ಟೀಸ್ಟಾ ಸೆಟಲ್ವಾಡ್ ಬಂಧನ; ಮುಂಬೈನಲ್ಲಿ ಬಂಧಿಸಿ ಅಹ್ಮದಾಬಾದ್‌ಗೆ ಕೊಂಡೊಯ್ದ ಗುಜರಾತ್ ಎಟಿಎಸ್ ಪೊಲೀಸರು; ಗುಜರಾತ್ ಗಲಭೆಗೆ ಸಂಬಂಧಿಸಿ ಸುಳ್ಳು ಮಾಹಿತಿ ನೀಡಿದ ಆರೋಪ

Source: Vb | By I.G. Bhatkali | Published on 26th June 2022, 11:58 AM | National News |

ಹೊಸದಿಲ್ಲಿ: ಗುಜರಾತ್ ಗಲಭೆ ಸಂತ್ರಸ್ತರ ಪರ ಕಾನೂನು ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತೆ ಟೀಸ್ಟಾ ಸೆಟಲ್ವಾಡ್ ಅವರನ್ನು ಗುಜರಾತ್‌ ಭಯೋತ್ಪಾದಕ ನಿಗ್ರಹ ದಳ ಶನಿವಾರ ಮುಂಬೈನಲ್ಲಿ ಬಂಧಿಸಿದೆ. ನಿವೃತ್ತ ಪೊಲೀಸ್ ವರಿಷ್ಠ ಆರ್.ಬಿ.ಶ್ರೀಕುಮಾರ್ ಅವರನ್ನು ಕೂಡಾ ಗುಜರಾತ್ ಪೊಲೀಸರು ಬಂಧಿಸಿದ್ದಾರೆಂದು ಮೂಲಗಳು ತಿಳಿಸಿವೆ. ಟೀಸ್ಟಾ ಸೆಟಲ್ಲಾಡ್ ಹಾಗೂ ಇನ್ನಿಬ್ಬರು ಮಾಜಿ ಐಪಿಎಸ್ ಅಧಿಕಾರಿಗಳಾದ ಸಂಜೀವ ಭಟ್‌ ಹಾಗೂ ಶ್ರೀಕುಮಾರ್, ಗುಜರಾತ್‌ ಗಲಭೆಗೆ ಸಂಬಂಧಿಸಿ ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆಂದು ಅವರ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಗುಜರಾತ್‌ ಗಲಭೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಗುಜರಾತ್ ಹೈಕೋರ್ಟ್‌ ನೀಡಿದ್ದ ಕ್ಲೀನ್‌ ಚಿಟ್ ಅನ್ನು ಸುಪ್ರೀಂಕೋರ್ಟ್ ಶುಕ್ರವಾರ ಎತ್ತಿಹಿಡಿದಿತ್ತು. ಇದಾದ ಮರುದಿನವೇ ಟೇಸ್ಟಾ ಸೆಟಲ್ವಾಡ್ ಅವರ ಬಂಧನವಾಗಿದೆ.

ಈ ಮಧ್ಯೆ ಗುಜರಾತನ ಭಯೋತ್ಪಾದನಾ 'ನಿಗ್ರಹದಳದ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಟೀಸ್ಟಾ ಸೆಟಲ್ವಾಡ್ ಅವರು ಸಾಂತಕ್ರೂಝ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರ ದೂರಿನ ಅರ್ಜಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆಂದು ಸೆಟಲ್ವಾಡ್ ಅವರ ನ್ಯಾಯವಾದಿ ವಿಜಯ್ ಹಿರೇಮ‌ ತಿಳಿಸಿದ್ದಾರೆ.

'ನಮಗೆ ಮಾಹಿತಿ ನೀಡದೆಯೇ ಗುಜರಾತ್ ನ ಎಟಿಎಸ್ ಪೊಲೀಸರು ಟೀಸ್ಟಾ ಅವರ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ' ಎಂದು ಹಿರೇಮಠ ಆಪಾದಿಸಿದ್ದಾರೆ.

ಸೆಟಲ್ವಾಡ್ ಅವರು ಗುಜರಾತ್‌ ಗಲಭೆಯ ಸಂತ್ರಸ್ತ ಝಕಿಯಾ ಜಾಫ್ರಿ ಅವರ ಮೂಲಕ ನ್ಯಾಯಾಲಯದಲ್ಲಿ ಹಲವಾರು ಅರ್ಜಿಗಳನ್ನು ದಾಖಲಿಸುವಂತೆ ಮಾಡಿದ್ದರು ಹಾಗೂ ವಿಶೇಷ ತನಿಖಾ ತಂಡ ಹಾಗೂ ಇತರ ತನಿಖಾ ಆಯೋಗಗಳಿಗೆ ಸುಳ್ಳು ಮಾಹಿತಿಗಳನ್ನು ನೀಡಿದ್ದರು ಎಂದು ಎಫ್‌ಐಆರ್‌ ನಲ್ಲಿ ಆಪಾದಿಸಲಾಗಿದೆ.

