ಭಟ್ಕಳ: ಮಂಗಳೂರು-ಮಡ್ಗಾಂವ್ ನಡುವೆ ಆರಂಭವಾಗಿರುವ ವಂದೇ ಭಾರತ್ ರೈಲನ್ನು ಭಟ್ಕಳ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.
ವಂದೇ ಭಾರತ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಮಂಗಳೂರು ಮತ್ತು ಕಾರವಾರ ನಡುವೆ ಉಡುಪಿಯಲ್ಲಿ ಮಾತ್ರ ನಿಲ್ಲುತ್ತದೆ. ಭಟ್ಕಳ ತಾಲೂಕಿನ ಮುರ್ಡೇಶ್ವರ ಪ್ರವಾಸಿ ಕೇಂದ್ರವಾಗಿದ್ದು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದು ಹೋಗುವುದು ಮುಂದುವರಿದಿದೆ. ಆದರೆ, ವಂದೇ ಭಾರತ್ ರೈಲಿಗೆ ಭಟ್ಕಳ ಅಥವಾ ಮುರ್ಡೇಶ್ವರದಲ್ಲಿ ನಿಲುಗಡೆ ನೀಡಿಲ್ಲ.
ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಈ ವಂದೇ ಭಾರತ್ ರೈಲಿನ ಅಂತರ ಮಂಗಳೂರು-ಉಡುಪಿ ನಡುವೆ ಕೇವಲ 60 ಕಿ.ಮೀ., ಕಾರವಾರ-ಮಡಗಾಂವ್ ನಡುವೆ 65 ಕಿ.ಮೀ., ಉಡುಪಿ-ಕಾರವಾರ ನಡುವೆ 213 ಕಿ.ಮೀ. ಅಂತರ ಇದ್ದು ಭಟ್ಕಳ ರೈಲು ನಿಲ್ದಾಣ ಮಧ್ಯದಲ್ಲಿದೆ. ಆದ್ದರಿಂದ ಭಟ್ಕಳದಲ್ಲಿ ರೈಲು ನಿಲುಗಡೆಯಾದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಭಟ್ಕಳದಿಂದ ಮಂಗಳೂರು, ಕಾರವಾರ ಸೇರಿದಂತೆ ಮಡಗಾಂವ್ಗೆ ತೆರಳಿ ಅಲ್ಲಿಂದ ಭಟ್ಕಳಕ್ಕೆ ನೂರಾರು ಪ್ರಯಾಣಿಕರು ಸಂಚರಿಸುತ್ತಿದ್ದು, ಈ ರೈಲು ಭಟ್ಕಳದಲ್ಲಿ ನಿಲುಗಡೆಯಾಗುವಂತೆ ಜನರು ಒತ್ತಾಯಿಸುತ್ತಿದ್ದಾರೆ.