ಶಿರಸಿ: ಬಸ್‌-ಕಾರು ನಡುವೆ ಭೀಕರ ಅಪಘಾತ; ಐವರ ದಾರುಣ ಸಾವು

Source: S O News | By I.G. Bhatkali | Published on 9th December 2023, 9:23 AM | Coastal News |

ಶಿರಸಿ: ಬಸ್‌ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಕುಮಟಾ-ಶಿರಸಿ ಹೆದ್ದಾರಿಯ ಬಂಡಲ್ ಸಮೀಪದ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ವರದಿಯಾಗಿದೆ.

ಅಪಘಾತದಿಂದ ಕಾರಿನಲ್ಲಿದ್ದ ದ.ಕ. ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಹಾಗೂ ಚೆನ್ನೈ ಮೂಲದ ಕಾರು ಚಾಲಕ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ನಿಕಂಬಳದ ರಾಮಕೃಷ್ಣರಾವ್‌ ಬಾಬುರಾವ್ (71), ಪುಷ್ಪಾ ಮೋಹನ್ ರಾವ್ (67) ಮೋಹನ ರಾವ್ (62), ಸುಹಾಸ ಗಣೇಶ್ ರಾವ್ (30) ಹಾಗೂ ಚೆನ್ನೈನ ಅರವಿಂದ (45) ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿರಸಿ ಕಡೆಯಿಂದ ಕುಮಟಾಕ್ಕೆ ಹೋಗುತ್ತಿದ್ದ ಬಸ್ ಹಾಗೂ ಕುಮಟಾ ಕಡೆಯಿಂದ ಶಿರಸಿ ಕಡೆಗೆ ಬರುತ್ತಿದ್ದ ಕಾರಿನ ನಡುವೆ ಢಿಕ್ಕಿ ಸಂಭವಿಸಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರು ಶಿರಸಿಯಲ್ಲಿ ಮದುವೆ ಸಮಾರಂಭಕ್ಕೆ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಸ್‌ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next