡುಪಿ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವೀಡಿಯೊ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಕಾಲೇಜಿನಲ್ಲಿ ವಿಚಾರಣೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಬ್ರೇಕಿಂಗ್ ನ್ಯೂಸ್ ಕೊಡಲು ಬಂದಿಲ್ಲ: ನಾನು ನಿಮಗೆ ಯಾವುದೇ ಬ್ರೇಕಿಂಗ್ ನ್ಯೂಸ್ ಕೊಡಲು ಇಲ್ಲಿ ಬಂದಿಲ್ಲ. ಇದು ವಿದ್ಯಾರ್ಥಿನಿಯರು, ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ವಿಚಾರವಾಗಿರುವುದ ರಿಂದ ಕಾಯಬೇಕಾಗುತ್ತದೆ. ಇದು ಎರಡು ನಿಮಿಷದ ನೂಡಲ್ಸ್ ಥರ ಅಲ್ಲ ಎಂದು ಆಯೋಗದ ಸದಸ್ಯೆ ಖುಷ್ಬೂ ಮಾಧ್ಯಮದವರ ಪ್ರಶ್ನೆಗೆ ಖಡಕ್ ಉತ್ತರ ನೀಡಿದರು. ನಾವೇ ಈ ಕುರಿತು ಸರಿಯಾದ ಮಾಹಿತಿಯನ್ನು ನೀಡುತ್ತೇವೆ. ಸಂಬಂಧಪಟ್ಟ ಮೊಬೈಲ್ ಫೋನ್ ಗಳು ವಿಧಿ ವಿಜ್ಞಾನ ಪ್ರಯೋಗಕ್ಕೆ ಕಳುಹಿಸಲಾಗಿದೆ. ಇದಕ್ಕೆ ಹೊರತಾಗಿ ಯಾವುದೇ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ನಮಗೆ ನಮ್ಮ ಕೆಲಸ ಮಾಡಲು ಬಿಡಿ. ನಾವು ಯಾರನ್ನು ಮಾತನಾಡಿಸುತ್ತೇವೆ, ಎಲ್ಲಿಗೆ ಹೋಗುತ್ತೇವೆ ಎಂಬುದರ ಬಗ್ಗೆ ಹಿಂಬಾಲಿಸಬೇಡಿ ಎಂದರು. |
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಜೊತೆಗೆ ನಾವು ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಮಾಹಿತಿ ಸಂಗ್ರಹ ಮಾಡಲು ನಮಗೆ ಇನ್ನು ಸ್ವಲ್ಪ ಸಮಯ ಬೇಕು. ಈ ಕುರಿತು ಈಗಲೇ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಪೊಲೀಸರ ಸಹಕಾರದೊಂದಿಗೆ ನಮ್ಮ ತನಿಖೆ ಮುಂದುವರಿಯಲಿದೆ ಎಂದು ಖುಷ್ಟೂ ತಿಳಿಸಿದರು.
ನಾವು ಈಗಷ್ಟೇ ತನಿಖೆ ಆರಂಭಿಸಿದ್ದು, ವಿಚಾರಣೆಯಲ್ಲಿ ಚರ್ಚೆ ಆಗಿರುವ ಯಾವುದೇ ಮಾಹಿತಿಗಳನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಯಾರು ಕೂಡ ಈ ವಿಚಾರದಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಬಾರದು. ಸಾಕ್ಷ್ಯ ಸಿಕ್ಕಿದೆಯೇ ಎಂಬುದರ ಬಗ್ಗೆಯೂ ಏನೂ ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಪೊಲೀಸರ ಹೇಳಿಕೆ ಹೊರತಾಗಿ ಬೇರೆ ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ. ಎಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕೆಂದು ನಾನು ಪ್ರಾಮಾಣಿಕವಾಗಿ ಕೋರುತ್ತೇನೆ. ಯಾವುದೇ ವದಂತಿಗಳಿಗೆ, ವಾಟ್ಸ್ಆಪ್ ಮೆಸೇಜ್ ಗಳಿಗೆ ಗಮನ ಕೊಡಬಾರದು ಎಂದು ಅವರು ಮನವಿ ಮಾಡಿದರು.
ಮಹಿಳಾ ಆಯೋಗಕ್ಕೆ ದೂರು ಬಂದ ಕಾರಣ ನಾನು ಇಲ್ಲಿಗೆ ಬಂದಿದ್ದೇನೆ. ನನ್ನ ಬಳಿ ಯಾವುದೇ ರಾಜಕೀಯಕ್ಕೆ ಸಂಬಂಧಪಟ್ಟ ಯಾವುದೇ ಪ್ರಶ್ನೆಗಳನ್ನು ಕೇಳಬಾರದು.ಎಲ್ಲದಕ್ಕೂ ಉತ್ತರ ಕೊಡಲು ಆಗುವುದಿಲ್ಲ. ನಮ್ಮ ಕೆಲಸ ಪೂರ್ಣಗೊಂಡ ಬಳಿಕ ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇವೆ. ಸದ್ಯ ನಿಮಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಆರೋಪಗಳು ಅನೇಕ ಇರಬಹುದು. ಅದರ ಆಧಾರದಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಖುಷ್ಬೂ ಸುಂದರ್ ತಿಳಿಸಿದರು.
ಕಾಲೇಜಿಗೆ ಭೇಟಿ, ಸುದೀರ್ಘ ವಿಚಾರಣೆ: ರಾಷ್ಟ್ರಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಗುರುವಾರ ಉಡುಪಿ ಅಂಬಲಪಾಡಿಯಲ್ಲಿರುವ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಸುದೀರ್ಘ ವಿಚಾರಣೆ ನಡೆಸಿದರು.
ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಂತ್ರಸ್ತೆ ಯುವತಿಯರ ಜೊತೆ ಸುದೀರ್ಘವಾಗಿ ಮಾತುಕತೆ ನಡೆಸಿದರು. ಸುಮಾರು 5 ಗಂಟೆಗಳ ಬಳಿಕ ವಿಚಾರಣೆ ಅಂತ್ಯಗೊಂಡಿತು. ನಾಳೆ ಮತ್ತೆ ವಿಚಾರಣೆ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಖುಷ್ಬೂ ಹಾಗೂ ತಂಡ ಘಟನೆ ನಡೆದ ಶೌಚಾಲಯವನ್ನು ಕೂಡ ಪರಿಶೀಲಿಸಿತು. ಅಲ್ಲದೆ ಪ್ರಕರಣದ ತನಿಖಾಧಿಕಾರಿಯಾಗಿರುವ ಮಲ್ಪೆ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಮಹಜರು ಪ್ರಕ್ರಿಯೆ ನಡೆಸಲಾಯಿತು.