ಯಲ್ಲಾಪುರ : ತೋಟದಲ್ಲಿ ಕೆಲಸ ಮಾಡುತ್ತಿರುವ ವೇಳೆ ಗುಡ್ಡದ ಮಣ್ಣು ಕುಸಿದು ನಾಲ್ವರು ಸಾವನ್ನಪ್ಪಿದ ಧಾರುಣ ಘಟನೆ ಯಲ್ಲಾಪುರ ತಾಲ್ಲೂಕಿನ ಇಡಗುಂದಿಯಲ್ಲಿ ನಡೆದಿದೆ.
ತಾಲೂಕಿನ ಕಿರವತ್ತಿ ಗೌಳಿವಾಡದ ನಿವಾಸಿಗಳಾದ ಸಂತೋಷ್ ಡೋಯಿಪಡೆ (18), ಭಾಗ್ಯಶ್ರೀ ಎಡಗೆ (21), ಲಕ್ಷ್ಮೀ ಡೋಯಿಪಡೆ (38) ಹಾಗೂ ಮಾಳು ಡೋಯಿಪಡೆ (21) ಮೃತ ದುರ್ದೈವಿಗಳಾಗಿದ್ದಾರೆ. ಘಟನೆಯಲ್ಲಿ
ತಗ್ಗಿಬಾಯಿ, ಸೋನಿ ಹಾಗೂ ಬೀರು ಎನ್ನುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಡಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂತೇಬೈಲ್ ನ ಮಂಜುನಾಥ ಭಟ್ಟ ಎಂಬುವವರ ತೋಟದಲ್ಲಿ ಒಟ್ಟು ಏಳು ಮಂದಿ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಧರೆ ಅಗೆದು ತೋಟಕ್ಕೆ ಮಣ್ಣು ಹಾಕುತ್ತಿದ್ದ ವೇಳೆಗೆ ಮಣ್ಣು ಕುಸಿದು ಕಾರ್ಮಿಕರ ಮೇಲೆ ಬಿದ್ದಿದರಿಂದ ಸಮಾಧಿಯಾಗಿದ್ದಾರೆ.
ಯಲ್ಲಾಪುರ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಶವವನ್ನ ಮೇಲಕ್ಕೆ ತೆಗೆದಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗಿದೆ.