ಕಾರವಾರ : ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖ್ಯಮಂತ್ರಿ ಆದಿತ್ಯನಾಥ್ ಆಡಳಿತದಲ್ಲಿ ಸಂವಿಧಾನ ಎಲ್ಲಾ ಆಶಯಗಳನ್ನು ಗಾಳಿಗೆ ತೂರುವ ಕೆಲಸ ನಿರಂತರವಾಗಿ ನಡೆದಿದೆ. ಹತ್ರಾಸ್ ನಲ್ಲಿ ದಲಿತ ಯುವತಿಯ ಅತ್ಯಾಚಾರ ಖಂಡಿಸಿ ಕಾರವಾರದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.ಈ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪತ್ರಕರ್ತರನ್ನು ಕೊಲೆ ಮಾಡಿದ್ದಾಯಿತು, ವಿರೋಧ ಪಕ್ಷಗಳ ಮುಖಂಡರ ಕೊಲೆಯೂ ನಡೆಯಿತು. ಗೂಂಡಾಗಳನ್ನು ಸಾಕಿಕೊಂಡು, ಬಿಜೆಪಿ ಬಲ ಹೆಚ್ಚಿಸುತ್ತಿದ್ದ ಡಾನ್ಗಳನ್ನು ಪ್ರಶ್ನೆ ಮಾಡಿದ ಮಾತ್ರಕ್ಕೆ ಅವರನ್ನೂ ಕೊಲೆ ಮಾಡಲಾಯಿತು, ಆ ರಾಜ್ಯದಲ್ಲಿ ಬಡವರು, ದಲಿತರು, ಆದಿವಾಸಿಗಳು ಮುಂತಾದ ದುರ್ಬಲ ವರ್ಗಗಳ ಯವಕರಂತೂ ಬೀದಿ ಬೀದಿಗಳಲ್ಲಿ ಕೊಲೆಯಾಗುತ್ತಿದ್ದಾರೆ. ಮಹಿಳೆಯರು, ಯುವತಿಯರು, ಬಾಲಕಿಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನಿಷಾ ವಾಲ್ಮೀಕಿ ಎಂಬ ದಲಿತ ಯುವತಿ ಮೇಲಿನ ಅತ್ಯಾಚಾರ ಮತ್ತು ಆಸ್ಪತ್ರೆಯಲ್ಲಿ ಆಕೆಯ ಸಾವು ಸಂವಿಧಾನವನ್ನು ಹೊಸಕಿ ಹಾಕಿದೆ. ಆಗ್ರಾ, ಮಥುರಾ ಮತ್ತು ಆಲಿಘಡ ನಗರಗಳ ನಡುವೆ ಇರುವ ಹತ್ರಾಸ್ ಎಂಬ ಪಟ್ಟಣದ 19 ವರ್ಷದ ಯುವತಿ ಮನಿಷಾ ವಾಲ್ಮೀಕಿ ಅತ್ಯಾಚಾರಕ್ಕೊಳಗಾಗಿ ಜೀವ ಕಳೆದುಕೊಂಡಿದ್ದಾಳೆ. ಇದು ಒಬ್ಬ ದಲಿತ ಯುವತಿಯ ಸಾವಲ್ಲ. ಬಿ.ಜೆ.ಪಿ ಸರ್ಕಾರದ ಆಡಳಿತದಲ್ಲಿ ಧಗಧಗಿಸುತ್ತಿರುವ ಬೆಂಕಿಯ ಸಂವಿಧಾನವನ್ನು ಸುಟ್ಟು ಹಾಕುತ್ತಿರುವ ಚಿತ್ರ ಈ ಯುವತಿ ಸಾವಿನಲ್ಲಿ ಕಾಣುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಇಂತಹ ಅನೇಕ ಘಟನೆಗಳು ಉತ್ತರಪ್ರದೇಶದಲ್ಲಿ ಪದೇ ಪದೇ ನಡೆಯುತ್ತಿರುವುದರಿಂದ ಕೂಡಲೇ ಇಂತಹ ಘಟನೆಗಳನ್ನು ತಡೆಯುವಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ವಿಫಲವಾಗಿರುವುದರಿಂದ ರಾಷ್ಟ್ರಪತಿಗಳು ಅಲ್ಲಿನ ಸರ್ಕಾರವನ್ನು ವಜಾಗೊಳಿಸಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಎಲ್ಲಾ ಸಮುದಾಯದ ವರ್ಗದವರು ಜೀವನ ನಡೆಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ದಸಂಸ ಮನವಿ ಮಾಡಿದೆ.