ಚಂಡಿಗಡ: ಹರ್ಯಾಣ ಗಡಿಯಲ್ಲಿ ತೀವ್ರಗೊಂಡಿರುವ ರೈತರ ಪ್ರತಿಭಟನೆ ನಡುವೆಯೇ ಶುಕ್ರವಾರ 2024-25ನೇ ಸಾಲಿಗಾಗಿ 1.89 ಲ.ಕೋ. ರೂ.ಗಳ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಕೆಲವು ಬೆಳೆ ಸಾಲಗಳ ಮೇಲಿನ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡುವುದಾಗಿ ಪ್ರಕಟಿಸಿದರು.
ತನ್ನ ಸರಕಾರವು ರೈತರ ಕಲ್ಯಾಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ ಮತ್ತು 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯನ್ನು ನೀಡಲಾಗುತ್ತಿದೆ ಎಂದು ತನ್ನ ಬಜೆಟ್ ಭಾಷಣದಲ್ಲಿ ಪ್ರತಿಪಾದಿಸಿದ ಖಟ್ಟರ್, 'ಮೇರಿ ಫಸಲ್ ಮೇರಾ ಬೋರಾ (ನನ್ನ ಬೆಳೆ ನನ್ನ ಮಾಹಿತಿ)' ಪೋರ್ಟಲ್ನಲ್ಲಿ ನೋಂದಣಿಯನ್ನು ಹೊಂದಿರುವ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ 2023,ಸೆ.30ರವರೆಗೆ ಪಡೆದುಕೊಂಡಿರುವ ಬೆಳೆಸಾಲಗಳ ಅಸಲನ್ನು 2024 ಮೇ 31 ರೊಳಗೆ ಮರುಪಾವತಿಸಿದರೆ ಬಡ್ಡಿ ಮತ್ತು ದಂಡಗಳನ್ನು ಮನ್ನಾ ಮಾಡಲಾಗುವುದು ಎಂದು ತಿಳಿಸಿದರು. ಬಳಿಕ ರೈತರು ಖಾರಿಫ್ ಬೆಳೆ ಸಾಲಕ್ಕಾಗಿ ಅರ್ಹರಾಗಿರುತ್ತಾರೆ ಎಂದರು.
ನೀವು ರೈತರ ಬಗ್ಗೆ ಮಾತನಾಡುತ್ತಿದ್ದೀರಿ, ಆದರೆ ರೈತರ ವಿರುದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಲು ಮುಂದಾಗಿರುವುದು ಏಕೆ ಎಂದು ಪ್ರಶ್ನಿಸಿದ ಪ್ರತಿಪಕ್ಷ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರು, ರೈತರು ಹರ್ಯಾಣದ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.