ಶನಿವಾರ ಮುಂಬೈನ ಜುಹುವಿನಲ್ಲಿರುವ ಟೀಸ್ಟಾರ ನಿವಾಸಕ್ಕೆ ಆಗಮಿಸಿದ ಗುಜರಾತ್‌ನ ಎಟಿಎಸ್ ತಂಡವು, ಅವರನ್ನು ಸಾಂತಾಕ್ರೂಝ್ ಪೊಲೀಸ್‌ ಠಾಣೆಗೆ ಕರೆದೊಮ್ಮಿತು, ಅಲ್ಲಿ ಅವರನ್ನು ಬಂಧಿಸಲಾಯಿತು. ಆನಂತರ ಅವರನ್ನು ಗುಜರಾತ್‌ ಅಹ್ಮದಾಬಾದ್ ನಲ್ಲಿರುವ ಕಂಬ್ರಾಂಚ್ ಕಚೇರಿಗೆ ಕರೆತರಲಾಯಿತು. ಎಂದು ಅಹದಾಬಾದ್ ನಗರದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆಟಲ್ದಾಡ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 468 (ವಂಚನೆಯ ಉದ್ದೇಶದಿಂದ ಫೋರ್ಜರಿ ದಾಖಲೆಗಳ ಸೃಷ್ಟಿ), 471 ( ನಕಲಿ ದಾಖಲೆಗಳನ್ನು ನೈಜವೆಂಬಂತೆ ಬಿಂಬಿಸಿ ಬಳಸುವುದು), 194 (ಮರಣದಂಡನೆಯ ಶಿಕ್ಷೆಯಾಗುವಂತೆ ಮಾಡುವ ಉದ್ದೇಶದಿಂದ ಸುಳ್ಳು ಪುರಾವೆಗಳನ್ನು ನೀಡುವುದು ಅಥವಾ ರೂಪಿಸುವುದು), 211 (ಅಪರಾಧ ಎಸಗಿರುವುದಾಗಿ ಸುಳ್ಳು ಆರೋಪ ಹೊರಿಸುವುದು), 120 (ಬಿ) (ಕ್ರಿಮಿನಲ್ ಸಂಚು) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸ್ ವಕ್ತಾರ, ಡಿಸಿಪಿ ಸಂಜಯ್‌ ಲಾಟ್ಕರ್ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, 2002ರ ಗುಜರಾತ್‌ ಗಲಭೆ ಬಗ್ಗೆ ಸೆಟಲ್ವಾಡ್ ಅವರು ಪೊಲೀಸರಿಗೆ ಆಧಾರರಹಿತ ಮಾಹಿತಿಗಳನ್ನು ನೀಡಿದ್ದರು ಎಂದು ಆಪಾದಿಸಿದ್ದರು. ಅಲ್ಲದೆ ಸೆಟಲ್ವಾಡ್ ನಡೆಸುತ್ತಿದ್ದ ಎನ್‌ ಜಿಒ ಸಂಸ್ಥೆಯೊಂದು ಪೊಲೀಸ್‌ ಠಾಣೆಗಳಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ದೂರುಗಳನ್ನು ನೀಡಿತ್ತು ಎಂದು ಶಾ ಹೇಳಿದ್ದರು.

ಗುಜರಾತ್ ಗಲಭೆಗೆ ಸಂಬಂಧಿಸಿ ಗುಜರಾತ್ ಹೈಕೋರ್ಟ್ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದ ಕ್ಲೀನ್‌ ಚಿಟ್ ಅನ್ನು ಶುಕ್ರವಾರ ಎತ್ತಿಹಿಡಿದ ಸುಪ್ರೀಂಕೋರ್ಟ್, ಸಾಮಾಜಿಕ ಕಾರ್ಯಕರ್ತೆ ಟೀಸ್ಟಾ ಸೆಟಲ್ವಾಡ್ ಅವರು ದುರುದ್ದೇಶದಿಂದ ಅರ್ಜಿದಾರೆ ಹಾಗೂ ಸನ್ನಿವೇಶದ ನೈಜ ಸಂತ್ರಸ್ತೆಯಾದ ಝಕಿಯಾ ಜಾಫ್ರಿ ಅವರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಟೀಸ್ಟಾ ಅವರ ಪೂರ್ವಾಪರಗಳ ಬಗ್ಗೆ ಪರಿಶೀಲಿಸಬೇಕಾಗಿದೆಯೆಂದು ಸುಪ್ರೀಂಕೋರ್ಟ್ ಅಭಿಪ್ರಾಯಿಸಿತ್ತು.

2002ರ ಗುಜರಾತ್ ಗಲಭೆ ಸಂದರ್ಭ ಅಹ್ಮದಾ ಬಾದ್‌ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ ಮಾಜಿ ಕಾಂಗ್ರೆಸ್ ಸಂಸದ ಎಪ್ಪಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಟೀಸ್ಟಾ ಸೆಟಲ್ವಾಡ್ ಅವರು 2018ರಲ್ಲಿ ಸುಪ್ರೀಂಕೋರ್ಟ್‌ನ ಮೆಟ್ಟಲೇರಿದ್ದರು. ಗುಜರಾತ್ ಗಲಭೆಗೆ ಸಂಬಂಂಧಿಸಿ ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡವು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪರಿಶೀಲಿಸಿಲ್ಲ ಹಾಗೂ ಅದರ ತನಿಖೆಯ ಪಕ್ಷಪಾತದಿಂದ ಕೂಡಿತ್ತು ಹಾಗೂ ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳ ವಿರುದ್ಧ ವಿಚಾರಣೆಯಾಗಬೇಕೆಂದು ಅವರು ನ್ಯಾಯಾಲವನ್ನು ಆಗ್ರಹಿಸಿದ್ದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...