ಕೋಮು ದ್ವೇಷಕ್ಕೆ ಬಲಿಯಾದ 6 ಮಂದಿಯ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ, ಸರಕಾರಿ ಕೆಲಸ, ಬಿಜೆಪಿಯ ಸಂವಿಧಾನ ವಿರೋಧಿ ತಾರತಮ್ಯ ನೀತಿಯನ್ನು ಅಳಿಸಿದ್ದೇವೆ: ಮುಖ್ಯಮಂತ್ರಿ
ಬೆಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಿ ಕೋಮು ದ್ವೇಷಕ್ಕೆ ಬಲಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಸೂದ್, ಮುಹಮ್ಮದ್ ಫಾಝಿಲ್, ಅಬ್ದುಲ್ ಜಲೀಲ್, ದೀಪಕ್ ರಾವ್, ಮಂಡ್ಯ ಜಿಲ್ಲೆಯ ಇದ್ರೀಸ್ ಪಾಶಾ ಹಾಗೂ ಗದಗ ಜಿಲ್ಲೆಯ ಶಮೀರ್ ಸೇರಿದಂತೆ ಆರು ಮಂದಿಯ ಕುಟುಂಬದ ಸದಸ್ಯರಿಗೆ ತಲಾ 25 ಲಕ್ಷ ರೂ.ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಸ್ತಾಂತರಿಸಿದರು. ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಆರು ಮಂದಿಯ ಕುಟುಂಬದ ಸದಸ್ಯರಿಗೆ ಚೆಕ್ ಹಸ್ತಾಂತರಿಸಿದ ಬಳಿಕ ಮಾತನಾಡಿದ ಅವರು, 'ಸರಕಾರ ಸರ್ವರಿಗೂ ಸೇರಿದ್ದು. ಬಿಡಿ ಬಿಡಿಯಾಗಿ ಒಂದು ಜಾತಿ, ಒಂದು ಧರ್ಮದ ಪರವಾಗಿ ವರ್ತಿಸುವುದು ಸಂವಿಧಾನ ವಿರೋಧಿ ಕೃತ್ಯವಾಗುತ್ತದೆ' ಎಂದು ನುಡಿದರು.
ಈ ಹಿಂದೆ ಅಧಿಕಾರ ದಲ್ಲಿದ್ದ ಬಿಜೆಪಿ ಸರಕಾರ ಕೋಮು ಸಂಘರ್ಷಕ್ಕೆ ಬಲಿಯಾದವರಿಗೆ 25ಲಕ್ಷ ಕೂ ರೂ.ಪರಿಹಾರದ ಜೊತೆಗೆ ಸರಕಾರಿ ಕೆಲಸವನ್ನು ನೀಡಿತ್ತು. ಆದರೆ, ಹಿಂದೂ-ಮುಸ್ಲಿಮ್ ಎಂದು ತಾರತಮ್ಯ ನೀತಿಯನ್ನು ಅನುಸರಿಸಿತ್ತು. ಆದರೆ, ನಮ್ಮ ಸರಕಾರ ಯಾವುದೇ ತಾರತಮ್ಯ ನೀತಿ ಅನುಸರಿಸದೆ ಎಲ್ಲರಿಗೂ ತಲಾ 25ಲಕ್ಷ ರೂ.ಪರಿಹಾರ ನೀಡಿದ್ದು, ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಕೆಲಸವನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಹಿಂದೂ-ಮುಸ್ಲಿಮ್ ಎಂದು ತಾರತಮ್ಯ ಮಾಡುವುದು ಸರಕಾರಕ್ಕೆ ಶೋಭೆಯಲ್ಲ. # ಸಿದ್ದರಾಮಯ್ಯ, ಮುಖ್ಯಮಂತ್ರಿ |
