ಬೈಲಹೊಂಗಲ: ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಡಾ.ಅಂಜಲಿ, ಹುಬ್ಬಳ್ಳಿಯ ಕಾಲೇಜಿನಲ್ಲಿ ಓದುತ್ತಿದ್ದ ನೇಹಾ ಹಿರೇಮಠಳನ್ನು ಹತ್ಯೆ ಮಾಡಿರುವ ವಿಚಾರವಾಗಿ ಪ್ರಚಾರದ ನಡುವೆಯೇ ಆಕೆಯ ಫೊಟೊಗೆ ಮೊಂಬತ್ತಿ ಬೆಳಗಿ, ಎರಡು ನಿಮಿಷ ಮೌನಾಚರಣೆ ಮಾಡಿ ಆತ್ಮಕ್ಕೆ ಶಾಂತಿ ಕೋರಿದರು.
ನೇಹಾಳನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ರಾಕ್ಷಸೀ ಕೃತ್ಯ. ಈ ಸಂದರ್ಭದಲ್ಲಿ ರಾಜಕೀಯವಾಗಿ ಪ್ರಕರಣವನ್ನ ಬಳಸದೆ ಆ ಕುಟುಂಬಕ್ಕೆ ಸಾಂತ್ವನ ನೀಡಬೇಕಿದೆ. ಆ ಕುಟುಂಬದ ದುಃಖದಲ್ಲಿ ಜೊತೆಯಾಗಬೇಕಿದೆ. ಮಗಳನ್ನ ಕಳೆದುಕೊಂಡ ಕುಟುಂಬದ ನೋವು ಏನೆಂದು ಒಬ್ಬ ತಾಯಿಯಾಗಿ ನಾನು ಬಲ್ಲೆ ಎಂದು ಡಾ.ಅಂಜಲಿ ನಿಂಬಾಳ್ಕರ್ ಈ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ್ ಮತ್ತಿತರರು ಇದ್ದರು.