ಭಟ್ಕಳ: ತಾಲೂಕಿನ ಶಿರಾಲಿ ಗ್ರಾ.ಪಂ ವ್ಯಾಪ್ತಿಯ ವೆಂಕಟಾಪುರ ನದಿಯಲ್ಲಿ ಬುಧವಾರ ಮೃತದೇಹವೊಂದು ಪತ್ತೆಯಾಗಿದ್ದು ಕೆಎಸ್ಆರ್ಟಿಸಿ ನಿವೃತ್ತ ಉದ್ಯೋಗಿ ಬೆಂಗಳೂರಿನ ಕಸ್ತುರಬಾ ರಸ್ತೆ ಅಂಚೆಪಾಳ್ಯದ ಶ್ರೀನಿವಾಸ ಡಿ. (೭೦) ಎಂದು ಗುರುತಿಲಾಗಿದೆ.
ಇವರು ತಮ್ಮ ಪುತ್ರ ಗೋಪಾಲರೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಆಗಾಗ ಮನೆಯಿಂದ ಮೂರು ನಾಲ್ಕು ದಿನ ಹೊರಗಡೆ ಇರುತ್ತಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಕಳೆದ ಗುರುವಾರ ಮನೆಯಿಂದ ಹೊರ ಹೋಗಿದ್ದ ಇವರನ್ನು ಬೆಂಗಳೂರಿನ ಅನೇಕ ಕಡೆಗಳಲ್ಲಿ ಹುಡುಕಾಡಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.
ಬುಧವಾರ ವೆಂಕಟಾಪುರ ನದಿಯ ದಡದಲ್ಲಿ ವ್ಯಕ್ತಿಯೊಬ್ಬರ ಬಟ್ಟೆಗಳು ಇರುವುದನ್ನು ಗಮನಿಸಿದ ಸ್ಥಳಿಯರು ನದಿಯಲ್ಲಿ ಮೃತದೇಹ ಇರುವುದನ್ನು ಪತ್ತೆ ಹಚ್ಚಿದ್ದಾರೆ. ವಿಷಯ ತಿಳಿದ ಗ್ರಾಮೀಣ ಠಾಣೆಯ ಪಿ.ಎಸ್.ಐ ಓಂಕಾರಪ್ಪ ಹಾಗೂ ಸಿಬ್ಬಂಧಿಗಳು ಸ್ಥಳಿಯ ಎಸ್.ಡಿ.ಪಿ.ಐ ಕಾರ್ಯಕರ್ತರ ಸಹಾಯದಿಂದ ಮೃತದೇಹವನ್ನು ನದಿಯಿಂದ ಹೊರತೆಗೆದು ಭಟ್ಕಳದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿದ್ದಾರೆ. ಮೃತ ವ್ಯಕ್ತಿಯ ಅಂಗಿ ಕಾಲರ್ ಪಟ್ಟಿಯಲ್ಲಿದ್ದ ಟೈಲರ್ ಮೊಬೈಲ್ ನಂಬರಿನ ಆಧಾರದಲ್ಲಿ ವ್ಯಕ್ತಿಯ ಗುರುತನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.