'ಬಿಜೆಪಿಯ ದ್ವೇಷ ಮತ್ತು ತಾರತಮ್ಯದ ರಾಜಕಾರಣದ ವಿರುದ್ಧ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ವಿಧಾನಸಭೆ ಅಧಿವೇಶನದಲ್ಲೇ ಧ್ವನಿ ಎತ್ತಿದ್ದೆ. ಕೋಮುಗಲಭೆಗಳಿಗೆ ಬಲಿಯಾದ ಮೃತರ ಹೆಸರಲ್ಲೂ ಬಿಜೆಪಿ ತಾರತಮ್ಯ ನೀತಿಯನ್ನು ಅನುಸರಿಸಿತು. ಮೃತರ ಕುಟುಂಬದವರ ಕಣ್ಣೀರು ಒರೆಸುವುದು ಮತ್ತು ಪರಿಹಾರ ವಿತರಣೆಯಲ್ಲೂ ಹಿಂದಿನ ಸರಕಾರ ತಾರತಮ್ಯವನ್ನು ಮೆರೆದಿತ್ತು. ಹಿಂದಿನ ಬಿಜೆಪಿ ಪರಿವಾರ ಮಾಡಿದ ತಾರತಮ್ಯವನ್ನು ಇದೀಗ ಸರಿಪಡಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
'ನಮ್ಮ ಸರಕಾರದ ಅವಧಿಯಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಮತಾಂಧರಿಗೆ ಅನೈತಿಕ ಪೊಲೀಸ್ ಗಿರಿಯಲ್ಲಿ ತೊಡಗುವವರಿಗೆ, ಜಾತಿ-ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ' ಎಂದು ಎಚ್ಚರಿಕೆ ನೀಡಿದ ಸಿದ್ದರಾಮಯ್ಯ, ಕೋಮು ದ್ವೇಷ ಸೃಷ್ಟಿಸುವ ಮತಾಂಧರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಚೆಕ್ ವಿತರಣೆ ಸಂದರ್ಭದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ, ವಸತಿ ಸಚಿವ ಬಿ.ಝಡ್, ಝಮೀರ್ ಅಹಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹಮದ್, ಕೆ. ಗೋವಿಂದರಾಜು ಸೇರಿದಂತೆ ಕೋಮುದ್ವೇಷಕ್ಕೆ ಬಲಿಯಾದ ಕುಟುಂಬಗಳ ಸದಸ್ಯರು ಹಾಜರಿದ್ದರು.
ಕೋಮು ದ್ವೇಷಕ್ಕೆ ಬಲಿಯಾದವರು: ದಕ್ಷಿಣಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಳಂಜ ಗ್ರಾಮದ ಮಸೂದ್ 2022ರ ಜುಲೈ 19ರಂದು ಕೋಮು ಸಂಘರ್ಷಕ್ಕೆ ಬಲಿಯಾಗಿದ್ದರು. ಮಂಡ್ಯ ಜಿಲ್ಲೆ ಗುತ್ತಲು ಕಾಲನಿಯ ಸಬ್ದರಿಯಾ ಮೊಹಲ್ಲಾದ ಇದೀಸ್ ಪಾಶಾ 2023ರ ಮಾರ್ಚ್ 31ರಂದು, ದಕ್ಷಿಣಕನ್ನಡ ಜಿಲ್ಲೆ ಮಂಗಳೂರಿನ ಬಾಳ ಗ್ರಾಮ ಮಂಗಳ ಪೇಟೆಯ ಮುಹಮ್ಮದ್ ಫಾಝಿಲ್ 2022ರ ಜುಲೈ 28ರಂದು, ಗದಗ ಜಿಲ್ಲೆ ನರಗುಂದದ ಶಮೀರ್ 2022ರ ಜನವರಿ 17ರಂದು, ದಕ್ಷಿಣಕನ್ನಡ ಜಿಲ್ಲೆ ಮಂಗಳೂರಿನ ಕಾಟಿಪಳ್ಳದ ಅಬ್ದುಲ್ ಜಲೀಲ್ 2022ರ ಡಿಸೆಂಬರ್ 24ರಂದು ಹಾಗೂ ದೀಪಕ್ ರಾವ್ 2018ರ ಜನವರಿ 3ರಂದು ಕೋಮು ದ್ವೇಷದ ರಾಜಕಾರಣಕ್ಕೆ ಬಲಿಯಾಗಿದ್ದರು.